Asianet Suvarna News Asianet Suvarna News

ಉತ್ತರ ಕನ್ನಡ: ಅಂಕೋಲಾ ಕೋಟೆಯಲ್ಲಿ ಕ್ರಿಯಾಶಕ್ತಿಯ ವಿಗ್ರಹ ಪತ್ತೆ!

ಇಲ್ಲಿನ ಕೋಟೆಯ ಆವರಣದಲ್ಲಿ ವಿಜಯನಗರದ ಆರಂಭದಲ್ಲಿ ಪ್ರಭಾವಶಾಲಿಯಾಗಿದ್ದ ಕ್ರಿಯಾಶಕ್ತಿ ಯತಿಯ ವಿಗ್ರಹವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಪತ್ತೆಮಾಡಿದ್ದಾರೆ.

Idol of Kriya Shakti discovered in Ankola fort at uttara kannada rav
Author
First Published Jul 9, 2023, 5:21 AM IST

ಅಂಕೋಲಾ (ಜು.9): 

ಇಲ್ಲಿನ ಕೋಟೆಯ ಆವರಣದಲ್ಲಿ ವಿಜಯನಗರದ ಆರಂಭದಲ್ಲಿ ಪ್ರಭಾವಶಾಲಿಯಾಗಿದ್ದ ಕ್ರಿಯಾಶಕ್ತಿ ಯತಿಯ ವಿಗ್ರಹವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಪತ್ತೆಮಾಡಿದ್ದಾರೆ.

ಕೋಟೆಯ ಹನುಮಂತ ದೇವಾಲಯದ ಪಕ್ಕದಲ್ಲಿ ನಿತ್ಯವೂ ಪೂಜಿಸಲ್ಪಡುತ್ತಿರುವ ಪ್ರಾಚೀನ ವಿಗ್ರಹಗಳಲ್ಲಿ ಇದು ಸಿಕ್ಕಿದೆ. ಈವರೆಗೂ ಕ್ರಿಯಾಶಕ್ತಿಯ ವಿಗ್ರಹ ಎಲ್ಲಿಯೂ ಪತ್ತೆಯಾಗಿಲ್ಲ. ಇದೇ ಪ್ರಥಮ ಬಾರಿ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ: ಕುಂದಾಪುರದಲ್ಲಿ ಅಪರೂಪದ ಶಾಸನ ಪತ್ತೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಂಶೋಧಕ ಶ್ಯಾಮಸುಂದರ ಗೌಡ, ಅಂಕೋಲೆಯಲ್ಲಿ ಕ್ರಿ.ಶ. 1425ರವರೆಗೆ ವಿಜಯನಗರದ ಆಡಳಿತ ಪ್ರಭಾವಶಾಲಿಯಾಗೇ ಇತ್ತು. ಈ ಅವಧಿಯಲ್ಲಿ ಅರಸರು ಕೆತ್ತಿಸಿದ ಒಟ್ಟು 22 ಶಾಸನಗಳು ಅಂಕೋಲೆಯಲ್ಲಿವೆ. ಅವುಗಳಲ್ಲಿ 4 ಶಾಸನ ನೇರವಾಗಿ ಕ್ರಿಯಾಶಕ್ತಿಗೆ ದಾನ ನೀಡಿರುವುದನ್ನು ದಾಖಲಿಸುತ್ತವೆ. ಅಂದರೆ ಆ ಅವಧಿಯಲ್ಲಿ ಅಂಕೋಲೆಯಲ್ಲಿ ಕ್ರಿಯಾಶಕ್ತಿಯ ಪ್ರಭಾವ ಗಾಢವಾಗಿತ್ತು. ಈ ಹಿನ್ನೆಲೆ ಕೋಟೆಯಲ್ಲಿರುವ ಶಿಲ್ಪ ಕ್ರಿಯಾಶಕ್ತಿಯೆಂದು ಗುರುತಿಸಿದ್ದೇನೆ.

ಈ ವಿಗ್ರಹದಿಂದ ವಾಯವ್ಯಕ್ಕೆ 3 ಕಿಮೀ ಅಂತರದಲ್ಲಿ ಭಾವಿಕೇರಿ ಹಾಗೂ ದಕ್ಷಿಣಕ್ಕೆ 6 ಕಿಮೀ ಅಂತರದಲ್ಲಿ ಬೆಳಸೆ ಗ್ರಾಮದಲ್ಲಿ ಒಂದೇ ದಿನ ಹೊರಡಿಸಿದ (ಶಕ ವರ್ಷ 1284, ಪ್ಲವ ಸಂವತ್ಸರ ಕಾರ್ತಿಕ ಶುದ್ಧ 1, ಆದಿವಾರ) ಬುಕ್ಕರಾಯನ ಶಾಸನಗಳಿವೆ. ಈ ಎರಡೂ ಶಾಸನದಲ್ಲಿ ಬುಕ್ಕರಾಯನ ಅಧಿಕಾರಿ ಬಸವಯ್ಯ ದಂಡನಾಯಕನು ಕ್ರಿಯಾಶಕ್ತಿ ಯತೀಶ್ವರರಿಗೆ ಭೂಮಿದಾನ ನೀಡಿದ್ದನ್ನು ವಿವರಿಸಲಾಗಿದೆ.

ಶೃಂಗೇರಿ, ರಂಭಾಪುರಿ ಮೊದಲಾದ ಶೈವ ಪರಂಪರೆಯ ಶ್ರೀಗಳು ಈಗಲೂ ನವರಾತ್ರಿಯಲ್ಲಿ ಕಿರೀಟ, ಚಿನ್ನಾಭರಣ ಧರಿಸಿ ರಾಜದರ್ಬಾರು ನಡೆಸುತ್ತಾರೆ. ಅಂಕೋಲೆಯಲ್ಲಿ ಇರುವ ವಿಗ್ರಹದ ಕಿರೀಟ ಮತ್ತು ನವರಾತ್ರಿಯಲ್ಲಿ ಶೃಂಗೇರಿಯ ಶ್ರೀಗಳು ತೊಡುವ ಕಿರೀಟ ವಿನ್ಯಾಸದಲ್ಲಿ ಬಹಳ ಸಾಮ್ಯತೆಯಿದೆ.

ಉಡುಪಿಯ ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ!

ಈ ವಿಗ್ರಹ ಸಿಕ್ಕಿರುವ ಸ್ಥಳದಿಂದ ಕೇವಲ 1 ಕಿಮೀ ಅಂತರದಲ್ಲಿರುವ ಕುಂಬಾರಕೇರಿಯ ಕದಂಬೇಶ್ವರ ದೇವಸ್ಥಾನದಲ್ಲಿ ದೊರೆತಿರುವ ಕ್ರಿ.ಶ. 997ರ 2ನೇ ತೈಲಪನ ತಾಮ್ರ ಶಾಸನದಲ್ಲಿ ‘ಸಿವರಾಸಿ ಜೀಯರ ಕಾಲಂ ಕಚ್ರ್ಛಿ’ ಎಂಬ ಉಲ್ಲೇಖವಿದೆ. ಇದು ಅಂಕೋಲೆಯ ಭಾಗದಲ್ಲಿ ಕಾಳಾಮುಖ ಯತಿಗಳು ಸ್ಥಾನಾಚಾರ್ಯರಾಗಿದ್ದರು ಎನ್ನುವುದಕ್ಕೆ ಆಧಾರವಾಗಿದೆ. ವಿಜಯನಗರದ ಆರಂಭ ಕಾಲದಲ್ಲಿ ಬಹಳಷ್ಟುಯತಿ ಪರಂಪರೆಯಲ್ಲಿ ಕ್ರಿಯಾಶಕ್ತಿ ಬಿರುದಿನ ಅಥವಾ ಹೆಸರಿನ ಒಬ್ಬ ಮುಖ್ಯಸ್ಥನಿರುತ್ತಿದ್ದ ಎಂಬ ಸಂಗತಿಯನ್ನು ವಿದ್ವಾಂಸರು ದಾಖಲಿಸಿದ್ದಾರೆ. ಇದನ್ನು ಗಮನಕ್ಕೆ ತೆಗೆದುಕೊಂಡು ಈ ವಿಗ್ರಹವನ್ನು ‘ಕ್ರಿಯಾಶಕ್ತಿ ಯತಿ’ಯ ವಿಗ್ರಹ ಎಂದು ಗುರುತಿಸಿದ್ದೇನೆ.

ಶ್ಯಾಮಸುಂದರ ಗೌಡ, ಅಂಕೋಲಾ ವಿಗ್ರಹದ ಶೋಧಕ

Follow Us:
Download App:
  • android
  • ios