ದುಬೈ ಎಕ್ಸ್ಫೋದಲ್ಲಿ ಕರ್ನಾಟಕದ ಕರಕುಶಲ ಉತ್ಪನ್ನಗಳಿಗೆ ಭರ್ಜರಿ ಬೇಡಿಕೆ: ರೂಪಾ
* ಶ್ರೀಗಂಧದ ಕೆತ್ತನೆ, ಚನ್ನಪಟ್ಟಣದ ಆಟಿಕೆಗಳಿಗೆ ಭಾರೀ ಬೇಡಿಕೆ
* ಕಾವೇರಿ ಬ್ರಾಂಡ್ ಬೇರೆಡೆ ಪ್ರಾರಂಭಿಸುವಂತೆ ಮನವಿ
* ಪ್ರಾಂಚೈಸಿ ತೆಗೆದುಕೊಳ್ಳಲು ಉತ್ಸುಕ
ಬೆಂಗಳೂರು(ಅ.25): ದುಬೈನಲ್ಲಿ ನಡೆದ ಪ್ರತಿಷ್ಠಿತ ‘ದುಬೈ ಎಕ್ಸ್ಫೋ’ದಲ್ಲಿ(Dubai Expo) ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್(Roopa Moudgil) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದುಬೈ ಎಕ್ಸ್ಫೋದಲ್ಲಿ ನಿಗಮದಿಂದ ಮಳಿಗೆ ಪ್ರಾರಂಭಿಸಲಾಗಿದ್ದು, ಮಳಿಗೆಯಲ್ಲಿ ಶ್ರೀಗಂಧದ ಕೆತ್ತನೆ, ಚನ್ನಪಟ್ಟಣದ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಈ ವಸ್ತುಗಳಿಗೆ ದೇಶ ವಿದೇಶಗಳ ಅನೇಕ ಪ್ರವಾಸಿಗರು(Tourists) ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಅನೇಕ ಮಂದಿ ಕಾವೇರಿ(Kaveri) ಬ್ರಾಂಡ್ಅನ್ನು ಬೇರೆಡೆ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಹಲವಾರು ಮಂದಿ ಪ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಹರ್ಷದಾಯಕ ವಿಚಾರ ಎಂದು ತಿಳಿಸಿದ್ದಾರೆ.
ಪ್ರತಿಷ್ಠಿತ ದುಬೈ ಎಕ್ಸ್ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!
ದುಬೈ ಎಕ್ಸ್ಪೋದಲ್ಲಿ ಕರ್ನಾಟಕ(Karnataka) ರಾಜ್ಯ ಕರಕುಶಲ(Handicrafts) ಅಭಿವೃದ್ಧಿ ನಿಗಮದ ಮಳಿಗೆ ಒಂದು ವಾರದ ಕಾಲ ಪ್ರದರ್ಶನ ಮತ್ತು ವಹಿವಾಟು ನಡೆಸಿತ್ತು. ಈ ಸಂದರ್ಭದಲ್ಲಿ ದುಬೈ, ಯುಎಇಯ ಎಕ್ಸ್ಫೋ 2020(UAE Expo 2020) ರಲ್ಲಿ ಭಾಗವಹಿಸುವ 192ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಿಗೆ ಶ್ರೀಮಂತ ಪ್ರವಾಸೋದ್ಯಮ(Tourism) ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ ವ್ಯಾಪಾರ ಮತ್ತು ಹೂಡಿಕೆ ಸಾಮರ್ಥ್ಯ ಪ್ರದರ್ಶಿಸಿತು ಎಂದಿದ್ದಾರೆ.