Asianet Suvarna News Asianet Suvarna News

Hubli: ರಾಷ್ಟ್ರೀಯ ಯುವ ಜನೋತ್ಸವದಲ್ಲಿ 5 ದಿನ ಸಿರಿಧಾನ್ಯ ವೈಭವ

ರಾಜ್ಯದಲ್ಲಿ 20.55 ಲಕ್ಷ ಟನ್ ಸಿರಿ ಧಾನ್ಯ ಉತ್ಪಾದನೆ
20 ಮಳಿಗೆಗಳಲ್ಲಿ ಸಿರಿ ಧಾನ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಆರೋಗ್ಯ ವರ್ಧಕ ಉತ್ಪನ್ನಗಳಿಗೆ ವಿಶೇಷ ಮನ್ನಣೆ

Hubli 5 days of Sridhanya Vibhava in National Youth Festival sat
Author
First Published Jan 9, 2023, 7:56 PM IST

ಹುಬ್ಬಳ್ಳಿ (ಜ.09): ಜನವರಿ 12 ರಿಂದ 16 ರ ವರೆಗೆ ಹುಬ್ಬಳ್ಳಿ- ಧಾರವಾಡದ ಅವಳಿ‌ನಗರದ   26 ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಭರದ ಸಿದ್ದತೆಗಳು‌ ನಡೆದಿದ್ದು, ಯುವಜನತೋತ್ಸವದಲ್ಲಿ. ಭಾಷೆ, ಕಲೆ‌ ಸಂಸ್ಕೃತಿ, ವಿನಿಮಯದ ಜೊತೆಗೆ ಸಂಪ್ರದಾಯಿ ತಳಿಗಳ ಸಿರಿ ಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.  

'ಸದೃಢ ದೇಹವಿದ್ದರೆ ಸದೃಢ ಮನಸ್ಸಿರುತ್ತದೆ, ದೃಢ ಮನಸ್ಸಿನಿಂದ ಅಸಾಧಾರಣ ಸಾಧನೆ ಸಾಧ್ಯ' ಎಂಬ ನಾಣ್ಣುಡಿಯಂತೆ ಯುವ ಜನಾಂಗದ ಆರೋಗ್ಯ ರಕ್ಷಣೆಗೆ ಸಿರಿ ಧಾನ್ಯಗಳ ಮಹತ್ವ ಕುರಿತು ಮೇಳದಲ್ಲಿ ವಿಶೇಷ ಬೆಳಕು ಚೆಲ್ಲಲಾಗುತ್ತಿದೆ. ಸಿರಿಧಾನ್ಯಗಳ ತವರೂರಾದ ಕರ್ನಾಟಕದ ವೈಶಿಷ್ಟ್ಯಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಯುವ ಜನೋತ್ಸವದಲ್ಲಿ ಸಿರಿ ಧಾನ್ಯಕ್ಕೆ ವಿಶೇಷ ಒತ್ತು ನೀಡಿದ್ದು, ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳು ಮತ್ತು ಗಣ್ಯರಿಗೆ ಸಿರಿ ಧಾನ್ಯಗಳ ವಿಶೇಷತೆಗಳನ್ನು ಪರಿಚಯಿಸುಲಾಗುತ್ತಿದೆ. ಕರ್ನಾಟಕ ಸಿರಿ ಧಾನ್ಯಗಳ ಕಣಜವಾಗಿದ್ದು,  ಇಲ್ಲಿನ ಉತ್ಪನ್ನಗಳ ಮಾರಾಟಕ್ಕೆ 20 ಕ್ಕೂ ಹೆಚ್ಚು ವಿಶೇಷ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿನಿಧಿಗಳು ಮತ್ತು ಗಣ್ಯರಿಗೆ ಪೌಷ್ಟಿಕ ಆಹಾರದ ಪರಿಚಯ ಮಾಡಲಾಗುತ್ತಿದೆ. ತುಮಕೂರು, ಉತ್ತರ ಕನ್ನಡ, ವಿಜಯಪುರ, ರಾಯಾಪುರದ ಸಿರಿಧಾನ್ಯಗಳ ವಿಶೇಷ ಸಹ ಉತ್ಪನ್ನಗಳ ಉತ್ಪಾದಕರು ತಮ್ಮ ವಿಶೇಷತೆಗಳೊಂದಿಗೆ ಈಗಾಗಲೇ ಆಗಮಿಸಿದ್ದಾರೆ.

National Youth Festival 2023: ಯವಜನೋತ್ಸವ ವೆಬ್‌ ಪೋರ್ಟಲ್‌ಗೆ ಚಾಲನೆ

ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ: 
ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಈ ವರ್ಷವನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಕರ್ನಾಟಕ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಿರಿ ಧಾನ್ಯ ವಲಯದಲ್ಲಿ ನವೋದ್ಯಮಗಳಿಗೂ ಸಹ ಹೆಚ್ಚಿನ ಅವಕಾಶಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೇ ಕೃಷಿ ಸಮುದಾಯಕ್ಕೂ ಅನುಕೂಲವಾಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದೇ ಆಶಯದಿಂದ ಯುವ ಜನೋತ್ಸವದಲ್ಲಿ  ಸಿರಿಧಾನ್ಯ ಉತ್ಸವ ಏರ್ಪಡಿಸಲಾಗಿದೆ.

20.55 ಲಕ್ಷ ಟನ್ ಸಿರಿ ಧಾನ್ಯ ಉತ್ಪಾದನೆ:
ಸಿರಿ ಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯದ 16.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯುತ್ತಿದ್ದು, 8.46 ಲಕ್ಷ ಹೆಕ್ಟೇರ್ ನಲ್ಲಿ ರಾಗಿ, 6.16 ಲಕ್ಷ ಹೆಕ್ಟೇರ್ ನಲ್ಲಿ ಜೋಳ, 1.48 ಲಕ್ಷ ಹೆಕ್ಟೇರ್ ಸಜ್ಜೆ, 0.29 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಿರುಧಾನ್ಯ, ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಒಟ್ಟಾರೆ 20.55 ಲಕ್ಷ ಟನ್ ಸಿರಿ ಧಾನ್ಯ ಉತ್ಪಾದನೆಯಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಸಿರಿ ಧಾನ್ಯಗಳನ್ನು ಭವಿಷ್ಯದ ಆಹಾರವನ್ನಾಗಿಸಲು ವ್ಯಾಪಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ಇದನ್ನು ಸ್ಮಾರ್ಟ್ ಆಹಾರವಾಗಿ ಪ್ರಚಾರ ಮಾಡುತ್ತಿದ್ದು, ರಾಷ್ಟ್ರೀಯ ಯುವ ಜನೋತ್ಸವದಲ್ಲಿ ರಾಜ್ಯದ ಸಿರಿ ಧಾನ್ಯದ ಸಿರಿಯನ್ನು ವೈಭದಿಂದ ಪ್ರದರ್ಶಿಸಲಾಗುತ್ತಿದೆ.  ಸಿರಿ ಧಾನ್ಯಗಳು ಪೌಷ್ಠಿಕ ಆಹಾರವಾಗಿದ್ದು, ಅಪೌಷ್ಟಿಕತೆಯಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲಿದೆ. ಹೀಗಾಗಿ ಇವು ಗ್ರಾಹಕರಿಗೆ ಉತ್ತಮವಾಗಿವೆ, ಪರಿಸರಕ್ಕೆ ಒಳ್ಳೆಯದು, ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ.

ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯಗಳ ಮಳಿಗೆ:
ರಾಜ್ಯದ ಹಲವೆಡೆ ಬೆಳೆಯುತ್ತಿರುವ ಹಾರಕ. ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯಗಳ ಮಳಿಗೆಗಳನ್ನು ಆಕರ್ಷಣೀಯವಾಗಿ ರೂಪಿಸಲಾಗುತ್ತಿದೆ. ಸಿರಿ ಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಸರ್ಕಾರ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, 9 ಪ್ರಾಂತೀಯ ಒಕ್ಕೂಟಗಳ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ. ರೈತ ಸಿರಿ ಯೋಜನೆ ಮೂಲಕ ಸಿರಿ ಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಬೇಡಿಕೆ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಹೆಚ್ಚಿನ ಬೆಲೆ ದೊರಕಿಸಿಕೊಡಲು ಸಿರಿಧಾನ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

National Youth Festival 2023: ಯುವಜನೋತ್ಸವ: 4 ವರ್ಷಗಳ ಬಳಿಕ ಮತ್ತೆ ಶೃಂಗಾರಗೊಳ್ಳುತ್ತಿದೆ ಧಾರವಾಡ!

ಯುವಜನೋತ್ಸವದಲ್ಲಿ 5 ದಿನ ಸಿರಿ ಧಾನ್ಯ ಉತ್ಸವ:
ಜನವರಿ 20 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿ ಧಾನ್ಯ ಮೇಳ ಆಯೋಜಿಸುತ್ತಿದ್ದು, ಬರುವ ತಿಂಗಳು ಬೆಂಗಳೂರಿನಲ್ಲಿ ಭಾರತ ಅಧ್ಯಕ್ಷತೆ ವಹಿಸಿರುವ ಜಿ.20 ಶೃಂಗ ಸಭೆಯ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳ ಸಭೆಯ ಅಂಗವಾಗಿ ಸಿರಿಧಾನ್ಯ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ಹುಬ್ಬಳ್ಳಿ- ಧಾರವಾಡದ ಯುವಜನೋತ್ಸವದಲ್ಲಿ 5 ದಿನ ಸಿರಿ ಧಾನ್ಯ ಉತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.

Follow Us:
Download App:
  • android
  • ios