ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಿದ ರೀತಿ, ನೇಹಾ ಹಿರೇಮಠ ಪ್ರಕರಣದಲ್ಲಿ ಕೊಲೆ ಆರೋಪಿ ಫಯಾಝ್‌ಗೆ ಜಾಮೀನು ನೀಡಬೇಕು ಎಂದು ಆರೋಪಿ ವಕೀಲರು ವಾದ ಮಂಡಿಸಿದ್ದಾರೆ ಎಂದು ನೇಹಾ ತಂದೆ ಆಕ್ರೋಶ ಹೊರಹಾಕಿದ್ದಾರೆ. ನಾಳೆ ಜಾಮೀನು ಆದೇಶ ಹೊರಬೀಳಲಿದೆ.

ಹುಬ್ಬಳ್ಳಿ (ಆ.03) ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣ ಕರ್ನಾಟಕದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕಾಲೇಜು ಕ್ಯಾಂಪಸ್‌ಗೆ ನುಗ್ಗಿದ ಆರೋಪಿ ಫಯಾಜ್ ಸಾರ್ವಜನಿಕವಾಗಿ ಚಾಕು ಇರಿದು ನೇಹಾ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಭಾರಿ ಪ್ರತಿಭಟನೆಗಳು ನಡೆದಿತ್ತು. ಇದೀಗ ಆರೋಪಿ ಫಯಾಜ್ ತನ್ನ ಜಾಮೀನಿಗೆ ಹೊಸ ವಾದ ಮುಂದಿಟ್ಟಿರುವುದಾಗಿ ನೇಹಾ ತಂದೆ ಹೇಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಿದಂತೆ ನೇಹಾ ಹಿರೇಮಠ ಪ್ರಕರಣದಲ್ಲಿ ತನಗೂ ಜಾಮೀನು ನೀಡಿ ಎಂಬ ವಾದವನ್ನು ಕೋರ್ಟ್ ಮುಂದಿಟ್ಟಿದ್ದಾರೆ ಎಂದು ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಹೇಳಿದ್ದಾರೆ. ಆದರೆ ನ್ಯಾಯಾಲಯದ ಮೇಲೆ ಭರವಸೆ ಇದೆ. ಆರೋಪಿಗೆ ಜಾಮೀನು ನೀಡುವ ಸಾಧ್ಯತೆ ಇಲ್ಲ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ನಾಳೆ ನೇಹಾ ಹಿರೇಮಠ ಕೊಲೆ ಪ್ರಕರಣದ ಜಾಮೀನು ಅರ್ಜಿ ಆದೇಶ

ನೇಹಾ ಹಿರೇಮಠ ಪ್ರಕರಣದಲ್ಲಿ ಆರೋಪಿ ಫಯಾಜ್ ಜೈಲಿನಲ್ಲಿದ್ದಾನೆ. ಆದರೆ ಕಳೆದ ಹಲವು ದಿನಗಳಿಂದ ಆರೋಪಿ ಫಯಾಜ್ ಜಾಮೀನಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನೇಹಾ ಹಿರೇಮಠ ತಂದೆ ಪರ ವಕೀಲರು ಹಾಗೂ ಆರೋಪಿ ಫಯಾಜ್ ಪರ ವಕೀರಲು ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ. ನಾಳೆ (ಆ.04) ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿಯ ಜಾಮೀನು ಅರ್ಜಿಯ ಆದೇಶ ಹೊರಬೀಳಲಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ಬಳಿಕ ನಾಳೆಗೆ ಆದೇಶ ಕಾಯ್ದಿರಿಸಿದೆ.

ಆರೋಪಿ ವಿರುದ್ಧ ಆಕ್ರೋಶ ಹೊರಹಾಕಿದ ನೇಹಾ ತಂದೆ

ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ವಾಮ ಮಾರ್ಗದ ಮೂಲಕ ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯ ಮಗಳಿಗೆ ನ್ಯಾಯಕೊಡಿಸುವ ಭರವಸೆ ಇದೆ ಎಂದು ನೇಹಾ ತಂದೆ ಹೇಳಿದ್ದಾರೆ. ಆರೋಪಿ ಫಯಾಜ್ ಪರ ವಕೀಲರು ಜಾಮೀನಿಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಎಳೆದು ತಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಲಾಗಿದೆ. ಇದರಂತೆ ಫಯಾಜ್‌ಗೂ ಜಾಮೀನು ನೀಡಿ ಎಂಬ ವಾದವನ್ನು ಫಯಾಝ್ ಪರ ವಕೀಲು ಮಂಡಿಸಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಇಲ್ಲಿ ಆರೋಪಿ ಫಯಾಜ್‌ಗೆ ಜಾಮೀನು ನೀಡಿ ಎಂದು ವಾದಿಸಿದ್ದಾರೆ. ದರ್ಶನ್ ಪ್ರಕರಣ ಮುಂದಿಟ್ಟು ಜಾಮೀನು ಕೇಳುವುದು ಸರಿಯಲ್ಲ. ದರ್ಶನ್ ನಟನೆ ಮಾದರಿಯಾಗಲಿ, ಆದರೆ ಇಂತಹ ವಿಚಾರಗಳಲ್ಲಿ ಎಂದು ನೇಹಾ ತಂದೆ ಅಸಮಧಾನ ಹೊರಹಾಕಿದ್ದಾರೆ.

ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ನೇಹಾ ತಂದೆ

ನೇಹಾ ಹಿರೇಮಠ ಕೊಲೆ ಆರೋಪಿಗೆ ಕೋರ್ಟ್ ಜಾಮೀನು ನೀಡುವ ಸಾಧ್ಯತೆ ಇಲ್ಲ. ನಮ್ಮ ವಕೀಲರು ಸಮರ್ಥ ರೀತಿ ವಾದ ಮಂಡಿಸಿದ್ದಾರೆ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ನೇಹಾ ಹಿರೇಮಠ ತಂದೆ ನಿರಂಜನ್ ಹೇಳಿದ್ದಾರೆ.

ಎಪ್ರಿಲ್ 18, 2024ರಂದು ನಡೆದಿದ್ದ ಕೊಲೆ

ಕಾಲೇದು ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರೀತಿಯಲ್ಲಿ ಬಲೆಯಲ್ಲಿ ಬೀಳಿಸಲು ಆರೋಪಿ ಫಯಾಜ್ ಭಾರಿ ರಣತಂತ್ರ ಹೂಡಿದ್ದ. ಆದರೆ ಯಾವುದು ಫಲಿಸದಾಗ, ನೇರವಾಗಿ ನೇಹಾ ಹಿರೇಮಠ ಮೇಲೆ ದಾಳಿ ನಡೆಸಿದ್ದ. ಕಾಲೇಜು ಕ್ಯಾಂಪಸ್‌ಗೆ ನುಗ್ಗಿದ ಆರೋಪಿ ಫಯಾಜ್ ಚಾಕುವಿನಿಂದ ನೇಹಾ ಮೇಲೆ ದಾಳಿ ಮಾಡಿದ್ದ. ಗಂಭೀರ ಗಾಯಗೊಂಡ ನೇಹಾ ಹಿರೇಮಠ ಮೃತಪಟ್ಟಿದ್ದಳು. ಈ ಪ್ರಕರಣ ಕರ್ನಾಟಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.