2019ರಲ್ಲಿ ನವಲಗುಂದ ಬಳಿ ನಡೆದ ರಸ್ತೆ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದ. ಈ ಸಾವಿಗೆ ಕೆಎಸ್ಸಾರ್ಟಿಸಿ ಪರಿಹಾರ ನೀಡಬೇಕಿತ್ತು. ಈವರೆಗೂ ಪರಿಹಾರ ಹಣ ನೀಡದೇ ಇರುವ ಹಿನ್ನಲೆಯಲ್ಲಿ ಬಸ್‌ಅನ್ನು ಜಪ್ತಿ ಮಾಡುವಂತೆ ಹುಬ್ಬಳಿ ಕೋರ್ಟ್‌ ಆದೇಶ ನೀಡಿತ್ತು. 

ಹುಬ್ಬಳ್ಳಿ (ಜುಲೈ 15): ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೋರ್ವ ಅಪಘಾತದಲ್ಲಿ ಮೃತಪಟ್ಟಾಗ ನೀಡಬೇಕಾದ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಜಪ್ತಿ ವಾರೆಂಟ್ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬಸ್‌ ಅನ್ನು ಜಪ್ತಿ ಮಾಡಿ ಹುಬ್ಬಳ್ಳಿ ಕೋರ್ಟ್‌ ಎದುರು ತಂದು ನಿಲ್ಲಿಸಿದ್ದಾರೆ. 2019ರಲ್ಲಿ ನವಲಗುಂದ ಹುಬ್ಬಳ್ಳಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು. ಮೃತ ಚಾಲಕನ ತಾಯಿ ಶಾಂತವ್ವ ಕರವೀರಪ್ಪ ಕುಲಕರ್ಣಿ ಇವರು ನಗರದ ಎರಡನೇ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ 28 ಲಕ್ಷ ಪರಿಹಾರ ಅದಕ್ಕೆ ಶೇಕಡ.6 ಬಡ್ಡಿ ಹಾಕಿ ನೀಡುವಂತೆ ಸೂಚಿಸಿತ್ತು. ಆದರೇ ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸದೇ ವಿಳಂಬ ಧೋರಣೆ ಅನುಸರಿಸಿ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಪ್ತಿ ವಾರಂಟ್ ಅನ್ವಯ ಶುಕ್ರವಾರ ನ್ಯಾಯಾಲಯದ ಸಿಬ್ಬಂದಿ ಕೆಎ 17,ಎಫ್ 1945 ವಾಹನ ಜಪ್ತಿ ಮಾಡಿ ತಂದು ಕೋರ್ಟ್‌ ಎದುರು ನಿಲ್ಲಿಸಿದ್ದಾರೆ. ಮೃತ ಪ್ರಯಾಣಿಕನ ಪರ ಅರುಣ ಪಾಟೀಲ ವಕಾಲತ್ತು ವಹಿಸಿದ್ದರು. ಒಟ್ಟಿನಲ್ಲಿ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಂಡು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ.

ಇದನ್ನೂ ಓದಿ: ನಿವೃತ್ತಿಗೆ ಗೌರವದ ವಿದಾಯ: ಕಚೇರಿಯ ವಾಹನದ ಡ್ರೈವರ್‌ಗೆ ಚಾಲಕನಾದ ಸಾರಿಗೆ ಅಧಿಕಾರಿ!

Add Asianetnews Kannada as a Preferred SourcegooglePreferred