ಎಷ್ಟು ದಿನ ರೆಸಾರ್ಟ್ ವಾಸ?: ಬಿಜೆಪಿ ಶಾಸಕರಿಗೇ ಗೊತ್ತಿಲ್ಲ!
ಹರ್ಯಾಣಾದ ಐಟಿಸಿ ರೆಸಾರ್ಟ್ನಲ್ಲಿ ಬಿಜೆಪಿ ಶಾಸಕರು| ಎಷ್ಟುದಿನ ವಾಸ ಎಂಬುದು ತಿಳಿದಿಲ್ಲ: ಶೆಟ್ಟರ್
ನವದೆಹಲಿ[ಜ.16]: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಸರ್ಕಾರ ಸೆಳೆಯಬಹುದು ಎಂಬ ಭೀತಿಯಿಂದ ಬಿಜೆಪಿಯ ಎಲ್ಲ ಶಾಸಕರು ದಿಲ್ಲಿಗೆ ಸಮೀಪವಿರುವ ಹರ್ಯಾಣದ ನೂಹ್ ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ಮಂಗಳವಾರ ಎರಡನೇ ದಿವಸ ಕಳೆದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ 104 ಮಂದಿ ಶಾಸಕರು ನೂಹ್ ಜಿಲ್ಲೆಯ ಹಸನ್ಪುರ ತೌರುನಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿ ಸೋಮವಾರದಿಂದ ಉಳಿದುಕೊಂಡಿದ್ದಾರೆ.
ಈ ಕುರಿತು ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ನಾವು ಎಷ್ಟುದಿನಗಳ ಕಾಲ ರೆಸಾರ್ಟ್ನಲ್ಲೇ ಇರಬೇಕಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಆದರೆ, ಮೂರರಿಂದ ನಾಲ್ಕು ಶಾಸಕರು ವೈಯಕ್ತಿಕ ಕಾರಣಗಳನ್ನು ನೀಡಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಬೀಳಿಸಲು ಯತ್ನಿಸುತ್ತಿಲ್ಲ: ಮುರಳೀಧರ್ ರಾವ್
ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿಲ್ಲ. ಆಂತರಿಕ ಕಲಹದಿಂದಾಗಿ ಸರ್ಕಾರ ತಾನೇ ತಾನಾಗಿ ಪತನಗೊಳ್ಳಲಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಪಿ. ಮುರಳೀಧರ್ ರಾವ್ ಮಂಗಳವಾರ ಹೇಳಿದ್ದಾರೆ. ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಕಾಂಗ್ರೆಸ್ನಲ್ಲೇ ಆಂತರಿಕ ಸಮಸ್ಯೆ ಇದ್ದು, ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಮುನ್ನಡೆಸಲು ಬಯಸಿದ್ದಾರೆ. ಇದು ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ಆರು ತಿಂಗಳಿನಿಂದ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ’ ಎಂದು ಹೇಳಿದ್ದಾರೆ.