ರಾಮಚಂದ್ರಾಪುರ ಗೋಶಾಲೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಅಗ್ನಿ ದುರಂತದಲ್ಲಿ ಕೊಟ್ಟಿಗೆ ಭಸ್ಮವಾಗಿ ಎರಡು ಹಸುಗಳು ಬೆಂಕಿಗಾಹುತಿಯಾಗಿವೆ

ಹೊಸನಗರ[ಜ.08]: ದೇಸಿ ಗೋವು ಸಾಕಣೆಗೆ ಹೆಸರಾಗಿರುವ ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ಗೋಶಾಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೊಟ್ಟಿಗೆ ಭಸ್ಮವಾಗಿ ಎರಡು ಹಸುಗಳು ಬೆಂಕಿಗಾಹುತಿಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಮದುಘಾ ಹೆಸರಿನ ಗೋಶಾಲೆಯ ಅಟ್ಟ(ಮಾಳಿಗೆ)ದಲ್ಲಿ ಹುಲ್ಲು ಸಂಗ್ರಹಿಸಲಾಗಿತ್ತು. ಭಾನುವಾರ ಸಂಜೆ ಈ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ನೋಡುನೋಡುತ್ತಿದ್ದಂತೆ ಬೆಂಕಿ ಇಡೀ ಕೊಟ್ಟಿಗೆ ಆವರಿಸಿದೆ. ಅಲ್ಲಿದ್ದ ಕೆಲಸಗಾರರು ತಕ್ಷಣವೇ ಕೊಟ್ಟಿಗೆಯಲ್ಲಿದ್ದ ಹಸುಗಳ ಹಗ್ಗವನ್ನು ಕಳಚಿದರು. ಆದರೂ ಎರಡು ಹಸುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದ್ದರಿಂದ ಅದೃಷ್ಟವಶಾತ್‌ ಇತರೆಡೆ ಬೆಂಕಿ ಹರಡಲಿಲ್ಲ.

ಈ ಅಗ್ನಿ ಅವಘಡದಿಂದ ಸುಮಾರು 5 ಲಕ್ಷ ರು. ನಷ್ಟಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೇಗೆ ಬೆಂಕಿ ತಗುಲಿದೆ ಎಂದು ಇನ್ನೂ ಗೊತ್ತಾಗಿಲ್ಲ. ಆದರೆ ಕೊಟ್ಟಿಗೆಯಲ್ಲಿ ಹುಲ್ಲು ಇದ್ದುದರಿಂದ ಕ್ಷಿಪ್ರವಾಗಿ ಅಗ್ನಿ ಆವರಿಸಿಕೊಂಡಿದೆ.