ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ, ಎರಡು ಘಟನೆಗಳು ದರ್ಶನ್ ಜೈಲುವಾಸದಲ್ಲಿ ಪ್ರಮುಖ ಘಟನೆಯಗಳಾಗಿದೆ. ಕೋರ್ಟ್ ಆವರಣದಲ್ಲಿ ನಡೆದ ಪ್ರಮುಖ ಬೆಳವಣಿಗೆ ಏನು?
ಬೆಂಗಳೂರು (ನ.03) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ನಟ ದರ್ಶನ್, ಪವಿತ್ರ ಗೌಡಾ ಹಾಗೂ ಇತರ ಆರೋಪಿಗಳ ವಿರುದ್ದ ಸೆಷನ್ಸ್ ಕೋರ್ಟ್ ದೋಷಾರೋಪ ನಿಗದಿ ಮಾಡಿದೆ. ಫ್ರೇಮ್ ಮಾಡಿರುವ ಚಾರ್ಜ್ ನಿರಾಕರಿಸಿರುವ ಕಾರಣ ನವೆಂಬರ್ 10 ರಿಂದ ಕೋರ್ಟ್ನಲ್ಲಿ ವಿಚಾರಣೆ ಆರಂಭಗೊಳ್ಳಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಇಂದು ಕೋರ್ಟ್ಗೆ ಹಾಜರಾಗಿದ್ದಾರೆ. ನ್ಯಾಯಾಧೀಶರು ಆರೋಪಿಗಳ ವಿರುದ್ಧದ ದೋಷಾರೋಪ ಓದಿದ್ದಾರೆ. ಕೋರ್ಟ್ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಕಳೆದ 81 ದಿನಗಳ ಬಳಿಕ ನಟ ದರ್ಶನ್ ಮನೆ ಊಟ ಮಾಡಿದ್ದಾರೆ. ಮತ್ತೊಂದೆಡೆ 2 ತಿಂಗಳ ಬಳಿಕ ದರ್ಶನ್-ಪವಿತ್ರಾ ಗೌಡ ಭೇಟಿಯಾಗಿದ್ದಾರೆ.
ಜಡ್ಜ್ ಅನುಮತಿ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲೇ ದರ್ಶನ್ ಊಟ
ನಟ ದರ್ಶನ್ ಕೋರ್ಟ್ಗೆ ಹಾಜರಾಗುತ್ತಿರುವ ಕಾರಣ ಪತ್ನಿ ವಿಜಯಲಕ್ಷ್ಮಿ ದರ್ಶನ್ಗಾಗಿ ಮನೆಯಿಂದ ಊಟ ತಯಾರಿಸಿ ಕಳುಹಿಸಿದ್ದರು. ಆದರೆ ನಟ ದರ್ಶನ್ಗೆ ಮನೆ ಊಟ ನೀಡಬಹುದೇ ಎಂದು ದರ್ಶನ್ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಈ ವೇಳೆ ದರ್ಶನ್ ಊಟ ಮಾಡಿಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಬಸ್ಸಿನಲ್ಲಿ ಊಟ ಕೊಟ್ಟಿದ್ದೇವು. ಆದರೆ ದರ್ಶನ್ ಊಟ ಮಾಡಿಲ್ಲ ಎಂದು ಪೊಲೀಸರು ನ್ಯಾಯಾಧೀಶರಿಗೆ ವಿವರಣೆ ನೀಡಿದ್ದಾರೆ. ಮನೆ ಊಟ ಪರಿಶೀಲಿಸಿ ನೀಡುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ. ಜಡ್ಜ್ ಅನುಮತಿ ಹಿನ್ನಲೆಯಲ್ಲಿ ನಟ ದರ್ಶನ್ಗೆ ಕೋರ್ಟ್ ಆವರಣದಲ್ಲಿ ಮನೆ ಊಟ ನೀಡಲಾಗಿದೆ. ಬರೋಬ್ಬರಿ 81 ದಿನಗಳ ಬಳಿಕ ನಟ ದರ್ಶನ್ ಮನೆ ಊಟ ಸವಿದಿದ್ದಾರೆ.
ದರ್ಶನ್ ಮನೆ ಊಟಕ್ಕೆ ಕಂಡೀಷನ್
ನ್ಯಾಯಾಧೀಶರು ನಟ ದರ್ಶನ್ಗೆ ಮನೆ ಊಟಕ್ಕೆ ಅನುಮತಿಸುವಾಗ ಕಂಡೀಷನ್ ಹಾಕಿದ್ದಾರೆ. ಇವತ್ತಿನ ಒಂದು ಹೊತ್ತಿನ ಊಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಇದೇ ಅನುಮತಿ ನೆಪದಲ್ಲಿ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮನೆ ಊಟ ಅನುಮತಿ ಸಿಕ್ಕ ಬೆನ್ನಲ್ಲೇ ದರ್ಶನ್ ಕೋರ್ಟ್ ಆವರಣದಲ್ಲಿ ಊಟ ಮಾಡಿದ್ದಾರೆ.
2 ತಿಂಗಳ ಬಳಿಕ ದರ್ಶನ್ ಪವಿತ್ರಾ ಗೌಡ ಮುಖಾಮುಖಿ
ಜಾಮೀನು ರದ್ದು ಬಳಿಕ ಜೈಲು ಸೇರಿದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿಯಾಗಿರಲಿಲ್ಲ. ಜಾಮೀನು ರದ್ದಾಗಿ ಇಬ್ಬರು ಜೈಲು ಸೇರಿದ ಬಳಿಕ ಭೇಟಿ ಆಗರಲಿಲ್ಲ. ಇದೀಗ ಕೋರ್ಟ್ನಲ್ಲಿ ಇವರಿಬ್ಬರು ಮುಖಾಮುಖಿಯಾಗಿದ್ದಾರೆ. ಎರಡು ತಿಂಗಳ ಬಳಿಕ ಇರಿಬ್ಬರು ಭೇಟಿಯಾದ್ದಾರೆ.
ದೋಷಾರೋಪ ನಿಗಧಿ
ನಟ ದರ್ಶನ್, ಪವಿತ್ರಾ ಗೌಡ ಹಾಗೂ ಒಟ್ಟು 17 ಆರೋಪಿಗಳ ವಿರುದ್ದ 57ನೇ ಸೆಷನ್ಸ್ ಕೋರ್ಟ್ ದೋಷಾರೋಪ ನಿಗಧಿ ಮಾಡಿದೆ. ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್ನಿಂದ ಕೆರಳಿದ ಪವಿತ್ರಾ ಗೌಡ ಹಾಗೂ ನಟ ದರ್ಶನ್, ಇಬ್ಬರು ಸಂಚು ರೂಪಿಸಿ ಕಿಡ್ನಾಪ್ ಮಾಡಿದ ಘಟನೆಯಿಂದ ಸಂಪೂರ್ಣ ಪ್ರಕರಣವನ್ನು ಕೋರ್ಟ್ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ. ಸಂಚು ರೂಪಿಸಿ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆ ತಂದು ಮಾರಣಾಂತಿಕ ಹಲ್ಲೆ ಮಾಡಲಾಗದೆ. ಕರೆಂಟ್ ಶಾಕ್ ಸೇರಿದಂತೆ ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಬಳಿಕ ಇತರ ಆರೋಪಿಗಳ ಜೊತೆ ಸೇರಿ ಸಾಕ್ಷಿ ನಾಶ ಮಾಡಲು ಯತ್ನಿಸಲಾಗಿದೆ. ಇಷ್ಟೇ ಅಲ್ಲ ಆರೋಪವನ್ನು ಬೇರೆಯವರ ಮೇಲೆ ಹೊರಿಸಲು ಪ್ರಯತ್ನಿಸಲಾಗಿದೆ ಎಂದು ಕೋರ್ಟ್ ಪ್ರಕರಣದ ದೋಷಾರೋಪ ಪಟ್ಟಿ ಓದಿದೆ. ಆರೋಪಿಗಳು ಆರೋಪ ನಿರಾಕರಿಸಿದ್ದಾರೆ.
