ಕನ್ನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರಾಕರಣೆ ಆದೇಶಕ್ಕೆ ತಡೆ, ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್, ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದೆ.

ಬೆಂಗಳೂರು (ನ.25) ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ಹೇರಿದ್ದ ನಿರ್ಬಂಧ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಪರ ವಿರೋಧಗಳು ಹೆಚ್ಚಾಗಿತ್ತು. ಬಿಜೆಪಿ ಸೇರಿದಂತೆ ಹಲವು ಮಠ, ಸಂಘ ಸಂಸ್ಥೆಗಳು ಕನ್ನೇರಿ ಶ್ರೀಗಳ ನಿರ್ಬಂಧ ತೆರವುಗೊಳಿಸಬೇಕು ಎಂದು ಹೋರಾಟ ಮಾಡಿತ್ತು. ವಿಜಯಪುರ, ಬಾಗಲಕೋಟೆ ಹಾಗೂ ಕೊನೆಗ ಧಾರವಾಡ ಪ್ರವೇಶಕ್ಕೂ ಕನ್ನೇರಿ ಶ್ರೀಗಳಿಗೆ ಅನುಮತಿ ನಿರಾಕರಿಸಲಾಗಿತ್ತು. ಶ್ರೀಗಳು ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರಾಕರಿಸಿದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಧಾರವಾಡ ಫೀಠ ತಡೆ ನೀಡಿದೆ. ಧಾರವಾಡ ಪ್ರವೇಶ ನಿರ್ಬಂಧ ಆದೇಶ ತೆರವುಗೊಳಿಸಿದೆ.

ಕಳೆದ ನವೆಬಂರ್ 7 ರಂದು ಅಣ್ಣಿಗೇರಿ ತಾಲೂಕಿನಲ್ಲಿ ಕಣ್ಣೀರಿ ಶ್ರೀಗಳಿಗೆ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಲಿಂಗಾಯತ ಸಮುದಾಯಕ್ಕೆ ಕಣ್ಣೀರಿ ಶ್ರೀಗಳು ಅವಮಾನಿಸಿದ್ದಾರೆ ಹೀಗಾಗಿ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಲಿಂಗಾಯತ ಸಂಘಟನೆಗಳು ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದವು.ಹೀಗಾಗಿ ಜಿಲ್ಲಾಧಿಕಾರಿಗಳು ಕನ್ನೇರಿ ಶ್ರೀಗಳಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಈ ಆದೇಶ ಪ್ರಶ್ನಿಸಿ ಶ್ರೀಗಳು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಜಿಲ್ಲಾಧಿಕಾರಿಗಳು ಹೊರಡಿಸಿದ್ದ ನಿರ್ಬಂಧ ತೆರವುಗೊಳಿಸಿ ಆದೇಶಿಸಿದೆ. ಆ ಮೂಲಕ ಕಣ್ಣೀರಿ ಶ್ರೀಗಳ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ನಿರ್ಬಂಧ ಆದೇಶ ತೆರವುಗೊಳಿಸಿದೆ.

ಜಿಲ್ಲಾಧಿಕಾರಿ ದಿವ್ಯಪ್ರಭು ನೀಡಿದ ಆದೇಶ

ನವೆಂಬರ್ 5, 6 ಮತ್ತು 7 ರಂದು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕನ್ನೇರಿ ಶ್ರೀಗಳು ಪಾಲ್ಗೊಳ್ಳಬೇಕಿತ್ತು. ಆದರೆ ಲಿಂಗಾಯತ ಸಮುದಾಯಕ್ಕೆ ಅವ್ಯಾಚ್ಯವ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಜಾಗತಿಕ‌ ಲಿಂಗಾಯತ ಮಹಾಸಭಾದ‌ ವತಿಯಿಂದ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಈ ಮನವಿ ಪರಿಶೀಲಿಸಿದ ಕನೇರಿ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೆ ಆಗಮಿಸಲು‌ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ನೀಡಿದ್ದರು.

ವಿಜಯಪುರ ಜಿಲ್ಲಾ ನಿರ್ಬಂಧ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್

ವಿಜಯಪುರ ಜಿಲ್ಲಾ ಪ್ರವೇಶಕ್ಕೂ ಕನ್ನೇರಿ ಶ್ರೀಗಳಿಗೆ ನಿರ್ಬಂಧ ಹೇರಿದ್ದ ನಿರ್ಧಾರ ಪ್ರಶ್ನಿಸಿ ಶ್ರೀಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಶ್ರೀಗಳಿಗೆ ಹಿನ್ನಡೆಯಾಗಿತ್ತು. ಅಕ್ಟೋಬರ್ 16 ರಿಂದ ಡಿಸೆಂಬರ್ 14ರ ವರೆಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟೇಲಿರಿದ್ದ ಶ್ರೀಗಳಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಹೈಕೋರ್ಟ್ ನಿರ್ಧಾರದ ವಿರುದ್ದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲೂ ಹಿನ್ನಡೆಯಾಗಿತ್ತು.