ತಗ್ಗಿದ ನೆರೆ, ತಗ್ಗದ ಭೀತಿ: ಮತ್ತೆ ಭಾರೀ ಮಳೆ, 24 ತಾಸು ಡೇಂಜರ್!
ತಗ್ಗಿದ ನೆರೆ, ತಗ್ಗದ ಭೀತಿ| ಮತ್ತೆ ಭಾರೀ ಮಳೆ, ‘ಮಹಾ’ ಡ್ಯಾಂಗಳಿಂದ ನೀರು ಬಿಡುವ ಆತಂಕ| 24 ತಾಸು ಆತಂಕಕಾರಿ: ಕಲಬುರಗಿ ಡೀಸಿ| ರಕ್ಷಣೆಗೆ ಅರೆಸೇನೆ ಸನ್ನದ್ಧ
ಬೆಂಗಳೂರು(ಅ.19): ಭೀಮಾ ನದಿ ನೀರಿನಮಟ್ಟನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರಿನಲ್ಲಿ ಪ್ರವಾಹದಾತಂಕ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಭೀಮೆಯ ಪ್ರವಾಹದಮಟ್ಟನಾಲ್ಕು ಅಡಿಯಷ್ಟುತಗ್ಗಿದ್ದರೂ ಮಹಾರಾಷ್ಟ್ರದ ಜಲಾಶಯಗಳಿಂದ ಮತ್ತೆ ನೀರು ಬಿಡುಗಡೆ ಮಾಡುವ ಆತಂಕ ಮತ್ತು ಮುಂದಿನ ಮೂರ್ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರ ಸ್ಥಳಾಂತರ, ರಕ್ಷಣಾ ಕಾರ್ಯವನ್ನು ಭಾನುವಾರ ಮತ್ತಷ್ಟುಚುರುಕುಗೊಳಿಸಲಾಗಿದೆ.
ರಕ್ಷಣಾ ಕಾರ್ಯಕ್ಕಾಗಿ ಕಲಬುರಗಿಗೆ ಶನಿವಾರವೇ ಅರೆಸೇನಾಪಡೆ ಕರೆಸಿಕೊಳ್ಳಲಾಗಿದ್ದು, ಈಗಾಗಲೇ ಯೋಧರು ಜಲಾವೃತ ಗ್ರಾಮಗಳಿಂದ ಮತ್ತು ಮುಳುಗಡೆಯ ಆತಂಕದಲ್ಲಿರುವ ಗ್ರಾಮಗಳಿಂದ ಜನರ ಸ್ಥಳಾಂತರಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಭೀಮೆಯ ಜತೆಗೆ ಕೃಷ್ಣಾ ನದಿ ನೀರಿನಮಟ್ಟವೂ ಏರಿಕೆಯಾಗುವ ಆತಂಕ ಹಿನ್ನೆಲೆಯಲ್ಲಿ ರಾಯಚೂರಿನ 17 ಗ್ರಾಮಗಳಿಗೆ ಮುಳುಗಡೆಯ ಭೀತಿ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಗೂ ಅರೆಸೇನಾ ಪಡೆಯ ತಂಡವೊಂದನ್ನು ಕರೆಸಿಕೊಳ್ಳಲಾಗಿದೆ. ಇನ್ನು ಯಾದಗಿರಿಯಲ್ಲೂ ಅರೆಸೇನಾ ಪಡೆಯ ಮತ್ತೊಂದು ತಂಡ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ ನಿಂತಿದೆ.
33 ಸಾವಿರ ದಾಟಿದ ಸಂತ್ರಸ್ತರ ಸಂಖ್ಯೆ: ಕಲಬುರಗಿಯ 157 ಸೇರಿ ಭೀಮೆಯ ಪ್ರವಾಹದಿಂದಾಗಿ ಮೂರು ಜಿಲ್ಲೆಗಳ 200ಕ್ಕೂ ಹೆಚ್ಚು ಗ್ರಾಮಗಳು ತತ್ತರಿಸಿದ್ದು, 33 ಸಾವಿರ ಮಂದಿಗೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಇವರಲ್ಲಿ ಬಹುತೇಕರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಕಲಬುರಗಿಯೊಂದರಲ್ಲೇ 19 ಸಾವಿರ ಮಂದಿ ಸಂತ್ರಸ್ತರಿದ್ದು, ಪ್ರವಾಹದಬ್ಬರ ಕಡಿಮೆಯಾಗಲಿ ಎಂದು ದೇವರಲ್ಲಿ ಮೊರೆ ಇಡುತ್ತಿದ್ದಾರೆ.
24 ಗಂಟೆ ಆತಂಕಕಾರಿ: ಕಲಬುರಗಿಯಲ್ಲಿ ಪ್ರವಾಹದಿಂದ ಅತೀ ಹೆಚ್ಚು ಬಾಧಿತ ಜೇವರ್ಗಿ, ಅಫಜಲ್ಪುರ ತಾಲೂಕುಗಳಲ್ಲಿ ನೀರಿನಮಟ್ಟನಾಲ್ಕೈದು ಅಡಿ ಇಳಿಮುಖವಾಗಿದ್ದರೂ ಜಿಲ್ಲಾಡಳಿತ ಸಂತ್ರಸ್ತರಿಗೆ ಇನ್ನೂ ಕೆಲದಿನ ಸಂತ್ರಸ್ತರಿಗೆ ಗ್ರಾಮಗಳತ್ತ ಮುಖಮಾಡದಂತೆ ಸೂಚಿಸಿದೆ. ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಆತಂಕ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ಮತ್ತೆ ನೀರು ಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳು ಜಿಲ್ಲೆಯ ಪಾಲಿಗೆ ಆತಂಕಕಾರಿಯಾಗಿರಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸಾ$್ನ ಅಭಿಪ್ರಾಯಪಟ್ಟಿದ್ದಾರೆ. ಪರಿಸ್ಥಿತಿ ಸುಧಾರಣೆಯಾಗುವವರೆಗೆ ಸಂತ್ರಸ್ತರು ಸುರಕ್ಷಿತ ಸ್ಥಳದಲ್ಲೇ ಇರಿ ಎಂದು ಸಲಹೆ ನೀಡಿದ್ದಾರೆ. ಏತನ್ಮಧ್ಯೆ, ಅರೆಸೇನಾ ಸಿಬ್ಬಂದಿಯೊಂದಿಗೆ ಪರಿಹಾರ ಕಾರ್ಯವನ್ನು ಚುರುಕುಗೊಳಿಸಿರುವ ಜಿಲ್ಲಾಡಳಿತ ಉಡಚಣ ಗ್ರಾಮವೊಂದರಲ್ಲೇ 250ಕ್ಕೂ ಹೆಚ್ಚು ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಿದೆ.
ಕಲಬುರಗಿಯಂತೆ ವಿಜಯಪುರದ ಪ್ರವಾಹಪೀಡಿತ ತಾರಾಪುರ, ದೇವಣಗಾಂವ ಗ್ರಾಮಗಳಲ್ಲೂ ನೀರಿನ ಮಟ್ಟನಿಧಾನವಾಗಿ ಇಳಿಕೆಯಾಗುತ್ತಿದೆ. ಆದರೆ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಮಾತ್ರ ನೀರಿನಮಟ್ಟಏರಿಕೆಯಾಗಿದ್ದು, ಜನ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಈ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿದ್ದು, 300ಕ್ಕೂ ಹೆಚ್ಚು ಮಂದಿಯನ್ನು ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದವರು ಸೇರಿಕೊಂಡು ರಕ್ಷಣೆ ಮಾಡಿದ್ದಾರೆ. ಯಾದಗಿರಿಯಲ್ಲಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ನಾಲ್ಕಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ರಾಯಚೂರಿನಲ್ಲಿ ಕೃಷ್ಣಾನದಿ ನೀರಿನ ಮಟ್ಟಏರಿಕೆಯಾಗುವ ಆತಂಕದಿಂದಾಗಿ 12 ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ.