ರಾಜ್ಯದಲ್ಲಿ ಡೆಂಘೀ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸುವಂತೆ ಸೂಚನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘೀ ನಿಯಂತ್ರಣ ಕ್ರಮ ಗಳ ಜತೆಗೆ ಝೀಕಾ ವೈರಸ್ ಬಗ್ಗೆಯೂ ಎಚ್ಚ ರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು/ಹುಣಸೂರು(ಜು.05): ಡೆಂಘಿ ಜ್ವರಕ್ಕೆ ಆರೋಗ್ಯ ಅಧಿಕಾರಿಯೊಬ್ಬರು ಬಲಿಯಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಹೊಸೂರು ಗೇಟ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗುರುಪುರ ಉಪ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದ ನಾಗೇಂದ್ರ (32) ಮೃತಪಟ್ಟವರು. 

Add Asianetnews Kannada as a Preferred SourcegooglePreferred

ಅವರಿಗೆ ಪತ್ನಿ ಇದ್ದಾರೆ. ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರಬಾಧಿತರಾಗಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಮೂಲತಃ ಇವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಾಣೆ ಗ್ರಾಮದವರು. ಮೃತರ ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮದಲ್ಲಿ ನೆರವೇರಿತು.

ಡೆಂಗ್ಯೂ ಟೆಸ್ಟ್‌ಗೆ ಬೆಲೆ ನಿಗದಿಪಡಿಸಿದ ಸರ್ಕಾರ: ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿದ ಸಚಿವ ದಿನೇಶ್ ಗುಂಡೂರಾವ್

ಡೆಂಘೀ ಹೆಚ್ಚಿರುವ ಕಡೆ ಫೀವರ್ ಕ್ಲಿನಿಕ್

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸುವಂತೆ ಸೂಚನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಘೀ ನಿಯಂತ್ರಣ ಕ್ರಮ ಗಳ ಜತೆಗೆ ಝೀಕಾ ವೈರಸ್ ಬಗ್ಗೆಯೂ ಎಚ್ಚ ರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆ, ಡೆಂಘೀ ಹೆಚ್ಚಿರುವ ಪ್ರದೇಶಗಳನ್ನು ಪತ್ತೆ ಹಚ್ಚಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೆಂಗ್ಳೂರಲ್ಲಿ ಡೆಂಘೀ ಆರ್ಭಟ: ಲಾರ್ವಾ ನಾಶಕ್ಕೆ ಮನೆ ಮನೆ ತಪಾಸಣೆ..!

ಡೆಂಘೀ ಹೆಚ್ಚಿರುವ ಪ್ರದೇಶದಲ್ಲಿ ಯಾರಿಗೆ ಜ್ವರ ಕಂಡು ಬಂದರೂ ಕಡ್ಡಾಯವಾಗಿ ಡೆಂಘೀ ಪರೀಕ್ಷೆಗೊಳಪಡಿಸ ಬೇಕು. ಆರಂಭದಲ್ಲಿಯೇ ಡೆಂಘೀ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯವಿದೆ. ಒಂದು ವೇಳೆ ವಿಳಂಬವಾದರೆ ಸಾವುಗಳು ಸಂಭವಿಸಲಿವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು ಎಂದು ಹೇಳಿದರು. ಡೆಂಘೀ ಮತ್ತು ಝೀಕಾ ವೈರಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ನೀಡಬೇಕು. ವೈದ್ಯಕೀಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಘೀ ಕುರಿತು ಅರಿವು ಮೂಡಿಸಬೇಕು. ಲಾರ್ವಾ ಉತ್ಪತ್ತಿಯಾಗು ವುದು ಕಂಡು ಬಂದರೆ, ತಕ್ಷಣವೇ ಅದನ್ನು ನಾಶಪಡಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯವರು ವಾರಕೊಮ್ಮೆ ಫೀಲ್ಡ್ಗಿಳಿದು ಕೆಲಸ ಮಾಡಬೇಕು. ಡೆಂಘೀ ಪರೀಕ್ಷೆಗೆ ನಿಗದಿ ಮಾಡಿರುವ ದರವನ್ನು ಕಡ್ಡಾಯವಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನು, ಈಡಿಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕಂಡು ಬರಲಿದ್ದು, ನೆರೆ ರಾಜ್ಯ ಕೇರಳದಲ್ಲಿ ಝೀಕಾ ವೈರಸ್ ಕಂಡುಬಂದಿರುವು ದರಿಂದ ರಾಜ್ಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಕೇಸ್ ಪತ್ತೆಯಾಗಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ ಎಚ್ಚರಿಕೆ ವಹಿಸಬೇಕು ಎಂದರು.