Asianet Suvarna News Asianet Suvarna News

ಸಾರ್ವಜನಿಕ ಸೇವಕರ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಆದೇಶಿಸುವ ಅಧಿಕಾರ ಸರ್ಕಾರಕ್ಕಿಲ್ಲ

  • ಸರ್ಕಾರದ ಕಂಪನಿ, ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳ ಉದ್ಯೋಗಿಗಳ ವಿರುದ್ಧ ಲೋಕಾಯುಕ್ತ ವಿಚಾರಣೆ
  • ವಿಚಾರಣೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ 
  • ರಾಜ್ಯ ಸರ್ಕಾರದ ಅಧಿಕಾರದ ಬಗ್ಗೆ ಹೈಕೋರ್ಟ್‌ನಿಂದ ಮಹತ್ವದ ಆದೇಶ 
government does not have the  Authority to prosecute order  against public servants snr
Author
Bengaluru, First Published Aug 10, 2021, 7:47 AM IST

 ಬೆಂಗಳೂರು (ಆ.10):  ಸರ್ಕಾರದ ಕಂಪನಿ, ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳ ಉದ್ಯೋಗಿಗಳ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ದುರ್ನತಡೆ ಆರೋಪ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಆದೇಶಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ನ ಮೂವರು ನಿವೃತ್ತ ಅಧಿಕಾರಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಹಂಚೇಟಿ ಸಂಜೀವ್‌ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಸೆಕ್ಷನ್‌ 2(6) ಪ್ರಕಾರ ಕರ್ನಾಟಕ ಸರ್ಕಾರದ ನಾಗರಿಕ ಸೇವೆಗಳ ಸದಸ್ಯರು, ನಾಗರಿಕ ಹುದ್ದೆ ಹೊಂದಿರುವ ಅಥವಾ ರಾಜ್ಯ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಸೇವೆ ಸಲ್ಲಿಸುತ್ತಿರುವವರನ್ನು ‘ಸರ್ಕಾರಿ ನೌಕರರು’ ಎನ್ನಲಾಗುತ್ತದೆ. ಕಾಯ್ದೆಯ ಸೆಕ್ಷನ್‌ 2(12)(ಜಿ) ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾಯ್ದೆಯಡಿ ಸ್ಥಾಪಿಸಲ್ಪಟ್ಟಅಥವಾ ಅದರ ಅಧೀನದ, ರಾಜ್ಯ ಸರ್ಕಾರದಿಂದ ನಡೆಸಲ್ಪಡುವ, ನಿಯಂತ್ರಿಸಲ್ಪಡುವ, ಹಣಕಾಸು ಪಡೆಯುವ ನಿಗಮ, ಕಂಪನಿ ಕಾಯ್ದೆಯ-1956ರ ಅಡಿಯಲ್ಲಿ ನೋಂದಣಿಯಾದ ಸಂಸ್ಥೆ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-196ರ ಅಡಿಯಲ್ಲಿ ನೋಂದಣಿಯಾದ ಸಂಘ, ಸಹಕಾರಿ ಸಂಸ್ಥೆ ಮತ್ತು ವಿಶ್ವವಿದ್ಯಾಲಯದ ಉದ್ಯೋಗಿಗಳು ‘ಸಾರ್ವಜನಿಕ ಸೇವಕ’ ಆಗುತ್ತಾರೆ.

Surname ಬಳಸಲು ತಂದೆ ಮಕ್ಕಳಿಗೆ ಒತ್ತಾಯಿಸುವಂತಿಲ್ಲ: ದೆಹಲಿ ಹೈಕೋರ್ಟ್‌!

ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ಅಧಿನಿಯಮಗಳು-1957ರ ನಿಯಮ 14-ಎ (ಸಿಸಿಎ ನಿಯಮ) ಪ್ರಕಾರ ‘ಸರ್ಕಾರಿ ನೌಕರ’ ವಿರುದ್ಧದ ದುರ್ನಡತೆ ವಿರುದ್ಧ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಚಾರಣೆಗೆ ಸರ್ಕಾರಕ್ಕೆ ಆದೇಶಿಸಲು ಆವಕಾಶವಿದೆ. ಸಿಎಎ ನಿಯಮ 14-ಎ ಯೊಂದಿಗೆ ನಿಯಮ 2(ಡಿ) ಮತ್ತು ನಿಯಮ 3 ಅನ್ನು ಸಂಯೋಜಿಸಿಕೊಂಡು ಓದಿದಾಗ, ಸರ್ಕಾರದ ಕಂಪನಿ, ನಿಗಮ ಮತ್ತು ಶಾನಸಬದ್ಧ ಸಂಸ್ಥೆಗಳ ಉದ್ಯೋಗಿಗಳು ‘ಸಾರ್ವಜನಿಕ ಸೇವಕರು’ ಎಂದು ಪರಿಗಣಿಸಲ್ಪಡುತ್ತಾರೆ. ಸಾರ್ವಜನಿಕ ಸೇವಕರಿಗೆ ಸಿಸಿಎ ನಿಯಮಗಳನ್ನು ಅನ್ವಯಿಸಲು ಆಗುವುದಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಸಾರ್ವಜನಿಕ ಸೇವಕರ ವಿರುದ್ಧ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ವಿಚಾರಣೆ ನಡೆಸಲು ಸಿಸಿಎ ಅಧಿನಿಯಮಗಳಲ್ಲಿ ನಿರ್ದಿಷ್ಟಕಾನೂನು ಹಾಗೂ ನಿಯಮ ಇಲ್ಲ. ಇಂತಹ ಸಂದರ್ಭದಲ್ಲಿ ‘ಸಾರ್ವಜನಿಕ ಸೇವಕರ’ ವಿರುದ್ಧದ ಆರೋಪಗಳನ್ನು ಲೋಕಾಯುಕ್ತ ವಿಚಾರಣೆಗೆ ಸರ್ಕಾರ ಒಪ್ಪಿಸಲಾಗದು. ಜತೆಗೆ, ಸಾರ್ವಜನಿಕ ಸೇವಕರ ವಿಚಾರದಲ್ಲಿ ಸರ್ಕಾರ ಶಿಸ್ತು ಪ್ರಾಧಿಕಾರವೂ ಆಗಿರುವುದಿಲ್ಲ. ಶಿಸ್ತು ಕ್ರಮ ಜರುಗಿಸಲು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರಿಂದ ಪಡೆದ ವರದಿಯನ್ನು ‘ವೃಂದ ಮತ್ತು ನೇಮಕಾತಿ’ ಅಧಿನಿಯಮಗಳಡಿ ಸಾರ್ವಜನಿಕ ಸೇವಕ ಉದ್ಯೋಗ ನಿರ್ವಹಿಸುತ್ತಿರುವ ನಿರ್ದಿಷ್ಟ‘ಸಕ್ಷಮ ಪ್ರಾಧಿಕಾರ’ಕ್ಕೆ ರವಾನಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಬೇಕಿದ್ದರೆ ನಿಯಮ ಬದಲಿಸಿ :  ಅಲ್ಲದೆ ಸಿಸಿಎ ನಿಯಮ 3ರಿಂದ ಹೊರಗುಳಿದಿರುವ ಎಲ್ಲ ಸರ್ಕಾರದ ಕಂಪನಿಗಳು, ಶಾಸನಬದ್ಧ ಸಂಸ್ಥೆಗಳು ಮತ್ತು ನಿಗಮಗಳು ತನ್ನ ‘ವೃಂದ ಮತ್ತು ನೇಮಕ’ ನಿಯಮಗಳಲ್ಲಿ ಸಿಸಿಎ ಅಧಿನಿಯಮ 14-ಎ ಅನ್ನು ಅಥವಾ ಅದಕ್ಕೆ ಹೋಲುವ ನಿಯಮ ಅಳವಡಿಸುವ ಕಾರ್ಯವನ್ನು ಶಾಸಕಾಂಗ ಮಾಡಬೇಕು. ಇದರಿಂದ ಲೋಕಾಯುಕ್ತ ವಿಚಾರಣೆಗೆ ಆದೇಶಿಸುವ ವಿಚಾರದಲ್ಲಿ ಉಂಟಾಗುವ ವ್ಯಾಜ್ಯಗಳನ್ನು ತಪ್ಪಿಸಬಹುದು ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ಸಾರ್ವಜನಿಕ ಸೇವಕರು ಯಾರು?

ರಾಜ್ಯದಲ್ಲಿ ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾಯ್ದೆಯಡಿ ಸ್ಥಾಪಿಸಲ್ಪಟ್ಟಅಥವಾ ಅದರ ಅಧೀನದ, ರಾಜ್ಯ ಸರ್ಕಾರದಿಂದ ನಡೆಸಲ್ಪಡುವ, ನಿಯಂತ್ರಿಸಲ್ಪಡುವ, ಹಣಕಾಸು ಪಡೆಯುವ ನಿಗಮ, ಕಂಪನಿ ಕಾಯ್ದೆಯ ಅಡಿಯಲ್ಲಿ ನೋಂದಣಿಯಾದ ಸಂಸ್ಥೆ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಸಂಘ, ಸಹಕಾರಿ ಸಂಸ್ಥೆ ಮತ್ತು ವಿಶ್ವವಿದ್ಯಾಲಯದ ಉದ್ಯೋಗಿಗಳು.

Follow Us:
Download App:
  • android
  • ios