ಶ್ರೀಗಳ ಬಾಲ್ಯದಲ್ಲೇ ಗೋಸಾಯಿ ನುಡಿದಿದ್ದರು ಆ ಭವಿಷ್ಯ!
ಅಪ್ಪನ ವಿರೋಧವಿದ್ದರೂ ಸನ್ಯಾಸತ್ವ| ಸನ್ಯಾಸ ಸ್ವೀಕರಿಸಿದ ಮೇಲೂ ಇದನ್ನೆಲ್ಲ ಬಿಟ್ಟು ಮನೆಗೆ ಬಂದುಬಿಡು ಅನ್ನುತ್ತಿದ್ದರು ತಂದೆ!
ಓದಿನಲ್ಲಿ ಚುರುಕಿದ್ದ ಮಗ ಸನ್ಯಾಸಿಯಾಗುತ್ತಾನೆಂದರೆ ಯಾವ ಅಪ್ಪ ತಾನೇ ಸುಮ್ಮನಿದ್ದಾನು? ಸಹಿಸಿಕೊಂಡಾನು ಹೇಳಿ! ಶಿವಕುಮಾರ ಸ್ವಾಮೀಜಿಗಳ ವಿಚಾರದಲ್ಲೂ ಇದೇ ಆಯ್ತು. ಮಠದ ಉತ್ತರಾಧಿಕಾರಿಯಾಗಿದ್ದ ಶ್ರೀ ಮರುಳಾರಾಧ್ಯರ ನಿಧನದ ಬಳಿಕ ಶ್ರೀಮಠದ ಆಗಿನ ಹಿರಿಯ ಶ್ರೀಗಳಾದ ಉದ್ದಾನ ಶಿವಯೋಗಿಗಳ ದೃಷ್ಟಿ ಶಿವಣ್ಣ ಅವರ ಮೇಲೆ ಬೀಳುತ್ತದೆ. ಮುರುಳಾರಾಧ್ಯರ ಆತ್ಮೀಯರೂ ಆಗಿದ್ದ, ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಿವಣ್ಣ ಅವರನ್ನು ಶಿವಯೋಗಿಗಳು ಕರೆದು ಮಠದ ಉತ್ತರಾಧಿಕಾರಿಯಾಗುತ್ತೀಯಾ ಎಂದು ಕೇಳುತ್ತಾರೆ. ಶಿವಣ್ಣರವರಿಗೂ ಸನ್ಯಾಸದ ಹಾದಿ ಇಷ್ಟವಿದ್ದ ಕಾರಣ ತಕ್ಷಣ ಒಪ್ಪಿಗೆ ನೀಡುತ್ತಾರೆ.
ಆಗ ಅವರ ಕಾಲೇಜು ಗುರುಗಳಾದ ಎ.ಆರ್. ಕೃಷ್ಣಶಾಸ್ತ್ರಿಗಳು ಹರಸಿ ಕಳಿಸುತ್ತಾರೆ. ಚೆನ್ನಾಗಿ ಓದಿದ ಮಗ ಸನ್ಯಾಸಿ ಆಗುವುದು ತಂದೆ ಹೊನ್ನಪ್ಪರವರಿಗೆ ಸುತರಾಂ ಇಷ್ಟವಿರಲಿಲ್ಲ. ಬೆಂಗಳೂರಿನ ತೋಟದಪ್ಪ ಹಾಸ್ಟೆಲ್ಗೆ ಬಂದು ಮಗನನ್ನು ಸನ್ಯಾಸಿಯಾಗಬೇಡ ಎಂದು ಸಾಕಷ್ಟು ಬಾರಿ ಒಲಿಸಲು ಪ್ರಯತ್ನಿಸುತ್ತಾರೆ. ಆದರೆ, ಇದ್ಯಾವುದಕ್ಕೂ ಶಿವಣ್ಣ ಕರಗುವುದಿಲ್ಲ. ಸನ್ಯಾಸದ ಹಾದಿಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾಗಿ ತಂದೆಗೆ ಮನವರಿಕೆ ಮಾಡಿಕೊಡುತ್ತಾರೆ. ವಿಶೇಷವೆಂದರೆ ಸನ್ಯಾಸತ್ವ ಸ್ವೀಕರಿಸಿದ ಬಳಿಕವೂ ಶಿವಣ್ಣ ಶಿಕ್ಷಣ ಮುಂದು ವರಿಸುತ್ತಾರೆ. ಬೆಂಗಳೂರಿಗೆ ವಾಪಸಾಗಿ ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯ ಬದ್ಧವಾಗಿ ಪಾಲಿಸುತ್ತ ಹಾಗೂ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ವ್ಯಾಸಂಗ ಮುಗಿಸುತ್ತಾರೆ.
ಬೇಗ ಉತ್ತರಾಧಿಕಾರ ನೀಡಿ ಎಂದು ಪತ್ರ:
ಸನ್ಯಾಸತ್ವ ಸ್ವೀಕರಿಸಿದ ಮೇಲೂ ಪೂರ್ವಾಶ್ರಮದ ತಂದೆ ಹೊನ್ನೇಗೌಡರು ಬಂದು ವಿರಕ್ತಾಶ್ರಮವವ ನ್ನು ತ್ಯಜಿಸಿ ತಮ್ಮೊಂದಿಗೆ ಹಿಂತಿರುಗಬೇಕೆಂದು ಆಗಾಗ ಶಿವಕುಮಾರ ಶ್ರೀಗಳನ್ನು ಒತ್ತಾಯಿಸುತ್ತಿ ದ್ದರು. ಹೀಗಾಗಿ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಗುರುಗಳಾದ ಉದ್ದಾನ ಶಿವಯೋಗಿಗಳಿಗೆ ಕಾಗದ ಬರೆದು ಬೇಗನೆ ತಮಗೆ ವಿಧ್ಯುಕ್ತವಾಗಿ ಉತ್ತ ರಾಧಿಕಾರ ನೀಡಿಬಿಟ್ಟರೆ ಪೂರ್ವಾಶ್ರಮದ ಸಂಬಂಧಿಗಳ ಕಾಟ ತಪ್ಪುತ್ತದೆ. ಪದೇ ಪದೇ ಅವರು ನನಗೆ ತೊಂದರೆ ಕೊಡುತ್ತಿದ್ದಾರೆ ಎಂಬುದನ್ನು ವಿನಯ ಪೂರ್ವಕವಾಗಿ ತೋಡಿಕೊಂಡರು. ಶಿವಕುಮಾರ ಸ್ವಾಮಿಗಳ ಮಾನಸಿಕ ದುಗುಡ, ಅದರ ಹಿಂದಿನ ಸದಾಶಯ ಅರ್ಥ ಮಾಡಿಕೊಂಡ ಉದ್ದಾನ ಶಿವಯೋಗಿಗಳು 03/03/1930ರಂದು ವಿಧ್ಯುಕ್ತವಾಗಿ ಶಿವಕುಮಾರ ಸ್ವಾಮಿಗಳಿಗೆ ನಿರಂಜನ ಪಟ್ಟಾಧಿಕಾರ ನೀಡಿದರು.
ಇವರಿಂದ ನಾಡು ಬೆಳಗುವುದು ಎಂದು ಬಾಲ್ಯದಲ್ಲೇ ಗೋಸಾಯಿ ಭವಿಷ್ಯ!
ಒಮ್ಮೆ ಒಂದು ಪ್ರಸಂಗ ನಡೆದಿತ್ತು. ಶಿವಣ್ಣ ಇನ್ನೂ ಚಿಕ್ಕವನು. ನಾಲ್ಕೈದು ವರ್ಷದವನಿರಬೇಕು. ವೀರಾಪುರಕ್ಕೆ ಹಸ್ತ ಸಾಮುದ್ರಿಕೆಯ ಗೋಸಾಯಿ ಬಂದ. ಇಂಥವರು ಯಾರೇಬಂದರೂ ಮೊದಲು ಪಟೇಲರ ಮನೆಯ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಆಗ ಅಲ್ಲೇ ಇದ್ದ ಶಿವಣ್ಣನ ಮೇಲೆ ಗೋಸಾಯಿಯ ದೃಷ್ಟಿಬಿತ್ತು. ಕೂಡಲೇ ಗೋಸಾಯಿ ಹುಡುಗನ ಕೈ ನೋಡಿ ಕೈಯನ್ನು ಹಣೆಗೊತ್ತಿಕೊಂಡು ಪಟೇಲರಿಗೆ ‘ಸ್ವಾಮಿ ಇಷ್ಟೊಂದು ಶುಭ ಲಕ್ಷಣದ ಕೈಯನ್ನೇ ನಾನು ಇದುವರೆಗೂ ನೋಡಿಲ್ಲ. ಇವನ್ನೊಬ್ಬ ಮಹಾಭಾಗ್ಯವಂತ. ಅನ್ನದಾನಿ. ಇವನಿಂದ ನಾಡೆಲ್ಲ ಬೆಳಗುವುದು. ಇವನೇನಿದ್ದರೂ ಕಾರಣಿಕ ಪುರುಷ. ನಿಮಗೆ ದಕ್ಕುವ ಮಗನಲ್ಲ’ ಎಂದಿದ್ದನಂತೆ. ಈ ಮಾತುಗಳನ್ನು ಶಿವಣ್ಣನ ತಂದೆ ಅಷ್ಟಾಗಿ ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಗೋಸಾಯಿ ಪಟೇಲರು ನೀಡುವ ಭಕ್ಷೀಸನ್ನು ಪಡೆದು ಅವರ ಮನೆಯಲ್ಲಿ ಊಟ ಮಾಡಿ ಹೊರಟುಹೋದರು. ದಿನಕಳೆದಂತೆ ಗೋಸಾಯಿ ಹೇಳಿದ ಭವಿಷ್ಯವನ್ನು ಪಟೇಲರು ಮರೆತರು. ಆದರೆ, ಕೊನೆಗೆ ಅದೇ ನಿಜವಾಯಿತು.