ಕರ್ನಾಟಕದ ಮಾಜಿ ರಾಜ್ಯಪಾಲ ಚತುರ್ವೇದಿ ನಿಧನ!
ಕರ್ನಾಟಕದ ಮಾಜಿ ರಾಜ್ಯಪಾಲ ಟಿ. ಎನ್ ಚತುರ್ವೇದಿ ನಿಧನ| ಉತ್ತರ ಪ್ರದೇಶದ ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾಜಿ ರಾಜ್ಯಪಾಲ
ಲಕ್ನೋ[ಜ.06]: ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕಿನಾಥ್ ಚತುರ್ವೇದಿ(90) ಜ.05ರಂದು ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್-27 ರ ಕೈಲಾಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ತ್ರಿಲೋಕಿನಾಥ್ ಚತುರ್ವೇದಿ 1991ರಲ್ಲಿ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಆಗಸ್ಟ್ 2002-2007ರ ಅವಧಿಯಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದರು. ಇದಕ್ಕೂ ಮುನ್ನ 1984- 89 ರ ವರೆಗೆ ಸಿಎಜಿ ಆಗಿ ಕಾರ್ಯನಿರ್ವಹಿಸಿದ್ದರು.
ಜನವರಿ 18, 1929ರಂದು ಜನಿಸಿದ ಟಿ.ಎನ್ ಚತುರ್ವೇದಿ ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿ ಹೆಸರು ಕೇಳಿ ಬಂದಿತ್ತು.
ರಾಷ್ಟ್ರಪತಿ ರಮಾನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಮಾಜಿ ರಾಜ್ಯಪಾಲ ಚತುರ್ವೇದಿ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ
.