ಒಂದೆರಡು ದಿನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಸಾಧ್ಯತೆ
2ನೇ ಪರೀಕ್ಷಾ ವರದಿ ಕೆಲದಿನ ವಿಳಂಬ| ನೆಗೆಟಿವ್ ಬಂದರೆ ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ| ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ ಚೇತರಿಸಿಕೆ|
ಬೆಂಗಳೂರು(ಆ.12): ಕೋವಿಡ್ ಸೋಂಕು ಲಕ್ಷಣಗಳಿಂದ ಗುಣಮುಖರಾಗಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೆ ನಡೆಸಲಾಗಿರುವ ಕೋವಿಡ್ ಪರೀಕ್ಷಾ ವರದಿ ಸದ್ಯದಲ್ಲೇ ಬರಲಿದ್ದು, ನೆಗೆಟಿವ್ ಬಂದರೆ ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಸಿದ್ದರಾಮಯ್ಯ ಅವರು ಜ್ವರದಿಂದ ಗುಣಮುಖರಾದ ಬಳಿಕ ಸೋಮವಾರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಮಂಗಳವಾರ ಸಂಜೆವರೆಗೂ ವರದಿ ಬಂದಿಲ್ಲ. ಮಂಗಳವಾರ ತಡರಾತ್ರಿ ಇಲ್ಲವೇ ಬುಧವಾರ ಬೆಳಗ್ಗೆ ವರದಿ ಬರುವ ಸಾಧ್ಯತೆ ಇದೆ. ವರದಿ ನೆಗೆಟಿವ್ ಇದ್ದರೆ ಬುಧವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ವರದಿ ತಡವಾದರೆ ಗುರುವಾರ ಬಿಡುಗಡೆಯಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಗುಲಿದ ಕೊರೋನಾ ಸೋಂಕು!
ಶಾಸಕ ಯತೀಂದ್ರ ಚೇತರಿಕೆ:
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಲಕ್ಷಣಗಳು ಕಡಿಮೆಯಾಗಿದ್ದು ಆರೋಗ್ಯ ಸ್ಥಿರವಾಗಿದೆ. ಅವರಿಗೆ ಇನ್ನೂ ಕೆಲ ದಿನಗಳ ಕಾಲ ಚಿಕಿತ್ಸೆ ಮುಂದುವರೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.