‘ಮಿಣಿ ಮಿಣಿ ಪೌಡರ್’ ವೈರಲ್ ಮಾಡಿದ್ದಕ್ಕೆ ಕುಮಾರಸ್ವಾಮಿ ಗರಂ!
‘ಮಿಣಿ ಮಿಣಿ ಪೌಡರ್’ ವೈರಲ್ ಮಾಡಿದ್ದಕ್ಕೆ ಕುಮಾರಸ್ವಾಮಿ ಗರಂ| ಇದು ಬಿಜೆಪಿ ವಿಕೃತ ಮನೋಭಾವನೆ, ಕೀಳು ಅಭಿರುಚಿ| ಜೀವನದಲ್ಲಿ ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ
ಚನ್ನಪಟ್ಟಣ[ಜ.28]: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನೀಡಿದ ಮಿಣಿ ಮಿಣಿ ಪೌಡರ್ ಹೇಳಿಕೆಯನ್ನು ತಮಗಿಷ್ಟಬಂದಂತೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವುದು ಬಿಜೆಪಿಯವರ ವಿಕೃತ ಮನೋಭಾವನೆ. ಇದು ಅವರಲ್ಲಿನ ಅಸಹ್ಯಕರವಾದ ಆಲೋಚನೆಗಳನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಆಂಜನೇಯನಿಗೆ ಸೋಮವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನದಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೇ ಇರುವವನು ನಾನು. ತಪ್ಪು ಮಾಡಿದರೆ ಯಾವುದೇ ಅಂಜಿಕೆಯಿಲ್ಲದೇ ಅದನ್ನು ಬಹಿರಂಗವಾಗಿ ಹೇಳುತ್ತೇನೆ. ಆದರೆ, ಬಿಜೆಪಿ ಕಾರ್ಯಕರ್ತರು ನನ್ನ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ ಎಂದರು.
ನ್ಯೂಜಿಲೆಂಡಲ್ಲೂ ಹೌದು ಹುಲಿಯಾ, ಮಿಣಿ ಮಿಣಿ ಪೌಡರ್!
ದಿನಪತ್ರಿಕೆಯೊಂದರಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿಯಲ್ಲಿ ಬಳಸುವ ಮಿಣಿ ಮಿಣಿ ಪುಡಿ ಪೌಡರ್ ಎಂಬ ಪದ ಪ್ರಕಟವಾಗಿತ್ತು. ಅದನ್ನು ಗಮನಿಸಿ ನಾನು ಆ ಹೇಳಿಕೆ ನೀಡಿದ್ದೇನೆ ಅಷ್ಟೇ. ಆದರೆ, ಬಿಜೆಪಿ ಮುಖಂಡರು ಅದನ್ನೇ ತೀರಾ ಕೆಟ್ಟದಾಗಿ ದೊಡ್ಡಮಟ್ಟದಲ್ಲಿ ಬಿಂಬಿಸಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇನ್ನು ಅವರ ಕಾರ್ಯಕರ್ತರು ಇಲ್ಲಸಲ್ಲದನ್ನು ಕಥೆ ಕಟ್ಟಿವೈರಲ್ ಮಾಡಿಕೊಂಡು ಹೊರಟಿದ್ದಾರೆ. ಈ ಮೂಲಕ ಆ ಪಕ್ಷದ ಕೀಳು ಅಭಿರುಚಿ ಸಂಸ್ಕೃತಿ ಏನು ಎಂಬುದನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹರಿಹಾಯ್ದರು.