ಪೊಲೀಸ್ ಇಲ್ಲದ ಭ್ರೂಣಹತ್ಯೆ ತಡೆ ಕಾರ್ಯಪಡೆ ರಚನೆಗೆ ಆರೋಗ್ಯ ಇಲಾಖೆ ಸಜ್ಜು!
ರಾಜ್ಯದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆ ತಡೆಗೆ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ (ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಜ.5) ರಾಜ್ಯದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆ ತಡೆಗೆ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ (ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದರೆ, ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಯಂತಹ ಪ್ರಕರಣಗಳ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಿಲ್ಲ. ಹೀಗಾಗಿ ಸಹಾಯಕ ಪೊಲೀಸ್ ಆಯುಕ್ತರ ಗ್ರೇಡ್ನ ಪೊಲೀಸ್ ಅಧಿಕಾರಿಯೊಬ್ಬರನ್ನು ಕಾರ್ಯಪಡೆಗೆ ನೇಮಿಸಲಾಗುವುದು. ತನ್ಮೂಲಕ ಪೊಲೀಸರ ಸಹಾಯದಿಂದ ದಂಧೆಯನ್ನು ಮಟ್ಟ ಹಾಕಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು.
ಆದರೆ, ರಾಜ್ಯ ಮಟ್ಟದ ಕಾರ್ಯಪಡೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಇಲ್ಲ. ಬದಲಿಗೆ ಅದೇ ಆರೋಗ್ಯ ಇಲಾಖೆ ಅಧಿಕಾರಿಗಳನ್ನೇ ಸೇರಿಸಿ ಕಾರ್ಯಪಡೆ ರಚನೆ ಮಾಡಲಾಗಿದೆ.
ಹೊಸಕೋಟೆಯ ವೈದ್ಯನಿಂದ 4 ವರ್ಷದಲ್ಲಿ 100 ಭ್ರೂಣ ಹತ್ಯೆ..!
ಆರು ಮಂದಿ ಸದಸ್ಯರ ಕಾರ್ಯಪಡೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಅಧ್ಯಕ್ಷತೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಉಪಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಬೇಕು.
ಉಳಿದಂತೆ ಆರೋಗ್ಯ ಇಲಾಖೆಯ ನಿರ್ದೇಶಕರು, ಯೋಜನಾ ನಿರ್ದೇಶಕರು (ಆರ್ಸಿಎಚ್), ಉಪ ನಿರ್ದೇಶಕರು (ಕುಟುಂಬಕಲ್ಯಾಣ) ಇವರನ್ನು ಸದಸ್ಯರನ್ನಾಗಿ ಮತ್ತು ಇಲಾಖೆಯ ಉಪನಿರ್ದೇಶಕರು (ವೈದ್ಯಕೀಯ ಕಾಯ್ದೆ) ಇವರನ್ನು ಸಂಚಾಲಕ ಸದಸ್ಯರನ್ನಾಗಿ ನೇಮಿಸಲಾಗಿದೆ.
ಭ್ರೂಣ ಹತ್ಯೆ: ಸುಳಿವು ಕೊಟ್ಟರೆ 1 ಲಕ್ಷ ರೂ. ನಗದು ಬಹುಮಾನ; ಆರೋಗ್ಯ ಇಲಾಖೆ ಘೋಷಣೆ
ಮೇಲ್ವಿಚಾರಣೆ ವಹಿಸಲು ಸೂಚನೆ:
ಇವರು ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆ ಅನ್ವಯ ರಾಜ್ಯ ಪಿಸಿ ಮತ್ತು ಪಿಎನ್ಡಿಟಿ ಅನುಷ್ಠಾನ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿ, ಮೆಲ್ವಿಚಾರಣಾ ಸಮಿತಿಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಭೆ ನಡೆಸಿ ಮೇಲ್ವಿಚಾರಣೆ ಹಾಗೂ ಪರಿಶೀಲನೆ ನಡೆಸಬೇಕು. ಜಿಲ್ಲಾ ಮಟ್ಟದ ಪ್ರಾಧಿಕಾರ, ಜಿಲ್ಲಾ ಸಲಹಾ ಸಮಿತಿಗಳ ಮೇಲ್ವಿಚಾರಣೆ ನಡೆಸಬೇಕು. ಜತೆಗೆ ಇವುಗಳ ಚಟುವಟಿಕೆಗಳ ಬಗ್ಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಒಂದು ವೇಳೆ ನಿಯಮಗಳ ತಿದ್ದುಪಡಿ ಅಗತ್ಯವಾದರೆ ರಾಜ್ಯ ಮೇಲ್ವಿಚಾರಣಾ ಸಮಿತಿಗೆ ಶಿಫಾರಸು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಕಾರ್ಯಪಡೆಗೆ ನಿಗದಿ ಮಾಡಲಾಗಿದೆ.