ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!
ದೇವನಹಳ್ಳಿ ತಹಸೀಲ್ದಾರ್ ಪ್ರಯೋಗ: ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!
ದೇವನಹಳ್ಳಿ[ಡಿ.20]: ವೈಕುಂಠ ಏಕಾದಶಿಯ ಪ್ರಯುಕ್ತ ವಿತರಿಸಬೇಕಾಗಿದ್ದ ಪ್ರಸಾದವನ್ನು ಪರಿಶೀಲಿಸಿದ ತಾಲೂಕು ಆಡಳಿತ ಅದನ್ನು ತಯಾರಿಸಿದ ಬಾಣಸಿಗರಿಗೆ ಮೊದಲು ತಿನ್ನಿಸಿ ಬಳಿಕ ಸಾರ್ವಜನಿಕ ವಿತರಣೆಗೆ ಅನುವು ಮಾಡಿಕೊಟ್ಟಿರುವ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯಲ್ಲಿ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಇಲ್ಲಿನ ತಹಸೀಲ್ದಾರ್ ಅವರು ಆಹಾರ ಸುರಕ್ಷತೆ ಮತ್ತು ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿ ತಾಲೂಕಿನ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ವಿತರಿಸಲಾಗುವ ಪ್ರಸಾದವನ್ನು ಪರಿಶೀಲಿಸಿ ನಂತರ ವಿತರಣಾ ವ್ಯವಸ್ಥೆ ಮಾಡಿ ಎಂಬ ಸೂಚಿಸಿದ್ದರು.
ಆ ಪ್ರಕಾರ ಭಕ್ತರಿಗಾಗಿ ಸಿದ್ಧಪಡಿಸಲಾಗಿದ್ದ ಲಡ್ಡು ಮತ್ತಿತರ ಆಹಾರವನ್ನು ಮೊದಲು ಬಾಣಸಿಗರಿಗೆ ತಿನ್ನಿಸಿ, ನಂತರ ತನಿಖಾಧಿಕಾರಿಗಳ ತಂಡ ತಿಂದು ಪರೀಕ್ಷಿಸಿದ ಬಳಿಕ ಭಕ್ತರಿಗೆ ವಿತರಿಸಲಾಯಿತು.