ಡಿಕೆ ಶಿವಕುಮಾರ್ ಗೆ ಜಾಮೀನು ನೀಡಿದ್ದು, ಅವರೀಗ ಬಂಧನ ಮುಕ್ತರಾಗಿದ್ದಾರೆ. ಇದೀಗ ಅವರ ಜಾಮೀನು ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ. 

ನವದೆಹಲಿ [ಅ.26]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ(ಇ.ಡಿ.) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

Add Asianetnews Kannada as a Preferred SourcegooglePreferred

ದೆಹಲಿ ಹೈಕೋರ್ಟ್‌ ಅ.23ಕ್ಕೆ ಡಿ.ಕೆ.ಶಿವಕುಮಾರ್‌ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ಇ.ಡಿ. ನ್ಯಾಯಾಲಯವು ಆರೋಪಿ ಪರಾರಿಯಾಗುವ ಭಯವಿಲ್ಲ, ಸಾಕ್ಷಿಯನ್ನು ಬೆದರಿಸಲು ಸಾಧ್ಯವಿಲ್ಲ ಮತ್ತು ಸಾಕ್ಷ್ಯ ತಿರುಚಿಲ್ಲ ಎಂಬ ಕಾರಣಗಳನ್ನು ನೀಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಲ್ಲಿ ಜಾಮೀನು ನೀಡುವ ಮುಂಚಿತವಾಗಿ ‘ಅವಳಿ ಷÜರತ್ತು’ಗಳಿದ್ದು ಅದನ್ನು ನ್ಯಾಯಾಲಯವು ಗಮನಿಸಿಲ್ಲ ಎಂದು ಇ.ಡಿ.ವಾದಿಸಿದೆ.

ಆರೋಪಿಗೆ ಜಾಮೀನು ನೀಡುವ ಮುನ್ನ ಜಾಮೀನು ಅರ್ಜಿ ವಿರೋಧಿಸಲು ಸರ್ಕಾರಿ ಅಭಿಯೋಜಕರಿಗೆ ಅವಕಾಶ ಸಿಗಬೇಕು ಮತ್ತು ಆರೋಪಿಯು ತಪ್ಪಿತಸ್ಥನಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದ ಮೇಲೆಯೇ ಜಾಮೀನು ನೀಡಬೇಕು ಎಂಬ ಪಿಎಂಎಲ…(ಅಕ್ರಮ ಹಣ ವರ್ಗಾವಣೆ ತಡೆ) ಕಾಯ್ದೆಯ ಷರತ್ತುಗಳನ್ನು ನ್ಯಾಯಾಲಯ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಇ.ಡಿ.ಹೇಳಿದೆ.

ಡಿ.ಕೆ.ಶಿವಕುಮಾರ್‌ ಅವರಿಗೆ ಹೊಸದಾಗಿ ಯಾವುದೇ ವೈದ್ಯಕೀಯ ಸಮಸ್ಯೆಗಳು ಇಲ್ಲ. ಸೆ.15 ರಿಂದ 18ರವರೆಗೆ ಇದ್ದ ಅವರ ವೈದ್ಯಕೀಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾದ ಬಳಿಕಷ್ಟೇ ಅವರನ್ನು ತಿಹಾರ್‌ ಜೈಲಿಗೆ ಕರೆದೊಯ್ಯಲಾಗಿತ್ತು ಎಂದು ಇ.ಡಿ. ತನ್ನ ಅರ್ಜಿಯಲ್ಲಿ ಹೇಳಿದೆ.

ಜತೆಗೆ, ಡಿ.ಕೆ.ಶಿವಕುಮಾರ್‌ ಮೇಲಿರುವ ಆರೋಪದ ಅಗಾಧತೆಯನ್ನು ನ್ಯಾಯಾಲಯ ಗಮನಿಸಿಲ್ಲ. ಹಾಗೆಯೇ ಸಾಕ್ಷ್ಯಗಳ ಮೇಲೆ ಡಿ.ಕೆ.ಶಿವಕುಮಾರ್‌ ಪ್ರಭಾವ ಬೀರಿರುವುದಕ್ಕೆ ನೀಡಿರುವ ಪುರಾವೆ ಗಮನಿಸದೆ ಹೈಕೋರ್ಟ್‌ ಜಾಮೀನು ನೀಡಿದೆ ಎಂದು ತನ್ನ ಅರ್ಜಿಯಲ್ಲಿ ಇ.ಡಿ.ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನಗಳಿಂದ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್‌ ಬುಧವಾರವಷ್ಟೇ ಬಂಧಮುಕ್ತಗೊಂಡಿದ್ದರು.