ಆಗಸ್ಟ್‌ನಲ್ಲಿ ಸಂಭವಿಸಿದ ಕೊಡಗು ಪ್ರಾಕೃತಿಕ ದುರಂತವು ಮಾನವ ನಿರ್ಮಿತವಾಗಿದ್ದು, ಲಘು ಭೂಕಂಪನದಿಂದ ಉಂಟಾದ ಪರಿಣಾಮ ಅಲ್ಲ ಎಂದು ವಿಜ್ಞಾನಿಗಳ ಅಧ್ಯಯನ ತಂಡ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ. 

ಮಡಿಕೇರಿ[ನ.16]: ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತವು ಮಾನವ ನಿರ್ಮಿತವಾಗಿದ್ದು, ಲಘು ಭೂಕಂಪನದಿಂದ ಉಂಟಾದ ಪರಿಣಾಮ ಅಲ್ಲ ಎಂದು ವಿಜ್ಞಾನಿಗಳ ಅಧ್ಯಯನ ತಂಡ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ಎರಡನೇ ಮತ್ತು ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲೆಯ ಪ್ರಾಕೃತಿಕ ದುರಂತ-ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ಭೌಗೋಳಿಕ ಸರ್ವೆ (ಜಿಎಸ್‌ಐ) ಸಂಸ್ಥೆಯ ವಿಜ್ಞಾನಿಗಳು ಈ ಬಗ್ಗೆ ಸರ್ಕಾರಕ್ಕೆ ಎರಡನೇ ಮತ್ತು ಅಂತಿಮ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಅದರಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.

ಕೊಡಗು ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ಕೈಗೊಂಡಿದ್ದ ಜಿಎಸ್‌ಐ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಸಂಸ್ಥೆಯ ತಂಡಗಳು ಆಗಸ್ಟ್‌ನಲ್ಲಿಯೇ ತಮ್ಮ ಪ್ರಾಥಮಿಕ ವರದಿಯಲ್ಲಿ ಕೊಡಗಿನ ಭೂಕುಸಿತವು ಮಾನವ ನಿರ್ಮಿತ ಎಂದು ವರದಿ ಸಲ್ಲಿಸಿದ್ದವು.

ಪ್ರಮುಖವಾಗಿ ನೈಸರ್ಗಿಕ ಇಳಿಜಾರುಗಳನ್ನು ತಿದ್ದುಪಡಿ ಮಾಡಿರುವುದು ಮತ್ತು ರಸ್ತೆ ರಚನೆಗೆ ನೈಸರ್ಗಿಕ ಒಳಚರಂಡಿಗಳನ್ನು ತಡೆಯುವುದು, ಮನೆಗಳು, ಹೊಟೇಲ್‌ಗಳು, ರೆಸಾರ್ಟ್‌ಗಳು, ಹೋಂಸ್ಟೇಗಳಂತಹ ಕಟ್ಟಡ ನಿರ್ಮಾಣದಿಂದ ಮತ್ತು ಪ್ಲಾಂಟೇಷನ್‌ಗಾಗಿ ಭೌಗೋಳಿಕ ಸ್ವರೂಪವನ್ನು ತಿದ್ದುಪಡಿ ಮಾಡಿರುವುದು ಅತೀ ಹೆಚ್ಚು ಮಳೆಯಿಂದಾಗಿ ಭೂಕುಸಿತವನ್ನು ಪ್ರಚೋದಿಸಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಜುಲೈಯಲ್ಲಿ ಸಂಭವಿಸಿದ 3.4 ಪ್ರಮಾಣದ ಭೂಕಂಪದ ಕಾರಣದ ಬಗ್ಗೆಯೂ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಪ್ರಾಕೃತಿಕ ಅನಾಹುತಗಳಿಗೆ ಇದು ಕಾರಣವಲ್ಲ ಎಂದು ವರದಿಯಲ್ಲಿ ತಿಳಿಸಿದೆ.