ಡಿಕೆಶಿ ಸಹೋದರ ಡಿ.ಕೆ.ಸುರೇಶ್ ತಿಳಿಸಿದ ಸ್ಫೋಟಕ ಸಂಗತಿ
ರಾಜ್ಯದ ಉಪ ಚುನಾವಣೆ ಗೆಲುವಿನ ಬಳಿಕ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮಟ್ಟಹಾಕಲು ಬಿಜೆಪಿ ಒಳಸಂಚು ನಡೆಸುತ್ತಿದೆ ಎಂದು ಐವರು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.
ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುವ ಕಾಯಕದಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ರಾಜ್ಯದ ಉಪ ಚುನಾವಣೆ ಗೆಲುವಿನ ಬಳಿಕ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮಟ್ಟಹಾಕಲು ಬಿಜೆಪಿ ಒಳಸಂಚು ನಡೆಸುತ್ತಿದೆ ಎಂದು ಐವರು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.
ಬುಧವಾರ ಈ ಕುರಿತು ಸಂಸದರಾದ ಡಿ.ಕೆ.ಸುರೇಶ್, ಕೆ.ಸಿ.ರಾಮಮೂರ್ತಿ, ಧ್ರುವ ನಾರಾಯಣ್, ಜಿ.ಸಿ.ಚಂದ್ರಶೇಖರ್, ಚಂದ್ರಪ್ಪ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಉಪ ಚುನಾವಣೆ ಗೆಲುವಿನ ಬಳಿಕ ತಮ್ಮನ್ನು ಹಾಗೂ ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಕಾನೂನು ಹಾಗೂ ರಾಜಕೀಯವಾಗಿ ಸದೆ ಬಡಿಯಲು ಸಂಚು ನಡೆದಿದೆ. ಈ ಕುರಿತು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದು, ಇದೀಗ ಮತ್ತೆ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸೇರುವಂತೆ ಒತ್ತಡ ಹೆಚ್ಚಾಗಿದೆ. ಬಿಜೆಪಿಗೆ ಬನ್ನಿ, ಇಲ್ಲವೇ ಜೈಲಿಗೆ ಹೋಗಿ ಎಂಬ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಆಪರೇಷನ್ ಕಮಲದ ವಿರುದ್ಧ ಹೋರಾಡಿ ಸಮ್ಮಿಶ್ರ ಸರ್ಕಾರ ಉಳಿವಿಕೆಗೆ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಇದೀಗ ಉಪ ಚುನಾವಣೆಯಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಕರ್ತರಲ್ಲಿ ಒಬ್ಬರಾಗಿದ್ದಾರೆ. ಪದೇ ಪದೇ ಮೈತ್ರಿ ಪಕ್ಷ ಉರುಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಅಡ್ಡಿಯಾಗುತ್ತಿರುವ ಸಚಿವ ಶಿವಕುಮಾರ್ ಅವರನ್ನು ಹೇಗಾದರು ಮಾಡಿ ತನ್ನ ತೆಕ್ಕೆಗೆ ಸೆಳೆಯಲು ಬಿಜೆಪಿ ಬೆದರಿಕೆ ತಂತ್ರ ಮುಂದುವರೆಸಿದೆ. ಕೇಂದ್ರ ಸರ್ಕಾರ ದೇಶದ ತನಿಖಾ ಸಂಸ್ಥೆಗಳ ಅಧಿಕಾರಿಗಳಿಂದಲೇ ಬೆದರಿಕೆ ಹಾಕಿಸುತ್ತಿದೆ ಎಂದು ಆರೋಪಿಸಿದರು.