ಈ ಕೆಲಸ ಮಾಡುವ 60 ಗ್ರಾಪಂಗೆ ತಲಾ 1 ಕೋಟಿ ಬಹುಮಾನ!: ಡಿಕೆಶಿ ಘೋಷಣೆ
60 ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ತಲಾ ಒಂದು ಕೋಟಿ ರು. ನಗದು ಬಹುಮಾನ: ಡಿ.ಕೆ.ಶಿವಕುಮಾರ್ ಘೋಷಣೆ| ಹೆಚ್ಚು ಚೆಕ್ಡ್ಯಾಂ ನಿರ್ಮಿಸುವ 60 ಗ್ರಾಪಂಗೆ ತಲಾ 1 ಕೋಟಿ
ಬೆಂಗಳೂರು[ಜ.25]: ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಅತಿ ಹೆಚ್ಚು ಚೆಕ್ಡ್ಯಾಂಗಳನ್ನು ನಿರ್ಮಿಮಿಸುವ 60 ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ತಲಾ ಒಂದು ಕೋಟಿ ರು. ನಗದು ಬಹುಮಾನ ನೀಡುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಶಿವಕುಮಾರ್, ನರೇಗಾ ಯೋಜನೆಯಡಿ ಪ್ರತಿ ಗ್ರಾ.ಪಂಗಳಿಗೆ ಐದಾರು ಕೋಟಿ ರು. ಅನುದಾನ ದೊರೆಯುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಹೆಚ್ಚು ಚೆಕ್ಡ್ಯಾಂಕ್ಗಳನ್ನು ನಿರ್ಮಿಸುವ ಕೆಲಸವನ್ನು ಮಾಡಬೇಕು. ಈ ಬಾರಿ ಪ್ರತೀ ಜಿಲ್ಲೆಗಳಲ್ಲೂ ಅತಿ ಹೆಚ್ಚು ಚೆಕ್ಡ್ಯಾಮ್ಗಳನ್ನು ನಿರ್ಮಿಸುವ ಎರಡು ಗ್ರಾ.ಪಂ.ಗಳನ್ನು ಗುರುತಿಸಿ ತಲಾ ಒಂದು ಕೋಟಿ ರು. ಬಹುಮಾನ ನೀಡಲಾಗುವುದು. ಒಟ್ಟು 30 ಜಿಲ್ಲೆಗಳಲ್ಲಿ 60 ಗ್ರಾಮ ಪಂಚಾಯ್ತಿಗಳಿಗೆ ಒಟ್ಟು 60 ಕೋಟಿ ರು. ಬಹುಮಾನ ನೀಡಲಾಗುವುದು. ಈ ಹಣವನ್ನು ಗ್ರಾ.ಪಂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಘೋಷಿಸಿದರು.
ಸರ್ಕಾರದ ಕೆಲಸ, ಕಾರ್ಯಗಳು, ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸ್ಥಳೀಯ ಜನಪ್ರತಿನಿಧಿಗಳಾದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲಿರುತ್ತದೆ. ತನ್ನನ್ನೂ ಒಳಗೊಂಡಂತೆ ಎಲ್ಲರೂ ಕನಿಷ್ಠ ಪಕ್ಷ ಆತ್ಮಸಾಕ್ಷಿಯಾದರೂ ಒಪ್ಪುವಂತೆ ಕೆಲಸ ಮಾಡಬೇಕು. ಅಂತರ್ಜಲ ಮಟ್ಟದಿನೇ ದಿನೇ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರು ಮತ್ತು ಅಧಿಕಾರಕ್ಕಾಗಿ ಎಂಬ ಆತಂಕವಿದೆ. ಹಾಗಾಗಿ ಅಂತರ್ಜಲ ಉತ್ತಮ ಪಡಿಸಲು ಗ್ರಾ.ಪಂಗಳು ಹೆಚ್ಚು ಗಮನ ಹರಿಸಬೇಕು ಎಂದರು.