ಕಾಂಗ್ರೆಸ್ ತೊರೆಯಲಿದ್ದಾರಾ ಮತ್ತೋರ್ವ ಶಾಸಕ ? ಪಕ್ಷ ಬಿಡಲು ಒತ್ತಡ
ರಾಜ್ಯ ರಾಜಕೀಯದಲ್ಲಿ ವಿವಿಧ ರೀತಿಯ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಇನ್ನೋರ್ವ ಕಾಂಗ್ರೆಸ್ ಮುಖಂಡ ಪಕ್ಷ ತೊರೆಯುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷ ತೊರೆಯುವ ಸ್ವಪಕ್ಷದಿಂದಲೇ ಒತ್ತಡ ಕೇಳಿ ಬಂದಿದೆ.
ಬೆಂಗಳೂರು : ಕಾಂಗ್ರೆಸ್ ಮುಖಂಡರೇ ಪಕ್ಷ ಬಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಉಮೇಶ್ ಜಾಧವ್ ನಿವಾಸದ ಎದುರು ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರೇ ಪ್ರತಿಭಟನೆ ನಡೆಸಿದ್ದು, ಪಕ್ಷ ತೊರೆಯಲು ಒತ್ತಾಯಿಸಲಾಗಿ ಎಂದು ಆಪ್ತರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಡಾ.ಉಮೇಶ್ ಜಾಧವ್ ಮುಂಬೈನಲ್ಲಿ ಇದ್ದು ಇನ್ನೂ ಎರಡು ದಿನ ಮುಂಬೈನಿಂದ ವಾಪಸಾಗೋದು ಅನುಮಾನವಾಗಿದೆ. ಈ ಬಗ್ಗೆ ಡಾ. ಉಮೇಶ್ ಜಾಧವ್ ಅವರ ಆಪ್ತ ಮೂಲಗಳೇ ಮಾಹಿತಿ ನೀಡಿದ್ದು, ಇನ್ನು ಎರಡು ದಿನ ಬಿಟ್ಟು ಕಲಬುರಗಿಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಗೆ ಹಾಜರಾಗುವ ಸಾಧ್ಯತೆ ಇದ್ದು, ಆದರೆ ಈ ಬಗ್ಗೆ ಯಾವುದೇ ರೀತಿಯಾದ ಮಾಹಿತಿಯನ್ನೂ ಕೂಡ ನೀಡಿಲ್ಲ.
ತಮ್ಮ ವಿರುದ್ಧದ ಪ್ರತಿಭಟನೆಯಿಂದ ಅಸಮಾಧಾನಗೊಂಡಿದ್ದು, 50 ಕೋಟಿ ಹಣ ಪಡೆದಿದ್ದಾರೆ ಎಂದು ಹೇಳಿ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗಿದೆ. ಪಕ್ಷ ಬಿಡಲು ಪ್ರವೋಕ್ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.