ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸಭೆ ಮಂಗಳೂರಿನಲ್ಲಿ ನಡೆಯಿತು. ಮಳೆಗಾಲದ ಅನಾಹುತಗಳನ್ನು ಎದುರಿಸಲು ಸ್ವಯಂಸೇವಕರಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಮಂಗಳೂರು (ಜೂ.3): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಮಂಗಳೂರು ತಾಲೂಕಿನ ಘಟಕಗಳ ಸಂಯೋಜಕರು ಮತ್ತು ಘಟಕ ಪ್ರತಿನಿಧಿಗಳ ಸಭೆಯನ್ನು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು.ಮಂಗಳೂರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ತಾಲೂಕಿನಲ್ಲಿ ಈಗಾಗಲೇ ಮಳೆಗಾಲ ಸಂದರ್ಭದಲ್ಲಿ ಅನಾಹುತಗಳು ಉಂಟಾಗುತ್ತಿದ್ದು, ಶೌರ್ಯ ಸ್ವಯಂಸೇವಕರು ಅಲ್ಲಿಗೆ ಧಾವಿಸಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಕಚೇರಿಯ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ್ ಇವರು, ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಸಾಂಘಿಕ ಪ್ರಯತ್ನ, ಲಭ್ಯವಿರುವ ರಕ್ಷಣಾ ಪರಿಕರಗಳ ಬಳಕೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಜೊತೆಗೆ ಸೇರಿಕೊಂಡು ಕಾರ್ಯಾಚರಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಶೌರ್ಯ ಸಮಿತಿಯ ಮಾಸ್ಟರ್ ಸತೀಶ್ ದೀಪಂ, ಕ್ಯಾಪ್ಟನ್ ಹರೀಶ್ ಶೆಟ್ಟಿ, ಜನಜಾಗೃತಿ ಮೇಲ್ವಿಚಾರಕ ನಿತೇಶ್, ತಾಲೂಕು ವಿಚಕ್ಷಣಾಧಿಕಾರಿ ನೀಲಯ್ಯ, ಎಲ್ಲ ಘಟಕಗಳ ಘಟಕ ಪ್ರತಿನಿಧಿಗಳು, ಸಂಯೋಜಕರು ಇದ್ದರು.