ರಾಜ್ಯದಲ್ಲಿ ಕೊರೋನಾ ಕೊಂಚ ಏರಿಕೆ : ಆತಂಕ
- ರಾಜ್ಯದಲ್ಲಿ ಸೋಮವಾರ ಕೋವಿಡ್-19 ಪ್ರಕರಣಗಳಲ್ಲಿ ತುಸು ಏರಿಕೆ
- 2,848 ಮಂದಿಯಲ್ಲಿ ಸೋಂಕು ದೃಢ
- 67 ಮಂದಿ ಮೃತರಾಗಿದ್ದಾರೆ. 5,631 ಮಂದಿ ಗುಣಮುಖ
ಬೆಂಗಳೂರು (ಜು.06): ರಾಜ್ಯದಲ್ಲಿ ಸೋಮವಾರ ಕೋವಿಡ್-19 ಪ್ರಕರಣಗಳಲ್ಲಿ ತುಸು ಏರಿಕೆಯಾಗಿದ್ದು, 2,848 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು 67 ಮಂದಿ ಮೃತರಾಗಿದ್ದಾರೆ. 5,631 ಮಂದಿ ಗುಣಮುಖರಾಗಿದ್ದಾರೆ.
ಭಾನುವಾರ (1,564 ಪ್ರಕರಣ) ಕ್ಕಿಂತ ಸುಮಾರು 1,300 ಪ್ರಕರಣ ಜಾಸ್ತಿ ದಾಖಲಾಗಿದೆ. ಪಾಸಿಟಿವಿಟಿ ದರ ಕೂಡ ಶೇ. 1.02 ನಿಂದ ಶೇ.1.94ಗೆ ಜಿಗಿದಿದೆ. ಸಾವಿನ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದ್ದರೂ ಮರಣ ದರ ಶೇ.3.77 ರಿಂದ ಶೇ.2.35ಕ್ಕೆ ಕುಸಿದಿದೆ.
ಕರ್ನಾಟಕದಲ್ಲಿ ಇಳಿಕೆಯತ್ತ ಕೊರೋನಾ: ಪಾಸಿಟಿವಿಟಿ ದರ ಶೇಕಡ 1.02ಕ್ಕೆ ಇಳಿಕೆ ..
ಗುಣಮುಖರ ಸಂಖ್ಯೆ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 41,996ಕ್ಕೆ ಕುಸಿದಿದೆ. ಬೀದರ್ ಜಿಲ್ಲೆಯಲ್ಲಿ 30, ಯಾದಗಿರಿಯಲ್ಲಿ 62, ರಾಯಚೂರಿನಲ್ಲಿ 81 ಅತ್ಯಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಈವರೆಗೆ ಒಟ್ಟು 28.56 ಲಕ್ಷ ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು, 27.79 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 35,434 ಮಂದಿ ಮರಣವನ್ನಪ್ಪಿದ್ದಾರೆ. ಈವರೆಗೆ ಮೂರುವರೆ ಕೋಟಿ ಕೋವಿಡ್ ಪರೀಕ್ಷೆ ನಡೆದಿದೆ.
ಬೆಂಗಳೂರು ನಗರದಲ್ಲಿ 570, ಹಾಸನ 383, ಮೈಸೂರು 371, ದಕ್ಷಿಣ ಕನ್ನಡ 265, ಚಿಕ್ಕಮಗಳೂರು 196, ಶಿವಮೊಗ್ಗ 140, ತುಮಕೂರು 126 ಮತ್ತು ಉಡುಪಿ ಜಿಲ್ಲೆಯಲ್ಲಿ 108 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 22 ಜಿಲ್ಲೆಯಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳಿವೆ.
ಅತಿ ಹೆಚ್ಚು ಸಾವು ದಕ್ಷಿಣ ಕನ್ನಡ (12)ದಲ್ಲಿ ವರದಿಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 7, ಮೈಸೂರಿನಲ್ಲಿ 6 ಸಾವು ಜನರು ಮೃತರಾಗಿದ್ದಾರೆ. ಉಡುಪಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ಕೊಪ್ಪಳ, ಕಲಬುರಗಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸಾವು ವರದಿಯಾಗಿಲ್ಲ.
3 ಲಕ್ಷ ಮಂದಿಗೆ ಲಸಿಕೆ: ರಾಜ್ಯದಲ್ಲಿ ಸೋಮವಾರ 2.97 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದು, 1.89 ಲಕ್ಷ ಮಂದಿ ಮೊದಲ ಡೋಸ್ ಮತ್ತು 1.07 ಲಕ್ಷ ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ.
18 ರಿಂದ 44 ವರ್ಷದೊಳಗಿನ 1.52 ಲಕ್ಷ ಮಂದಿ, 45 ವರ್ಷ ಮೇಲ್ಪಟ್ಟ34,417 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 3,001 ಮಂದಿ ಮೊದಲ ಡೋಸ್ ಮತ್ತು 18 ರಿಂದ 44 ವರ್ಷದೊಳಗಿನ 9,627 ಮಂದಿ, 45 ವರ್ಷ ಮೇಲ್ಪಟ್ಟ94,556 ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು 1,900 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಬಳ್ಳಾರಿ ಮರಣ ದರ ಅತ್ಯಧಿಕ ಶೇ. 36.02 : ಕೋವಿಡ್ ಮರಣ ಸಂಖ್ಯೆಯಲ್ಲಿ ಇಳಿಕೆ ವರದಿ ಆಗುತ್ತಿದ್ದರೂ ಕೂಡ ರಾಜ್ಯ ಆರೋಗ್ಯ ಇಲಾಖೆಯ ವಾರ್ ರೂಮ್ ರಿಪೋರ್ಟ್ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಏಳು ದಿನಗಳ ಮರಣ ದರ ಶೇ. 36.02 ರಷ್ಟುಇದೆ. ಹಾವೇರಿ ಶೇ. 32.39 ಮತ್ತು ಧಾರವಾಡದಲ್ಲಿ ಶೇ. 20.10ರ ಮರಣದರ ದಾಖಲಾಗಿದೆ. ರಾಜ್ಯದ ಮರಣ ದರ ಶೇ. 3.28 ಇದ್ದು 19 ಜಿಲ್ಲೆಗಳ ಮರಣ ದರ ಇದಕ್ಕಿಂತ ಹೆಚ್ಚಿದೆ. ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಮರಣ ದರ ಹೊಂದಿದೆ. ಕೊಡಗು 0.60, ಚಿತ್ರದುರ್ಗ ಶೇ 0.90ರ ಕನಿಷ್ಠ ಮರಣ ದರ ದಾಖಲಿಸಿವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona