Asianet Suvarna News Asianet Suvarna News

ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ

ರಾಜ್ಯದಲ್ಲಿ ಮಾತ್ರವಲ್ಲ ಗಡಿರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳನ್ನು ಒಳಗೊಂಡಂತೆ ಎಲ್ಲಿಯೇ ವಾಸವಾಗಿದ್ದರೂ ಕನ್ನಡದಲ್ಲಿ ಓದಬಲ್ಲ ಮತ್ತು ಮಾತನಾಡಬಲ್ಲ ವ್ಯಕ್ತಿಯನ್ನು ಕನ್ನಡಿಗನೆಂದು ಪರಿಗಣಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. 

Consider all those who know Kannada as Kannadigas says Kannada Sahitya Parishat gvd
Author
First Published Oct 30, 2022, 2:30 AM IST

ಬೆಂಗಳೂರು (ಅ.30): ರಾಜ್ಯದಲ್ಲಿ ಮಾತ್ರವಲ್ಲ ಗಡಿರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳನ್ನು ಒಳಗೊಂಡಂತೆ ಎಲ್ಲಿಯೇ ವಾಸವಾಗಿದ್ದರೂ ಕನ್ನಡದಲ್ಲಿ ಓದಬಲ್ಲ ಮತ್ತು ಮಾತನಾಡಬಲ್ಲ ವ್ಯಕ್ತಿಯನ್ನು ಕನ್ನಡಿಗನೆಂದು ಪರಿಗಣಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಕುರಿತು ಇತ್ತೀಚೆಗೆ ನಡೆಸಿದ ಚಿಂತನಾಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ನೀಡಿದ ಸಲಹೆ-ಸೂಚನೆಗಳನ್ನು ಸರ್ವಾನುಮತದಿಂದ ಸ್ವೀಕರಿಸಿ ವಿಧೇಯಕದ ತಿದ್ದುಪಡಿಯಲ್ಲಿ ಪರಿಶೀಲಿಸಿ, ಪರಿಗಣಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ವಿಧೇಯಕದಲ್ಲಿ ಕನ್ನಡಿಗ ಎಂದರೆ ಯಾವುದೇ ವ್ಯಕ್ತಿ ಅಥವಾ ಆತನ ತಂದೆ, ತಾಯಿ ಇಲ್ಲವೇ ಅವರ ಅನುಪಸ್ಥಿತಿಯಲ್ಲಿ ಕಾನೂನು ಸಮ್ಮತ ಪಾಲಕರು 15 ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ವಾಸವಾಗಿರಬೇಕು. ಕನ್ನಡ ಓದುವ ಹಾಗೂ ಬರೆಯುವ ಜ್ಞಾನ ಹೊಂದಿರಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಕನ್ನಡದಲ್ಲಿ ಓದಬಲ್ಲ ಮತ್ತು ಮಾತನಾಡಬಲ್ಲ ವ್ಯಕ್ತಿ ಎಲ್ಲೇ ವಾಸವಾಗಿದ್ದರೂ ಆತನನ್ನು ಕನ್ನಡಿಗ ಎಂದು ಪರಿಗಣಿಸುವಂತೆ ಶಿಫಾರಸು ಮಾಡಿದೆ.

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲ್ಲುವ ಅವಕಾಶ: ನಳಿನ್‌ ಕುಮಾರ್‌ ಕಟೀಲ್‌

ಕರ್ನಾಟಕದ ರಾಜ್ಯಪಾಲರು ಹೊರಡಿಸುವ ಎಲ್ಲಾ ಅಧ್ಯಾದೇಶಗಳಲ್ಲಿ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಬಳಸತಕ್ಕದ್ದು. ಈ ಅಧಿನಿಯಮ ಜಾರಿಗೆ ಬಂದ ಕೂಡಲೇ ರಾಜ್ಯ ವಿಧಾನಮಂಡಲವು ಆಂಗ್ಲ ಭಾಷೆಯಲ್ಲಿರುವ ಎಲ್ಲಾ ಶಾಸನಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಬೇಕು ಮತ್ತು ಪ್ರಕಟಿಸಬೇಕು. ರಾಜ್ಯ ಅಥವಾ ಸ್ಥಳೀಯ ಪ್ರಾಧಿಕಾರಗಳು ತಮ್ಮ ಎಲ್ಲಾ ಅಧಿಕೃತ ಹಾಗೂ ಆಡಳಿತಾತ್ಮಕ ಉದ್ದೇಶಗಳಿಗಾಗಿ ಮತ್ತು ಪತ್ರ ವ್ಯವಹಾರಕ್ಕಾಗಿ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ತಿದ್ದುಪಡಿ ಮಾಡಲು ಒತ್ತಾಯಿಸಿದೆ.

ಕನ್ನಡ ಶಾಲೆಗಳ ಪುನಶ್ಚೇತನ: ರಾಜ್ಯಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಲು ಸಾಧ್ಯವಾಗದ ಕನ್ನಡ ಶಾಲೆಗಳನ್ನು ಗುರುತಿಸಿ, ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಆದ್ಯತೆಯ ಮೇರೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಅರೆ-ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು ಸೇರಿದಂತೆ ಇತ್ಯಾದಿಗಳ ಜಾಲತಾಣಗಳಲ್ಲಿ ಮಾಹಿತಿಯನ್ನು ಯುನಿಕೋಡ್‌ ಅಥವಾ ಕಾಲಕಾಲದಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ ಮೊದಲ ಆಯ್ಕೆಯಾಗಿ ಕನ್ನಡದಲ್ಲಿ ಲಭ್ಯವಾಗುವಂತೆ ಮಾಡತಕ್ಕದ್ದು ಎಂಬ ಅಂಶಗಳನ್ನು ವಿಧೇಯಕ ತಿದ್ದುಪಡಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಬೇಕೆಂದು ಪ್ರಸ್ತಾವನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.

Gadag: ಚುನಾವಣೆಯಲ್ಲಿ ನಿನ್ನ ಅಂಹಕಾರ ಇಳಿಸುತ್ತಾರೆ: ಸಿದ್ದು ವಿರುದ್ಧ ಏಕವಚನದಲ್ಲೇ ಶ್ರೀರಾಮುಲು ವಾಗ್ದಾಳಿ

ಕನ್ನಡದಲ್ಲಿ ತೀರ್ಪು: ಯಾವುದೇ ಬ್ಯಾಂಕಿನ ಅಥವಾ ಹಣಕಾಸು ಸಂಸ್ಥೆಯ ಗ್ರಾಹಕ ತನ್ನ ಖಾತೆಯ ನಿರ್ವಹಣೆಯಲ್ಲಿ ಕನ್ನಡ ಭಾಷೆಯನ್ನು ಬಳಸಿದರೆ, ಸಂಬಂಧಿಸಿದ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಅದನ್ನು ಮಾನ್ಯ ಮಾಡಬೇಕು. ಎಲ್ಲಾ ಸರ್ಕಾರಿ, ಖಾಸಗಿ ಕಚೇರಿಗಳು ಮತ್ತು ಉದ್ದಿಮೆಗಳೂ ಸೇರಿದಂತೆ ಸಾರ್ವಜನಿಕ ಸಂಪರ್ಕಕ್ಕೆ ಬರುವ ಎಲ್ಲೆಡೆ ಕನ್ನಡದಲ್ಲಿ ಸೇವೆಯನ್ನು ಕೊಡಬೇಕು. ಕರ್ನಾಟಕ ಹೈಕೋರ್ಚ್‌ ತೀರ್ಪು, ಆದೇಶಗಳು ರಾಜ್ಯದ ಅಧಿಕೃತ ಭಾಷೆ ಕನ್ನಡದಲ್ಲಿ ಬರುವಂತಾಗಲು ಭಾರತ ಸಂವಿಧಾನದ ಅನುಚ್ಛೇದ 348ಕ್ಕೆ ಸಂಸತ್ತು ಸೂಕ್ತ ತಿದ್ದುಪಡಿ ತರುವಂತಾಗುವಲ್ಲಿ ಕರ್ನಾಟಕ ಸರ್ಕಾರ ಅಗತ್ಯ ಪ್ರಕ್ರಿಯೆಯ ಮೂಲಕ ಕ್ರಮ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

Follow Us:
Download App:
  • android
  • ios