ಮಹದಾಯಿ ಬಗ್ಗೆ ಮೋದಿ ಮೌನವೇಕೆ?: ಕಾಂಗ್ರೆಸ್ ಪ್ರಶ್ನೆ
ರಾಜ್ಯಕ್ಕೆ ಸದಾ ಮೋಸ ಮಾಡುತ್ತಲೇ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು: ರಾಜ್ಯ ಕಾಂಗ್ರೆಸ್
ಬೆಂಗಳೂರು(ಜ.13): ‘ಮಹದಾಯಿ ಯೋಜನೆ ವಿರೋಧಿಸಿ ಹಾಗೂ ಡಿಪಿಆರ್ಗೆ ನೀಡಿರುವ ಒಪ್ಪಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಗೋವಾ ಸಚಿವರ ನಿಯೋಗ ಮಾಡಿದ ಮನವಿಗೆ ಕೇಂದ್ರ ಸಚಿವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ. ಕರ್ನಾಟಕಕ್ಕೆ ಯಾಕೆ ಈ ರೀತಿಯ ಭರವಸೆ ಸಿಗುತ್ತಿಲ್ಲ. ಹುಬ್ಬಳ್ಳಿಗೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಯೋಜನೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲಿ’ ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಅಮಿತ್ ಶಾ ಅವರು ಮಹದಾಯಿ ಯೋಜನೆ ವಿರೋಧಿಸಿರುವ ಗೋವಾ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ. ಸಕಾರಾತ್ಮಕ ಅಂದರೆ ಏನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ? ಗೋವಾದ ಬಿಜೆಪಿ ಸರ್ಕಾರದ ವಿರೋಧಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಲುವು ಏನು? ಗಂಭೀರ ವಿಚಾರದ ಬಗ್ಗೆ ಅವರ ಮೌನವೇಕೆ?’ ಎಂದು ಪ್ರಶ್ನಿಸಿದೆ.
ಮಹದಾಯಿ ನೀರು ಬಿಡಲ್ಲ ಎನ್ನುವುದು ಅರಿಯಲ್ಲ: ಕೋನರಡ್ಡಿ
ರಾಜ್ಯಕ್ಕೆ ಸದಾ ಮೋಸ ಮಾಡುತ್ತಲೇ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು. ಹುಬ್ಬಳ್ಳಿಗೆ ಬಂದಿರುವ ಅವರು ಮಹದಾಯಿ ಯೋಜನೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ರಾಜ್ಯದ ಬಗೆಗಿನ ನಿರ್ಲಕ್ಷ್ಯ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹ ಮಾಡಿದೆ.
ಈ ಹಿಂದೆ ತಮ್ಮ ಭೇಟಿಗಾಗಿ ತೇಪೆ ಹಾಕಿದ್ದ ರಸ್ತೆಗಳು ತಾವು ವಾಪಸ್ ದೆಹಲಿ ತಲುಪುವುದರೊಳಗಾಗಿ ಕಿತ್ತು ಹೋಗಿದ್ದವು. ತನ್ಮೂಲಕ 40% ಕಮಿಷನ್ ಲೂಟಿಗೆ ಸಾಕ್ಷಿ ಹೇಳಿದ್ದವು. ತಮ್ಮ ಕಚೇರಿ ವಿವರಣೆ ಕೇಳಿದ್ದು ಬಿಟ್ಟರೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ, ಯಾವ ತನಿಖೆಯೂ ಆಗಲಿಲ್ಲ. ರಾಜ್ಯದ ರಸ್ತೆ ಗುಂಡಿಗಳ ಬಗ್ಗೆ ಮೌನ ಏಕೆ? ಎಂದೂ ಪ್ರಧಾನಮಂತ್ರಿಗಳನ್ನು ಪ್ರಶ್ನಿಸಿದೆ.