ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ದುಷ್ಕೃತ್ಯಕ್ಕೆ ಕಾಂಗ್ರೆಸ್‌ ನೇರ ಹೊಣೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಗಂಭೀರ ಆರೋಪ

ಉಡುಪಿ (ನ.22) : ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ದುಷ್ಕೃತ್ಯಕ್ಕೆ ಕಾಂಗ್ರೆಸ್‌ ನೇರ ಹೊಣೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 1680 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನೇ ನಿಷೇಧಿಸಿದೆ. ಇದರಿಂದ ಕೆಲಸ ಕಳೆದುಕೊಂಡಿರುವ ಪಿಎಫ್‌ಐ ಕಾರ್ಯಕರ್ತರು ಬಿಜೆಪಿ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುಲು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಘಟನೆಗೂ ಇದೇ ಕಾರಣ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಿಎಪ್‌ಐ ನಿಷೇಧಿಸದೆ ಪೋಷಣೆ ಮಾಡಿತ್ತು. ತಾಕತ್ತಿದ್ದರೆ ಪಿಎಫ್‌ಐ ನಿಷೇಧಿಸಿ ನೋಡೋಣ ಎಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದರು. ಬಿಜೆಪಿ ಸರ್ಕಾರ ಪಿಎಫ್‌ಐಯನ್ನು ನಿಷೇಧಿಸಿ ತನ್ನ ತಾಕತ್ತನ್ನು ತೋರಿಸಿದೆ ಎಂದರು.

MANGALURU BLAST CASE: ಅಪ್ಪ ದೇಶ ಕಾಯೋ ಸೈನಿಕ, ಮಗ ಉಗ್ರ! ಅಬ್ದುಲ್ ಮತೀನ್‌ಗೆ ಟೆರರ್ ನಂಟು ಬೆಳೆದಿದ್ದೆಲ್ಲಿ?

ಮಿಷನ್‌ 150 ಪ್ರತಿಶತ ಯಶಸ್ವಿ:

ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಮಿಶನ್‌ 150 ನೂರಕ್ಕೆ ನೂರು ಯಶಸ್ವಿಯಾಗುತ್ತದೆ. ಈಗಾಗಲೇ ಚುನಾವಣೆಗೆ ಸಿದ್ಧತೆಯಾಗಿ ದೊಡ್ಡಬಳ್ಳಾಪುರ, ಕಲಬುರ್ಗಿ, ಬಳ್ಳಾರಿಗಳಲ್ಲಿ ಬೃಹತ್‌ ಸಮಾವೇಶಗಳನ್ನು ನಡೆಸಲಾಗಿದೆ. ಮುಂದೆ ಮೈಸೂರಿನಲ್ಲಿ ಎಸ್ಸಿಎಸ್ಟಿಮೋರ್ಚಾ ಸಮಾವೇಶ, ಶಿವಮೊಗ್ಗದಲ್ಲಿ ಹಿಂ.ವ. ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಲಾಗುತ್ತದೆ ಎಂದರು.

ಯುವಕರಿಗೆ ಹೆಚ್ಚಿನ ಟಿಕೆಟ್‌:

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ಆದ್ದರಿಂದ ಪ್ರಭಾವಿಗಳ ಮಕ್ಕಳಿಗೆ ಟಿಕೆಟ್‌ ಅಂತೆæೕನಿಲ್ಲ, ಗುಜರಾತ್‌ ಚುನಾವಣೆಯಲ್ಲಿ ಶೇ. 38ರಷ್ಟುಸ್ಥಾನಗಳನ್ನು ಯುವಕರಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಅದಕ್ಕಿಂತಲೂ ಹೆಚ್ಚು ಸ್ಥಾನ ಯುವಕರಿಗೆ ಸಿಗುತ್ತದೆ, ಮಹಿಳೆಯರಿಗೂ ಸಾಕಷ್ಟುಸ್ಥಾನಗಳನ್ನು ನೀಡಲಾಗುತ್ತದೆ ಎಂದು ಟೆಂಗಿನಕಾಯಿ ಹೇಳಿದರು.

ಪೊಲೀಸರಿಂದ ಶಂಕಿತ ಉಗ್ರ ಶಾರೀಕ್‌ ಮನೆ ಸೇರಿ 4 ಮನೆಗಳ ತಪಾಸಣೆ

ಕರ್ನಾಟಕ ಜೋಡೋ ಆಗಿಲ್ಲ:

ರಾಹುಲ್‌ ಗಾಂಧಿ ಭಾರತ್‌ ಜೋಡೋ ಪಾದಯಾತ್ರೆ ನಡೆಸಿದರು, ಆದರೆ ಅವರಿಗೆ ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಮಾತ್ರ ಜೋಡೋ ಮಾಡುವುದಕ್ಕಾಗಲೇ ಇಲ್ಲ ಎಂದವರು ಲೇವಡಿ ಮಾಡಿದರು.