ಟಿಪ್ಪುವಿನಂತೆ ಸಿದ್ದು ಹೊಡೆದು ಹಾಕಬೇಕು ಎಂಬ ಹೇಳಿಕೆ‌ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್‌ ವಿರುದ್ಧದ ತನಿಖೆಗೆ ಹೈಕೋರ್ಟ್ 4 ವಾರಗಳ ತಡೆ ನೀಡಿದೆ.

ಬೆಂಗಳೂರು (ಮೇ.29): ಟಿಪ್ಪುವಿನಂತೆ ಸಿದ್ದು ಹೊಡೆದು ಹಾಕಬೇಕು ಎಂಬ ಹೇಳಿಕೆ‌ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧದ ತನಿಖೆಗೆ ಹೈಕೋರ್ಟ್ 4 ವಾರಗಳ ತಡೆ ನೀಡಿದೆ. ಈ ಮೂಲಕ ಬಂಧನ ಭೀತಿಯಿಂದ ರಿಲೀಫ್ ಪಡೆದಿದ್ದಾರೆ. ಮುಂದಿನ ವಿವಾರಣೆಯನ್ನು 4 ವಾರಗಳಿಗೆ ಮುಂದೂಡಿ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಲಾಗಿದ್ದು, ಬಂಧನ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಬಂಧನ ವಿಚಾರವೇ ಇಲ್ಲ, ತನಿಖೆ ನಡೆಯಲಿ ಎಂದು ಸರ್ಕಾರದ ವಕೀಲರು ಹೇಳಿಕೆ ನೀಡಿದ್ದಾರೆ. ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಅಶ್ವಥ್‌ ಪರ ಪ್ರಭುಲಿಂಗ ನಾವಡಗಿ ವಾದ ಮಂಡನೆ ಮಾಡಿದ್ದರು.

Add Asianetnews Kannada as a Preferred SourcegooglePreferred

ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿಗೆ ಡಿಕೆಶಿ ವಾರ್ನಿಂಗ್

ಏನಿದು ವಿವಾದ?: 2023ರ ಫೆ.15ರಂದು ಮಂಡ್ಯದ ಸಾತನೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಂದು ಸಚಿವರಾಗಿದ್ದ ಅಶ್ವತ್ಥನಾರಾಯಣ ((Dr CN ashwath naryana)) ಅವರು, ಟಿಪ್ಪುವನ್ನು ಉರಿಗೌಡ-ನಂಜೇಗೌಡರು(Urigowda Nanjegowda) ಮುಗಿಸಿದಂತೆ ಸಿದ್ದರಾಮಯ್ಯ(Siddaramaiah) ಅವರನ್ನು ಮುಗಿಸಬೇಕು ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಮೈಸೂರಿನ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರು ಫೆ.17ರಂದು ದೂರು ನೀಡಿದ್ದರು. ಆ ದೂರು ಆಧರಿಸಿ ಮ. 24ರಂದು ಮೈಸೂರಿನ ದೇವರಾಜ ಠಾಣಾ ಪೊಲೀಸರು, ಕ್ರಿಮಿನಲ್‌ ಬೆದರಿಕೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಅಪರಾಧ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಆ ನಂತರ ಪ್ರಕರಣವನ್ನು ಮಂಡ್ಯ ಠಾಣೆಗೆ ವರ್ಗಾಯಿಸಲಾಗಿದೆ.

'ಸಿದ್ದು ಹತ್ಯೆ' ವಿವಾದಾತ್ಮಕ ಹೇಳಿಕೆ; ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್ ಗೆ ಅಶ್ವತ್ಥನಾರಾಯಣ

ಇದೀಗ ಎಫ್‌ಐಆರ್‌ ಪ್ರಶ್ನಿಸಿರುವ ಅಶ್ವತ್ಥ ನಾರಾಯಣ ಅವರು, ‘ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸುವ ಏಕೈಕ ಉದ್ದೇಶದಿಂದ ಭಾಷಣ ಮಾಡಲಾಗಿತ್ತು. ಆ ಕುರಿತು ಸದನ ಮತ್ತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಉದ್ದೇಶ ಇರಲಿಲ್ಲ. ಅವರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಸಹ ಹೊಂದಿಲ್ಲ. ತಮ್ಮ ಭಾಷಣದ ನಂತರ ಯಾವುದೇ ಗಲಭೆ ನಡೆದಿಲ್ಲ. ಪ್ರಕರಣ ಈಗಾಗಲೇ ಮುಗಿದ ಅಧ್ಯಾಯ. ಹೀಗಿದ್ದರೂ ಅನಗತ್ಯವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆ ನಡೆದು ಹಲವು ತಿಂಗಳು ಕಳೆದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪೊಲೀಸರು ಒತ್ತಡಕ್ಕೆ ಮನಿದು ಎಫ್‌ಐಆರ್‌ ದಾಖಲಿಸಿದ್ದು, ಅದನ್ನು ರದ್ದು ಪಡಿಸಬೇಕು’ ಎಂದು ಕೋರಿದ್ದರು. ಅಲ್ಲದೆ, ಎಫ್‌ಐಆರ್‌ಗೆ ತಡೆ ನೀಡದೆ ಹೋದರೆ ಶಾಸಕರಾಗಿರುವ ತಮಗೆ ಸಮಸ್ಯೆಯಾಗಲಿದೆ. ಆದ್ದರಿಂದ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.