ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕೈಗೊಳ್ಳಬೇಕಿದ್ದ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ರದ್ದಾಗಿದೆ.
ರಾಯಚೂರು (ಆ.05) ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ವೈಪರಿತ್ಯ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ರದ್ದುಗೊಳಿಸಿದ್ದಾರೆ. ನಾಳೆ (ಆಗಸ್ಟ್ 6) ಸಿದ್ದರಾಮಯ್ಯ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ಮಾಡಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಿನ್ನಲೆಯಲ್ಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಕೊಪ್ಪಳ ಹಾಗೂ ರಾಯಚೂರಿಗೆ ಸಿಎಂ ಸಿದ್ದರಾಮಯ್ಯ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಬೇಕಿತ್ತು.
ಆಗಸ್ಟ್ 6ರಂದು ಬೆಳಗ್ಗೆ 10.30ರ ವೇಳೆಗೆ ಸಿದ್ದರಾಮಯ್ಯ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕೊಪ್ಪಳ ಗಿಣಿಗೇರಾಗೆ ತೆರಳಬಬೇಕಿತ್ತು. ಬಳಿಕ ವಿಶೇಷ ಹೆಲಿಕಾಪ್ಟರ್ ಮೂಲಕ ರಾಯಚೂರಿನ ಹಟ್ಟಿಗೆ ತೆರಳಬೇಕಿತ್ತು. ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಸಿಎಂ ಪ್ರವಾಸ ರದ್ದು ಮಾಡಲಾಗಿದೆ. ಹಟ್ಟಿ ಗೋಲ್ಡ್ ಮೈನ್ಸ್ ಸಿಬ್ಬಂದಿಗಳ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ವ್ಯತಿರಿಕ್ತ ಹವಾಮಾನದಿಂದ ಕಾರ್ಯಕ್ರಮಗಳು ರದ್ದಾಗಿದೆ.
ಸಿದ್ದರಾಮಯ್ಯ ಆಗಮನಕ್ಕೆ ಹೆಲಿಪ್ಯಾಡ್ ನಿರ್ಮಾಣ
ಸಿಎಂ ಸಿದ್ದರಾಮಯ್ಯ ಹಟ್ಟಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದಾರೆ ಎಂದು ಹಟ್ಟಿಯಲ್ಲಿ ಹೆಲಿಪ್ಯಾಡ್ ಕೂಡ ನಿರ್ಮಾಣ ಮಾಡಲಾಗಿತ್ತು. ನಾಳೆ ಮಧ್ಯಾಹ್ನಾ 12.10ಕ್ಕೆ ಹಟ್ಟಿಗೆ ಸಿದ್ದರಾಮಯ್ಯ ಆಗಮಿಸಬೇಕಿತ್ತು. ಹಟ್ಟಿಯಲ್ಲಿ 998 ಕೋಟಿ ರೂಪಾಯಿ ವೆಚ್ಚದಲ ಕಾಮಗಾರಿ ಶಂಕುಪಸ್ಥಾಪನೆ ಮಾಡುವ ಕಾರ್ಯಕ್ರಮ ನಿಗಧಿಯಾಗಿತ್ತು. ಸಿಎಂ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎನ್.ಎಸ್. ಬೋಸರಾಜು, ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಇಷ್ಟೇ ಅಲ್ಲ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಹಟ್ಟಿ ಕಂಪನಿಯ ಅಧ್ಯಕ್ಷ ಜೆ.ಟಿ.ಪಾಟೀಲ್, ಲಿಂಗಸೂಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್, ರಾಯಚೂರು ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ನಿಗಧಿಯಾಗಿತ್ತು.
ರಾಜ್ಯದ ಹಲೆವೆಡೆ ಭಾರಿ ಮಳೆ
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ನಾಳೆ (ಆಗಸ್ಟ್ 6) ಕೊಡಗು ಜಿಲ್ಲೆಯಲ್ಲಿ 150 ಮೀಲಿ ಮೀಟರ್ಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ನಾಳೆ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಇತ್ತ ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಯಾಗಿದೆ.
