ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆ ಸಾಧ್ಯತೆ, ಯುವಕರು, ದುಡಿಯುವ ವರ್ಗಕ್ಕೆ ಬಂಪರ್!
ಚುನಾವಣೆಗೆ ಕೌಂಟ್ಡೌನ್ ಆರಂಭಗೊಂಡಿದೆ. ಇದೀಗ ರಾಜ್ಯ ಸರ್ಕಾರ ಅತ್ಯಂತ ಜನಪ್ರಿಯ ಬಜೆಟ್ ಮಂಡಿಸಲು ಮುಂದಾಗಿದೆ. ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಈ ಬಾರಿ ಯುವಕರು, ದುಡಿಯುವ ವರ್ಗ, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಕಕ್ಕೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ.
ಬೆಂಗಳೂರು(ಜ.14): ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರಿ ಕಸರತ್ತು ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮರಳಿ ಅಧಿಕಾರ ಪಡೆಯಲು ಹೋರಾಟ ನಡೆಸುತ್ತಿದೆ. ಇತ್ತ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೇರಲು ಭರ್ಜರಿ ಪ್ರಚಾರ ನಡೆಸುತ್ತಿದೆ. ಹೀಗಾಗಿ ಪೈಪೋಟಿ ಹೆಚ್ಚಾಗಿದೆ. ಇದರ ನಡುವೆ ಬಿಜೆಪಿ ಸರ್ಕಾರ ಅತ್ಯಂತ ಜನಪ್ರಿಯ ಬಜೆಟ್ ಮೂಲಕ ಜನರ ಗಮನಸೆಳೆಯಲು ಮುಂದಾಗಿದೆ. ಫೆಬ್ರವರಿ 17 ರಂದು ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಯುವಕರು, ಮಹಿಳೆಯರು, ದುಡಿಯುವ ವರ್ಗ ಸೇರಿದಂತೆ ಎಲ್ಲಾ ವರ್ಗಕ್ಕೆ ಬಂಪರ್ ಕೊಡುಗೆ ನೀಡಲು ಸಿಎಂ ಬಸವರಾಜ್ ಬೊಮ್ಮಾಯಿ ಮುಂಜಾಗಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಇದಕ್ಕಾಗಿ ಇಲಾಖಾವಾರು ವೆಚ್ಚಗಳು ಮತ್ತು ಆದಾಯ ಸಂಗ್ರಹ ಕುರಿತ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇಲಾಖಾವಾರು ಸಭೆ ನಡೆಸಿ ಬೇಡಿಕೆಗಳ ಮನವಿಯನ್ನು ಸಿಎಂ ಪಡೆದುಕೊಳ್ಳಲಿದ್ದಾರೆ. ಕೋವಿಡ್ ಮತ್ತು ಪ್ರವಾಹದ ಕಾರಣದಿಂದಾಗಿ ಸಂಕಷ್ಟಎದುರಿಸುತ್ತಿರುವ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣು ಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಿಸಲು ಅಗತ್ಯ ಇರುವ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Union Budget Session: ಜನವರಿ 31 ರಿಂದ 66 ದಿನಗಳ ಸಂಸತ್ ಬಜೆಟ್ ಅಧಿವೇಶನ: ಪ್ರಲ್ಹಾದ್ ಜೋಶಿ
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಲಾಗುವುದು. ಅಲ್ಲದೇ, ಬಜೆಟ್ ಅಧಿವೇಶನವನ್ನು ಫೆ.17ರಂದು ನಡೆಸುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭ ಮಾಡಲಾಗಿದೆ. ಡಿಸೆಂಬರ್ವರೆಗೆ ರಾಜ್ಯದ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟುಹೆಚ್ಚಿಸಲು ಗುರಿಗಳನ್ನು ಹೆಚ್ಚು ಮಾಡುವಂತೆ ಸೂಚನೆ ನೀಡಲಾಗುವುದು. ಜನಪರ ಬಜೆಟ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ತಿಂಗಳ ಮೂರನೇ ವಾರ ಬಜೆಟ್ ಮಂಡಿಸುವ ವಿಚಾರವನ್ನು ಬೊಮ್ಮಾಯಿತ ಖಚಿತಪಡಿಸಿದ್ದಾರೆ. ಚುನಾವಣಾ ವರ್ಷವಾಗಿರುವುದರಿಂದ ಉತ್ತರ ಕರ್ನಾಟಕಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನವೇನಾದರೂ ಸಿಗಬಹುದಾ ಎಂಬ ಪ್ರಶ್ನೆಗೆ, ಕಾದು ನೋಡಿ ಎಂದಷ್ಟೇ ಹೇಳಿದರು. ಏಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್ನಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ. ಬಜೆಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಆರಂಭಿಸಿದ್ದಾರೆ.