* ಆಡಿಯೋ ನೈಜತೆ ದಾಖಲೆ ಸಲ್ಲಿಸಲು ಸೂಚನೆ* 2 ದಿನದೊಳಗೆ ವಿಚಾರಣೆಗೆ ಬರಲು ತಾಕೀತು* ಖರ್ಗೆಗೆ ಮೂರನೇ ಬಾರಿಗೆ ನೋಟಿಸ್ ಜಾರಿ
ಬೆಂಗಳೂರು(ಮೇ.05): ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ(PSI Recruitment Scam) ‘ಡೀಲ್’ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಹಾಗೂ ಅದರ ನೈಜತೆ ಬಗ್ಗೆ ಸಾಕ್ಷ್ಯವನ್ನು ಸಲ್ಲಿಸುವಂತೆ ಸೂಚಿಸಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಿಯಾಂಕ ಖರ್ಗೆ(Priyank Kharge) ಅವರಿಗೆ ರಾಜ್ಯ ಅಪರಾಧ ತನಿಖಾ ದಳ (CID) ಮೂರನೇ ಬಾರಿಗೆ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಈ ನೋಟಿಸ್ ಸ್ವೀಕರಿಸಿದ ಎರಡು ದಿನದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಕುರಿತು ಹೇಳಿಕೆ ದಾಖಲಿಸುವಂತೆ ಪ್ರಿಯಾಂಕ ಖರ್ಗೆ ಅವರಿಗೆ ಡಿವೈಎಸ್ಪಿ ನರಸಿಂಹಮೂರ್ತಿ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಸಹ ಸಿಐಡಿ ನೋಟಿಸ್ ಜಾರಿಗೊಳಿಸಿದ್ದರೂ ವಿಚಾರಣೆಗೆ ಹಾಜರಾಗಲು ಖರ್ಗೆ ನಿರಾಕರಿಸಿದ್ದರು. ಈಗ ಮತ್ತೆ ಸಿಐಡಿ ನೋಟಿಸ್ ನೀಡಿದ್ದು, ಈಗಲಾದರೂ ವಿಚಾರಣೆಗೆ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಜರಾಗಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.
ಪಿಎಸ್ಐ ನೇಮಕಾತಿ ಪ್ರಕರಣ ಬೆಳಕಿಗೆ ಬಂದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರು, ತಮ್ಮ ಬಳಿ ಅಕ್ರಮದ(Scam) ಬಗ್ಗೆ ಪುರಾವೆಗಳಿವೆ ಎಂದಿದ್ದರು. ಅಲ್ಲದೆ, ಇಬ್ಬರು ಆರೋಪಿಗಳ(Accused) ನಡುವೆ ಪಿಎಸ್ಐ ಹುದ್ದೆ ಪಡೆಯುವ ಸಂಬಂಧ ನಡೆಸಿದ್ದರು ಎನ್ನಲಾದ ‘ಡೀಲ್’ (Deal) ಮಾತುಕತೆಯ ಆಡಿಯೋವನ್ನು(Audio) ಅವರು ಬಿಡುಗಡೆಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಸಿಐಡಿ ಸೂಚಿಸಿದೆ.
ಬಿಟ್ ಕಾಯಿನ್ ಪ್ರಕರಣ ಚುರುಕಾದ್ರೆ ಕರ್ನಾಟಕಕ್ಕೆ 3ನೇ ಸಿಎಂ: ಹೊಸ ಬಾಂಬ್ ಸಿಡಿಸಿದ ಖರ್ಗೆ
ಪ್ರಿಯಾಂಕ್ ಖರ್ಗೆ ಹೊಸ ಬಾಂಬ್, ಪಿಎಸ್ಐ ಹಗರಣದಲ್ಲಿ ಗೃಹ ಸಚಿವರು ಶಾಮೀಲು!
ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಐಡಿ ವಿಚಾರಣೆಗೆ ಗೈರು ಹಾಜರಾಗಿದ್ದರು.
ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಾಲು ಸಾಲು ಆರೋಪ ಮಾಡಿದ್ದರು. ಈ ಅವ್ಯವಹಾರದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದು, ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಸಾಕ್ಷ್ಯ ಹಾಗೂ ದಾಖಲೆಗಳೊಂದಿಗೆ ಸೋಮವಾರ ಬೆಳಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಅವರು ವಿಚಾರಣೆಗೆ ಹಾಜರಾಗದೆ ಹಿಂದೆ ಸರಿದಿದ್ದರು.
