ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಮಗುವಿನ ಹಕ್ಕಾಗಿದ್ದು, ಸಿಸಿಎಲ್‌ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು : ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಮಗುವಿನ ಹಕ್ಕಾಗಿದ್ದು, ಸಿಸಿಎಲ್‌ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಮಹಿಳಾ ಅಧಿಕಾರಿಗೆ ಸಿಸಿಎಲ್‌ ಮಂಜೂರು ಮಾಡಲು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸಿಎಟಿ ಆದೇಶವನ್ನು ಪುರಸ್ಕರಿಸಿರುವ ವಿಭಾಗೀಯ ಪೀಠ, ಕೇಂದ್ರ ಸರ್ಕಾರದ ಸೆಂಟರ್‌ ಫಾರ್‌ ಡೆವಲಪಮೆಂಟ್‌ ಆಫ್‌ ಅಡ್ವಾನ್ಸಡ್‌ ಕಂಪ್ಯೂಟಿಂಗ್‌ನಲ್ಲಿ (ಸಿಡಾಕ್‌) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ಫೆ.6ರಿಂದ ಮೇ 20ರವರೆಗೆ ಸಿಸಿಎಲ್‌ ರಜೆ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣದ ವಿವರ:

ಮಗನ 10ನೇ ತರಗತಿ ಪರೀಕ್ಷೆಗೆ ನೆರವಾಗಲು ಐದು ತಿಂಗಳು ಸಿಸಿಎಲ್‌ ರಜೆ ನೀಡಲು ಕವಿತಾ ವಡ್ಡೆ ಮಾಡಿದ್ದ ಮನವಿ ನಿರಾಕರಿಸಿದ್ದ ಸಿಡಾಕ್‌, ಕೇವಲ 18 ದಿನ ಮಾತ್ರ ರಜೆ ನೀಡಿತ್ತು. ಅದನ್ನು ಕವಿತಾ ಸಿಎಟಿಯಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ನಡೆಸಿದ್ದ ಸಿಎಟಿ, ಸಿಸಿಎಲ್‌ ರಜೆ ಇರುವುದೇ ಮಕ್ಕಳ ಆರೈಕೆಗೆ. ಅರ್ಜಿದಾರರ ಪುತ್ರ 10ನೇ ತರಗತಿಯಲ್ಲಿ ಓದುತ್ತಿದ್ದು, ಇದು ಮಗುವಿನ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಆಡಳಿತಾತ್ಮಕ ತೊಂದರೆ ಮತ್ತು ಮಾನವ ಸಂಪನ್ಮೂಲ ಕೊರತೆ ಕಾರಣಗಳಿಂದ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಳ್ಳಲಾಗದು. ಕವಿತಾ ಅವರಿಗೆ ಫೆ.6 ರಿಂದ ಮೇ.20 ರವರೆಗೆ ಸಿಸಿಎಲ್‌ ನೀಡಬೇಕು ಎಂದು ನಿರ್ದೇಶಿಸಿ ಫೆ.5ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ತಾಯಿಯ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವಾಗಬಹುದು

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ತಾಯಿಯ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಹಾಗಾಗಿ ಸಿಸಿಎಲ್‌ ರಜೆ ಮಗುವಿನ ಹಕ್ಕು.

ಎಲ್ಲ ರಜೆಗಳನ್ನು ಮಂಜೂರು ಮಾಡುವುದು ಅಥವಾ ಬಿಡುವುದು ಉದ್ಯೋಗದಾತರ ವಿವೇಚನೆಗೆ ಬಿಟ್ಟಿದೆ. ಆದರೆ, ಸಿಸಿಎಲ್‌ ವಿಚಾರ ಬಂದಾಗ ಅದರಲ್ಲಿ ವಿವೇಚನೆ ಅಧಿಕಾರದ ಪ್ರಶ್ನೆಯೇ ಇಲ್ಲ. ಅದು ಮಕ್ಕಳ ಆರೈಕೆಗೆಂದೇ ಮೀಸಲಿರುವುದರಿಂದ ಅದನ್ನು ನೀಡಲೇಬೇಕಾಗುತ್ತದೆ.ಅಪ್ರಾಪ್ತ ಮಕ್ಕಳ ಹಕ್ಕು ರಕ್ಷಿಸಲು ಈ ನಿಯಮವನ್ನು ರೂಪಿಸಲಾಗಿದೆ. ಹಾಗಾಗಿ ತಾಯಿ ಸಿಸಿಎಲ್‌ ಅನ್ನು ತನ್ನ ಹಕ್ಕನ್ನಾಗಿ ಕೋರಬಹುದು ಎಂದು ಆದೇಶಿಸಿದೆ. ಕವಿತಾ ವಡ್ಡೆ ಪರ ವಕೀಲ ಕೆ. ಸತೀಶ್‌ ಭಟ್‌ ವಾದಿಸಿದ್ದರು.