ಕಿತ್ತೂರು ಉತ್ಸವಕ್ಕೆ ಬಾರದ ಸಿಎಂ ಮೂಢನಂಬಿಕೆಯ ಶಿಕಾರಿಯೇ?
ಕಿತ್ತೂರು ಉತ್ಸವಕ್ಕೆ ಬಾರದ ಸಿಎಂ ಹೆಚ್.ಡಿ. ಕುಮಾರಸ್ವಾಮಿ! ಮೂಢನಂಬಿಕೆಯ ಶಿಕಾರಿಯಾದರಾ ಸಿಎಂ ಎಂಬ ಗುಮಾನಿ! ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರೆ ಅಧಿಕಾರ ಹೋಗುತ್ತಾ?! ಸಿಎಂ ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆಯಾ?! ಅಧಿಕಾರ ಹೋಗುತ್ತೆಂದು ಕಾರು ಚಾಲಕರಿಂದ ಮಾಲಾರ್ಪಣೆ ಮಾಡಿಸಿದ್ದ ಜನಪ್ರತಿನಿಧಿಗಳು
ಬೆಳಗಾವಿ(ಅ.23): ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಮೂಢನಂಬಿಕೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡ ಒಳಗಾದ್ರಾ ಎಂಬ ಅನುಮಾನ ಇದೀಗ ಮೂಡಿದೆ.
ಕಿತ್ತೂರು ಉತ್ಸವ ಉದ್ಘಾಟನೆಗೆ ಬರಬೇಕಿದ್ದ ಸಿಎಂ ಕುಮಾರಸ್ವಾಮಿ ಸಮಾರಂಭಕ್ಕೆ ಗೈರು ಹಾಜರಾಗಿರುವುದು ಇಂತದ್ದೊಂದು ಅನುಮಾನ ಮೂಡಲು ಕಾರಣವಾಗಿದೆ.
ಕಿತ್ತೂರಿನ ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಜನಪ್ರತಿನಿಧಿಗಳಲ್ಲಿದ್ದು, ಸಿಎಂ ಕೂಡ ಇದೇ ಮೂಢನಂಬಿಕೆಯ ಶಿಕಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರೆ ಅಧಿಕಾರ ಹೋಗುತ್ತದೆ ಎಂಬ ಭಯದಿಂದ ಈ ಹಿಂದೆ ಕೆಲವು ಜನಪ್ರತಿನಿಧಿಗಳು ತಮ್ಮ ಕಾರು ಚಾಲಕರಿಂದ ಮಾಲಾರ್ಪಣೆ ಮಾಡಿಸಿದ ಪ್ರಸಂಗವೂ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೆಂದ್ರ ಸ್ವಾಮಿಜಿ, ನಾಡಿನ ಹೆಮ್ಮೆಯಾದ ಕಿತ್ತೂರು ಉತ್ಸವಕ್ಕೆ ಸಿಎಂ ಕುಮರಸ್ವಾಮಿ ಬರದೇ ಇರುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.