ಕರ್ನಾಟಕದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ: ಕೇಂದ್ರ ಪ್ರಶಂಸೆ
* ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರದ ಜತೆ ಆಯುಷ್ ಮಿಶ್ರಣ
* ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಉತ್ತಮ ಫಲಿತಾಂಶ
* ಇದರ ಆಧಾರದಲ್ಲಿ ದೇಶಾದ್ಯಂತ ಜಾರಿಗೆ ಪರಿಶೀಲನೆ
ಕೆವಾಡಿಯಾ(ಜೂ.19): ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕರ್ನಾಟಕ ಮತ್ತು ಗುಜರಾತ್ನಲ್ಲಿ ಪ್ರಾಯೋಗಿಕವಾಗಿ ಆಯುಷ್ (ಸಾರವರ್ಧಕ) ವಸ್ತುಗಳನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದರಿಂದ ಉತ್ತಮ ಫಲಿತಾಂಶ ದೊರೆತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
‘ಕೇಂದ್ರ ಸರ್ಕಾರದ ನೆರವಿನಿಂದ ದೇಶಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡಲಾಗುತ್ತಿದೆ. ಕರ್ನಾಟಕ ಮತ್ತು ಗುಜರಾತ್ನಲ್ಲಿ ಈ ಆಹಾರದ ಜೊತೆಗೆ ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧೌಷಧ ಹಾಗೂ ನೈಸರ್ಗಿಕ ಚಿಕಿತ್ಸೆಗೆ ಸಂಬಂಧಿಸಿದ ಕೆಲ ಗಿಡಮೂಲಿಕೆ ಅಥವಾ ಔಷಧೀಯ ಪದಾರ್ಥಗಳನ್ನು ಬೆರೆಸಿ ನೀಡಲಾಗುತ್ತಿದೆ. ಅದರಿಂದ ಈವರೆಗೆ ಒಳ್ಳೆಯ ಫಲಿತಾಂಶ ದೊರೆತಿದೆ. ಈ ಕುರಿತ ಅಂಕಿಅಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜೊತೆ ಹಂಚಿಕೊಳ್ಳಾಗುವುದು. ನಂತರ ಮೂರನೇ ಸಂಸ್ಥೆಯೊಂದರಿಂದ ವೈದ್ಯಕೀಯ ಮೌಲ್ಯಮಾಪನ ನಡೆಸಿ, ದೇಶಾದ್ಯಂತ ಜಾರಿಗೆ ಪರಿಶೀಲಿಸಲಾಗುವುದು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗರ್ಭಿಣಿಯರ ಮನೆಗೇ ಊಟ ಕೊಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಗುಜರಾತ್ನಲ್ಲಿ ಪೌಷ್ಟಿಕ ಆಹಾರದ ಜೊತೆ ತ್ರಿಕಾಟು, ವಿದಾಂಗ, ಜೀರಿಗೆ, ಮುಷ್ಟಚೂರ್ಣ ಮುಂತಾದವುಗಳನ್ನು ಬೆರೆಸಿ ನೀಡಲಾಗುತ್ತಿದೆ. ಇದರಿಂದ ಮ್ಕಳಲ್ಲಿ ಹಸಿವು ಹೆಚ್ಚಿ, ತೂಕ ವೃದ್ಧಿಯಾಗುತ್ತಿದೆ. ಹೊಟ್ಟೆಯಲ್ಲಿ ಜಂತುಹುಳು ಹಾಗೂ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಜೀರಿಗೆ ಮುಂತಾದವುಗಳನ್ನು ಬೆರೆಸಿ ನೀಡಲಾಗುತ್ತಿದೆ. ಅದರಿಂದ ಮಹಿಳೆಯರು ಮತ್ತು ನವಜಾತ ಶಿಶುವಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದ್ದಾರೆ.