ಕರ್ನಾಟಕದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ: ಪ್ರಹ್ಲಾದ್ ಜೋಶಿ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿರುವವರು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಿ ನಿಗದಿತ ಕಾಲಾವಧಿಯೊಳಗೆ ಕೆಲಸ ಮಾಡಿಕೊಡಲು ಪಣ ತೊಡಬೇಕೆಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿವಿಮಾತು ಹೇಳಿದರು.
ಬೆಂಗಳೂರು (ಅ.23): ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡಿರುವವರು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಿ ನಿಗದಿತ ಕಾಲಾವಧಿಯೊಳಗೆ ಕೆಲಸ ಮಾಡಿಕೊಡಲು ಪಣ ತೊಡಬೇಕೆಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಿವಿಮಾತು ಹೇಳಿದರು. ಶನಿವಾರ ದೇಶದ ಅತಿದೊಡ್ಡ ರೋಜಗಾರ್ ಮೇಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದರ ಅಂಗವಾಗಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಯೋಗ ಮೇಳ’ದಲ್ಲಿ ರಾಜ್ಯದ ಕೇಂದ್ರ ಸರ್ಕಾರಿ ಕಚೇರಿಗಳಿಗೆ ನೇಮಕವಾಗಿರುವ 1000 ಹೊಸ ಉದ್ಯೋಗಿಗಳ ಪೈಕಿ ಕೆಲವರಿಗೆ ಸಾಂಕೇತಿಕವಾಗಿ ‘ಉದ್ಯೋಗ ಪ್ರಮಾಣ ಪತ್ರ’ ವಿತರಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವು ಯಾರಿಗೂ ಒಂದು ನಯಾ ಪೈಸೆ ದುಡ್ಡು ನೀಡದೆಯೇ ನಿಮ್ಮ ಸ್ವಂತ ಪ್ರತಿಭೆಯಿಂದ ಕೆಲಸ ಗಿಟ್ಟಿಸಿಕೊಂಡಿದ್ದೀರಿ. ಇಂತಹ ಸಂದರ್ಭದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎಷ್ಟೆಲ್ಲಾ ಸಹಾಯ ಮಾಡಬಹುದೋ, ಅದನ್ನು ನಿಗದಿತ ಕಾಲಾವಧಿಯೊಳಗೆ ಮಾಡಬೇಕು. ಅವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿ ಕೊರೋನಾ ಬಂದ ಮೇಲೆ ಆರ್ಥಿಕತೆ ಕುಸಿಯಿತು. ಇದರಿಂದ ಸುಧಾರಿಸಿಕೊಳ್ಳುವ ಅವಧಿಗೆ ಉಕ್ರೇನ್ ಮತ್ತು ರಷ್ಯಾದಲ್ಲಿ ಯುದ್ಧ ನಡೆದ ಪರಿಣಾಮ ಕಚ್ಚಾ ತೈಲ, ಅನಿಲ ಆಮದು ಆಗಲಿಲ್ಲ.
ಸ್ತ್ರೀಶಕ್ತಿ ಸಾಮರ್ಥ್ಯ, ವಿವೇಕಾನಂದ ಯುವಶಕ್ತಿ ಯೋಜನೆ ನವೆಂಬರಿಂದ: ಸಿಎಂ ಬೊಮ್ಮಾಯಿ
ಇದು ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಕಲ್ಲಿದ್ದಲಿನ ದರ ಕೂಡ ಹೆಚ್ಚಾಯಿತು. ಇದೆಲ್ಲಾ ಮುಗಿದ ಬಳಿಕ ದೇಶದ ಅರ್ಥಿಕತೆಯಲ್ಲಿ ಚೇತರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ವಿಶ್ವದ ನಂಬರ್ ಸ್ಥಾನದಲ್ಲಿ ಭಾರತ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಈ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ 17 ಇಲಾಖೆಗಳಿಗೆ ಆಯ್ಕೆಯಾಗಿರುವ 28 ಅಭ್ಯರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರವನ್ನು ನೀಡಿ ಅಭಿನಂದನೆ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಅಶ್ವತ್ನಾರಾಯಣ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಉದ್ಯೋಗ ಮೇಳ: ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 10 ಲಕ್ಷ ಸಿಬ್ಬಂದಿ ನೇಮಕಾತಿ ಅಭಿಯಾನ ರೋಜ್ಗಾರ್ ಮೇಳಕ್ಕೆ ಚಾಲನೆ ನೀಡಿದ್ದು, ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ 75 ಸಾವಿರ ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದೊಂದು ಮಹತ್ವದ ಉಪಕ್ರಮವಾಗಿದೆ. ಈ ಮೂಲಕ ನಿರುದ್ಯೋಗ ನಿವಾರಣೆಯ ಕನಸು ನನಸಾಗಲಿದೆ.
ಇದಕ್ಕಾಗಿ ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿಯವರಿಗೆ ಧನ್ಯವಾದ ಹೇಳುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪ್ರಧಾನಿಗಳು ಈ ಕಾರ್ಯಕ್ರಮ ಕೈಗೊಂಡಿದ್ದು, 75 ಸಾವಿರ ಯುವಕರಿಗೆ ಉದ್ಯೋಗ ಲಭಿಸಿದೆ. ಬಿಜೆಪಿ ಆಡಳಿತವುಳ್ಳ ವಿವಿಧ ರಾಜ್ಯಗಳಲ್ಲಿ ಇಂತಹ ಉದ್ಯೋಗ ಮೇಳ ನಡೆಯಲಿದೆ. ಇದರಿಂದ ಯುವ ಸಮೂಹದ ಉದ್ಯೋಗದ ಆಶಯ ಈಡೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಮಾಡುವ ಕನಸು ಇದರಿಂದ ನನಸಾಗಲಿದೆ. ಉದ್ಯಮಿಗಳು, ಕೈಗಾರಿಕೆದಾರರು ಸೇರಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ತಮ್ಮ ಸಹಾಯಹಸ್ತ ಚಾಚಲಿದ್ದಾರೆ.
Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ
ಇದು ದೇಶದ ಅಮೃತ ಕಾಲವಾಗಿದ್ದು, ಎಲ್ಲರ ಪ್ರಯತ್ನದಿಂದ ಇದು ಈಡೇರುವ ಆಶಯ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಳೆದ ಎಂಟು ವರ್ಷಗಳ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತವು 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮುನ್ನಡೆ ಸಾಧಿಸಿದೆ. ಸ್ಕಿಲ್ ಇಂಡಿಯಾ ಅಭಿಯಾನದಡಿ ಕೌಶಲ್ಯ ವೃದ್ಧಿಗೆ ಮಹತ್ವ ಕೊಟ್ಟಿದ್ದು, 1.25 ಕೋಟಿ ಯುವಕರು ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಮುದ್ರಾ ಯೋಜನೆಯಿಂದ 20 ಲಕ್ಷ ಕೋಟಿ ರು. ಸಾಲವಾಗಿ ಉದ್ಯೋಗಾಕಾಂಕ್ಷಿಗಳಿಗೆ ನೀಡಲಾಗಿದೆ. ಉತ್ಪಾದನಾ ಕ್ಷೇತ್ರ ಮತ್ತು ಪ್ರವಾಸೋದ್ಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದರು.