ಬಿಎಸ್‌ವೈ ಮನೆಗೆ ಕಲ್ಲು ತೂರಾಟದ ತಪ್ಪು ತಿಳುವಳಿಕೆ‌ ನಮ್ಮ ಜನಾಂಗದವರಿಗೆ ಆಗಿದೆ. ತಹಶೀಲ್ದಾರರಿಗೆ ಮನವಿ ಕೊಡಲು ಸಮುದಾಯ ಹೋಗಿತ್ತು. 40 ಸಾವಿರ ಜನರು ಸೇರಿದ್ದರು. ಸರಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ವಿಪಕ್ಷ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಮಾ.28): ಒಳಮೀಸಲಾತಿ ವಿರೋಧಿಸಿ ಮಾರ್ಚ್ 27ರಂದು ಯಡಿಯೂರಪ್ಪ ಅವರ ಶಿಕಾರಿಪುರ ಮನೆ ಮೇಲೆ ಕಲ್ಲು ತೂರಾಟ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆಯ ತಪ್ಪು ತಿಳುವಳಿಕೆ‌ ನಮ್ಮ ಜನಾಂಗದವರಿಗೆ ಆಗಿದೆ. ತಹಶೀಲ್ದಾರರಿಗೆ ಮನವಿ ಕೊಡಲು ಸಮುದಾಯ ಹೋಗಿತ್ತು. 40 ಸಾವಿರ ಜನರು ಸೇರಿದ್ದರು. ತತ್ತಕ್ಷಣಕ್ಕೆ ನಡೆದ ಘಟನೆ ಅದು. ಗೃಹ ಸಚಿವರು ಕತ್ತೆ ಕಾಯ್ತಾ ಇದ್ರಾ? ಇಂಟಲಿಜೆನ್ಸ್ ಇರಲಿಲ್ವಾ? ಗಲಾಟೆ ಆಗುವುದನ್ನು ತಡೆಯಬಹುದಿತ್ತು. ನಿನ್ನೆ ಆಗಿರುವ ಘಟನೆಗೆ ಸರ್ಕಾರದ ವೈಫಲ್ಯ ಕಾರಣ. ಸರ್ಕಾರವೇ ನಮ್ಮ ಜಾತಿ ನಿಂದನೆ ಮಾಡಿದೆ. ಸ್ಪರ್ಶರು ಅಸ್ಪೃಶ್ಯರು ಅಂತ ಜಾತಿಗಳನ್ನು ಕರೆದು ಸರ್ಕಾರವೇ ಜಾತಿ ನಿಂದನೆ ಮಾಡಿದೆ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಸಂವಿಧಾನದ ಪ್ರಕಾರ ಯಾವುದೇ ಸಮುದಾಯವನ್ನು ಸ್ಪೃಶ್ಯರು ಅಸ್ಪೃಶ್ಯರು ಅಂತ ಕರೆಯಬಾರದು. ಆದರೆ ಒಳಮೀಸಲಾತಿ ಹೆಚ್ಚಳ ಮಾಡಿ ಸರ್ಕಾರವೇ ನಮ್ಮ ಜಾತಿ ನಿಂದನೆ ಮಾಡಿದೆ. ಸಿಎಂ ಬೊಮ್ಮಾಯಿ ವಚನ ಭ್ರಷ್ಟರು. ಸರ್ಕಾರವೇ ಜಾತಿ ನಿಂದನೆ ಮಾಡಿದರೆ ನಾವು ನ್ಯಾಯ ಕೇಳಲು ಎಲ್ಲಿಗೆ ಹೋಗಬೇಕು?

ಬಿಜೆಪಿಯ ಎಲ್ಲಾ ಶಾಸಕರು ಸಚಿವರು ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬರಬೇಕು. ಸಚಿವ ಪ್ರಭು ಚೌಹಾಣ್ ಆಕ್ಷೇಪಣೆ ಕೊಡದೇ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಕೊಟ್ಟು ಬಂದಿದ್ದಾರೆ. ಇವರಿಗೆ, ಕೇಂದ್ರ ಸಚಿವರಿಗೆ ನಾವು ಧಿಕ್ಕಾರ ಕೂಗಬೇಕಿದೆ ಎಂದಿದ್ದಾರೆ.

ಮೀಸಲಾತಿ ಅಸಮಾಧಾನ ಇದ್ದರೆ ನಮ್ಮನೆ ಮೇಲೆ ಕಲ್ಲೆಸೆಯಿರಿ: ಸಿಎಂ ಬೊಮ್ಮಾಯಿ

101 ಜಾತಿಗಳೊಂದಿಗೆ ಚರ್ಚೆ ಮಾಡದೆ ಒಳಮೀಸಲಾತಿ ತೀರ್ಮಾನ ದುರ್ದೈವ: ಪರಮೇಶ್ವರ ನಾಯ್ಕ್ ಕಿಡಿ
ಒಳ ಮೀಸಲಾತಿ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ರಾಜ್ಯ ಸರ್ಕಾರ ಬಹಳ ತರಾತುರಿಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ತಂದಿದೆ. ಸರ್ಕಾರ ವರದಿಯನ್ನು ಒಪ್ಪಿಕೊಂಡಿದೆಯೋ ಇಲ್ವೋ ಮಾಹಿತಿಯೇ ಇಲ್ಲ. ಒಳಮೀಸಲಾತಿ ಬಗ್ಗೆ ಆಗಿರುವ ತೀರ್ಮಾನ ದುರ್ದೈವ. 101 ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಚರ್ಚೆ ಮಾಡದೆ 101 ಸಮುದಾಯಗಳನ್ನು ಒಡೆದು ಆಳುವ ಕೆಟ್ಟ ಸಂಪ್ರದಾಯಕ್ಕೆ ಸರ್ಕಾರ ನಾಂದಿ ಹಾಡಿದೆ. ಸದಾಶಿವ ಆಯೋಗದ ಸಾಧಕ ಬಾದಕ ಚರ್ಚೆಯೇ ಆಗಿಲ್ಲ. ಯಾವ ಉದ್ದೇಶಕ್ಕೆ ಒಳ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡರು? ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡಿದೆ ಎಂದು ಹೇಳಿದ್ದಾರೆ.

ಶಿಕಾರಿಪುರದಲ್ಲಿ ತಾರಕಕ್ಕೇರಿದ ಒಳ ಮೀಸಲಾತಿ ಪ್ರತಿಭಟನೆ, ಬಿಎಸ್‌ವೈ ಮನೆಗೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ!

ಪ್ರಭು ಚೌಹಾಣ್ ಸತ್ಯಕ್ಕೆ ದೂರವಾದ ಹಸಿ ಸುಳ್ಳು ಹೇಳ್ತಿದ್ದಾರೆ. ಯಾವ ಸಿಎಂ ಸಭೆ ಕರೆದಿದ್ದರು? ಯಾರ ಅಭಿಪ್ರಾಯ ತೆಗೆದುಕೊಂಡಿದ್ದೀರಿ. ಬಿಜೆಪಿಯವರು, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷ ಕುಡಚಿ ಶಾಸಕ ರಾಜೀವ್ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ವರದಿ ಸದನದ ಮುಂದೆ ಮಂಡಿಸಿಲ್ಲ. ಎಸ್.ಸಿ ಸಮುದಾಯದ ಎಲ್ಲ ಶಾಸಕರ‌ನ್ನು ಸಭೆ ಕರೆದಿಲ್ಲ. ನಮ್ಮ ಸಮುದಾಯದ ಜನರನ್ನು ಬೀದಿಗೆ ಬಿಟ್ಟಿರುವುದು ಸರಿಯಾ? ನಮ್ಮ ಮಧ್ಯೆಯೇ ಬೆಂಕಿ ಹಚ್ಚುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದ್ದಾರೆ.