ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು, ಹೀಗಂತ ಹೇಳಿದ್ಯಾರಿಗೆ?: ಸುರೇಶ್ ಕುಮಾರ್ ಸ್ಪಷ್ಟನೆ
ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು, ಹೀಗಂತ ಹೇಳಿದ್ಯಾರಿಗೆ?: ಸುರೇಶ್ ಕುಮಾರ್ ಸ್ಪಷ್ಟನೆ ಹೀಗಿದೆ.
ಬೆಂಗಳೂರು, [ಡಿ.11]: ಇಡೀ ದೇಶದ ಕಣ್ಣು ನೆಟ್ಟಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಮೋದಿ ವರ್ಸಸ್ ರಾಹುಲ್ ಗಾಂಧಿ ನಡುವಿನ ನೇರ ಹಣಾಹಣಿ ಎಂಬಂತೆ ಇದ್ದ ಈ ಪಂಚ ಯುದ್ಧದಲ್ಲಿ ಕೈ ಆರ್ಭಟಕ್ಕೆ ಕಮಲ ಪಡೆ ಮುದುರಿ ಕುಳಿತಿದೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮ್ಮದೇ ರೀತಿಯಲ್ಲಿ ಪಂಚ ರಾಜ್ಯಗಳ ರಿಸಲ್ಟ್ ಅನ್ನು ವ್ಯಂಗ್ಯ, ವಿಡಂಬನಾತ್ಮಕ, ಟೀಕೆಗಳ ಮೂಲಕ ವಿಮರ್ಶೆ ಮಾಡಿದ್ದಾರೆ.
ಈ ನಡುವೆ ಟ್ರೋಲ್ ಒಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೆಗಲೇರಿದೆ. ಕುಮಾರಸ್ವಾಮಿಯವರು "ಬೇರೆಯವರ ಹಂಗಿನಲ್ಲಿದ್ದೇನೆ ಎಂದಿದ್ದಾಗ, ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು ಎಂದು ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದರು.
ಆ ಟ್ವೀಟ್ ಅನ್ನು ದುರುಪಯೋಗ ಪಡಿಸಿಕೊಂಡಿರುವ ಕಿಡಿಗೇಡಿಗಳು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. 'ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು' ಈ ಒಂದು ವಾಕ್ಯವನ್ನು ಈಗ ಪಂಚ ರಾಜ್ಯ ಚುನಾವಣೆ ಫಲಿತಾಂಶಕ್ಕೆ ಹೋಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇದು ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ.
4 ದಿನಗಳ ಹಿಂದೆ ಮು.ಮಂ ಕುಮಾರಸ್ವಾಮಿಯವರು "ಬೇರೆಯವರ ಹಂಗಿನಲ್ಲಿದ್ದೇನೆ" ಎಂದಿದ್ದಾಗ ನಾನು "ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು" ಎಂದು ಟ್ವೀಟ್ ಮಾಡಿದ್ದೆ. ನಮ್ಮ ಪಕ್ಷದ ವಿರೋಧಿಗಳು ಇಂದಿನ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಟ್ವೀಟ್ ನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.ಇದರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ
— Sureshkumar (@nimmasuresh) December 11, 2018