ಸರ್ಕಾರದ ವಿರುದ್ಧ ಬಿಜೆಪಿಯ ಆಯನೂರು ಧರಣಿ! ತಬ್ಬಿಬ್ಬಾದ ಆಡಳಿತ ಪಕ್ಷದ ಮುಖಂಡರು
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರೇ ಧರಣಿ ನಡೆಸಿದ ಪ್ರಸಂಗ ನಡೆದಿದೆ. ಇದರಿಂದ ಆಡಳಿತ ಪಕ್ಷದ ಮುಖಂಡರೆಲ್ಲಾ ತಬ್ಬಿಬ್ಬಾಗಿದ್ದಾರೆ.
ವಿಧಾನ ಪರಿಷತ್ (ಸೆ.23): ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕಳೆದ ಐದು ತಿಂಗಳಿಂದ ವೇತನ ನೀಡದ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಆಯನೂರು ಮಂಜುನಾಥ್ ಅವರು ಸಭಾಪತಿಗಳ ಮುಂದೆ ಬಂದು ಆರಂಭಿಸಿದ ಧರಣಿಗೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಬೆಂಬಲಿಸಿದ ಪ್ರಸಂಗ ನಡೆಯಿತು.
ಮಂಗಳವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಯನೂರು ಮಂಜುನಾಥ್, ಸರ್ಕಾರಿ ಕಾಲೇಜುಗಳಲ್ಲಿ ಇರುವ ಅತಿಥಿ ಉಪನ್ಯಾಸಕರಿಗೆ ಲಾಕ್ಡೌನ್ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸಿ ವೇತನ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರೂ ಈವರೆಗೆ ವೇತನ ನೀಡಿಲ್ಲ, ಇದರಿಂದಾಗಿ ಕೆಲವು ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಪ.ಪೂ. ಅತಿಥಿ ಉಪನ್ಯಾಸಕರಿಗೆ ಶೀಘ್ರ ಬಾಕಿ ವೇತನ: ಸಿಎಂ
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಆಯನೂರು ಧರಣಿ ಆರಂಭಿಸಿದರು. ಆಗ ತಬ್ಬಿಬ್ಬಾದ ಪೂಜಾರಿ, ‘ಆಡಳಿತ ಪಕ್ಷದ ಸದಸ್ಯರೇ ಧರಣಿ ಮಾಡುವ ಪ್ರಸಂಗ ಬರಬಾರದಿತ್ತು’ ಎಂದರು. ನಂತರ ಜೆಡಿಎಸ್ನ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಕಾಂಗ್ರೆಸ್ನ ಕೆ.ಸಿ. ಕೊಂಡಯ್ಯ, ನಾರಾಯಣಸ್ವಾಮಿ ಧರಣಿಯಲ್ಲಿ ಭಾಗಿಯಾದರು.
ಕೊನೆಗೆ ಸಿಎಂ ಆಗಮಿಸಿ ಬಾಕಿ ವೇತನ ನೀಡುವ ಘೋಷಣೆ ಮಾಡಿದಾಗ ಧರಣಿ ನಿಂತಿತು.