Bengaluru News: ಆಟದ ಮೈದಾನದ ವಿಷಯಕ್ಕೆ ಬಿಜೆಪಿ-ಕಾಂಗ್ರೆಸ್ ಜಟಾಪಟಿ!
ನಗರದ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ವಾರ್ಡ್ನ ಮದ್ದೂರಮ್ಮ ಆಟದ ಮೈದಾನದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಂದಾದ ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಡಾ ಶಂಕರ ಗುಹಾ ದ್ವಾರಕನಾಥ್ ನಡುವೆ ಮೈದಾನದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು (ಡಿ.6) : ನಗರದ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರೀನಗರ ವಾರ್ಡ್ನ ಮದ್ದೂರಮ್ಮ ಆಟದ ಮೈದಾನದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಂದಾದ ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಡಾ ಶಂಕರ ಗುಹಾ ದ್ವಾರಕನಾಥ್ ನಡುವೆ ಮೈದಾನದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆದಿದೆ.
ಮೈದಾನದಲ್ಲಿ ಸೋಮವಾರ ಬೆಳಗ್ಗೆ ಗುದ್ದಲಿ ಪೂಜೆ ನಡೆಸಲು ರವಿ ಸುಬ್ರಹ್ಮಣ್ಯ ಸಿದ್ಧತೆ ಮಾಡಿಕೊಂಡಿದ್ದರು. ಶಾಮಿಯಾನ ಅಳವಡಿಸಿ ಪೂಜೆಗೆ ತಯಾರಿ ಮಾಡಿಕೊಳ್ಳುವ ವೇಳೆ ಸ್ಥಳಕ್ಕೆ ಆಗ್ರಹಿಸಿದ ಶಂಕರ ಗುಹಾ ಅವರು ಬಸವನಗುಡಿಯಲ್ಲಿ ಒಂದೊಂದಾಗಿ ಆಟದ ಮೈದಾನಗಳು ಮಾಯವಾಗುತ್ತಿವೆ. ನಿಮಗೆ ಬೇರೆಲ್ಲವೂ ಕಟ್ಟಡ ನಿರ್ಮಾಣಕ್ಕೆ ಜಾಗ ಸಿಗಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ರವಿಸುಬ್ರಹ್ಮಣ್ಯ, ಇಡೀ ಕ್ಷೇತ್ರದಲ್ಲಿ ಒಂದೂ ಪಿಯು, ಪದವಿ ಕಾಲೇಜು ಇಲ್ಲ ಎಂದು ಸ್ಥಳೀಯರು ಕೇಳಿದ್ದಾರೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ವಿನಾಕಾರಣ ಅಭಿವೃದ್ಧಿ ಚಟುವಟಿಕೆಗೆ ಅಡ್ಡಿಪಡಿಸಲು ಬರಬೇಡಿ ಎಂದರು.
ಈ ವೇಳೆ ಶಂಕರ ಗುಹಾ, ‘ಮೈದಾನದಲ್ಲೇ ಯಾಕೆ ನಿರ್ಮಿಸಬೇಕು. ಎದುರುಗಡೆ ಸರ್ಕಾರಿ ಶಾಲೆಯಿದೆ. ಅಲ್ಲಿಯೇ ಸಾಕಷ್ಟುಜಾಗವಿದೆ. ಅದನ್ನು ಬಳಸಿಕೊಳ್ಳದೆ ಇಷ್ಟುಮಂದಿ ಮಕ್ಕಳು ಆಟವಾಡುವ ಮೈದಾನವನ್ನು ಯಾಕೆ ಹಾಳು ಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದದರು.
ಮಧ್ಯಪ್ರವೇಶಿಸಿದ ರವಿಸುಬಹ್ಮಣ್ಯ ಬೆಂಬಲಿಗರು, ‘ಹತ್ತು ವರ್ಷದಿಂದ ಇಲ್ಲದಿರುವವರು ಈಗ ಬಂದಿದ್ದೀರಿ. ನಮಗೆ ರಾಜಕಾರಣ ಹೇಳಿಕೊಡಬೇಡಿ. ಸುಮ್ಮನೆ ಹೋಗಿ’ ಎಂದು ತರಾಟೆಗೆ ತೆಗೆದುಕೊಂಡರು. ‘ಹೋಗದಿದ್ದರೆ ಏನು ಮಾಡುತ್ತೀರಿ, ಏನು ಹೊಡೆಯುತ್ತೀರಾ’ ಎಂದು ಶಂಕರ ಗುಹಾ ಕೂಡ ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಪಾಲಿಕೆ ಮಾಜಿ ಸದಸ್ಯ ಸಂಗಾತಿ ವೆಂಕಟೇಶ್ ಸೇರಿದಂತೆ ಹಲವರು ಶಂಕರ ಗುಹಾ ಅವರ ಕಡೆ ನುಗ್ಗಿದಾಗ ಪೊಲೀಸರು ಮಧ್ಯಪ್ರವೇಶಿಸಿ ಶಂಕರ ಗುಹಾ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಬಳಿಕ ಪೂಜೆ ನೆರವೇರಿಸಲಾಯಿತು.
ಅನಂತ್ ಮನೆಯಲ್ಲೇ ಆಡಿ ಬೆಳೆದ ಹುಡುಗ ತೇಜಸ್ವಿ!
‘ಶೇ.40 ಕಮಿಷನ್ ಆಸೆಗೆ ಮೈದಾನಗಳು ಮಾಯ’
ಈ ಬಗೆ ಪತ್ರಕಾ ಹೇಳಿಕೆ ನೀಡಿರುವ ಶಂಕರ ಗುಹಾ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಬೇಕು ಎಂದು ನಿರ್ಧರಿಸಿದ್ದರು. ಬಸವನಗುಡಿಯಲ್ಲಿ ಮೈದಾನಗಳೇ ಇಲ್ಲ. ಹೀಗಿದ್ದರೂ 40 ಪರ್ಸೆಂಟ್ ಕಮಿಷನ್ ಆಸೆಗೆ ಎಲ್ಲೋ ಒಂದು ಕಡೆ ಮಾಡಬೇಕು ಎನ್ನುವ ಕಾರಣಕ್ಕೆ ಮೈದಾನದಲ್ಲೇ ಕಾಮಗಾರಿಗೆ ಮುಂದಾಗಿದ್ದಾರೆ. ಇದರ ಬದಲು ಎದುರುಗಡೆ ಇರುವ ಸರ್ಕಾರಿ ಶಾಲಾ-ಕಾಲೇಜು ಜಾಗದಲ್ಲಿ ನಿರ್ಮಿಸಲಿ ಎಂದು ಹೇಳಿದ್ದಾರೆ.