Asianet Suvarna News Asianet Suvarna News

ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್

ಬೆಂಗಳೂರು ನಗರಕ್ಕೆ ಜುಲೈವರೆಗೆ 8 ಟಿಎಂಸಿ ನೀರು ಅಗತ್ಯವಿದೆ. ಆದರೆ, ಕೆಆರ್‌ಎಸ್‌ ಜಲಾಶಯದಲ್ಲಿ 34 ಟಿಎಂಸಿ ನೀರಿದ್ದು, ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

Bengaluru needs 8 TMC water end of July but KRS Dam has 34 TMC water says Ram Prasath Manohar sat
Author
First Published Mar 9, 2024, 6:42 PM IST

ಬೆಂಗಳೂರು (ಮಾ.09): ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನರಿಗೆ ಜುಲೈವರೆಗೆ ನೀರು ಪೂರೈಸಲು ಕೇವಲ 8 ಟಿಎಂಸಿ ನೀರು ಅಗತ್ಯವಿದೆ. ಆದರೆ, ಕೆಆರ್‌ಎಸ್ ಜಲಾಶಯದಲ್ಲಿ ಈಗ 34 ಟಿಎಂಸಿ ನೀರಿದೆ. ಆದ್ದರಿಂದ ಬೆಂಗಳೂರಿಗೆ ಯಾವುದೇ ನೀರಿನ ಅಭಾವ ಉಂಟಾಗುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹತ್ ಹೇಳಿದ್ದಾರೆ.

ಬೆಂಗಳೂರಿಗೆ ಜಲಕ್ಷಾಮ ಉಂಟಾಗಿದೆ ಎಂಬ ವರದಿಗಳ ಕುರಿತು ಸುದ್ದಿಗೋಷ್ಠಿ ಮಾಡಿದ ಅವರು, ಬೆಂಗಳೂರಿಗೆ ಯಾವುದೇ ಜಲಕ್ಷಾಮ ಎದುರಾಗಿಲ್ಲ. ಕಾವೇರಿ ನದಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಜಲಮಂಡಳಿಯು ಬದ್ಧವಾಗಿದೆ. ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಪ್ರದೇಶಗಳಿಗೆ 1470 ಎಂಎಲ್‍ಡಿ ಕಾವೇರಿ ನೀರನ್ನು ನಿತ್ಯ ಸರಬರಾಜು ಮಾಡಲಾಗುತ್ತಿದೆ. ಈ ಸರಬರಾಜಿನಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಬೆಂಗಳೂರು ನಗರಕ್ಕೆ ಬರುವ ನೀರು ಬರುತ್ತಿದೆ. ನಗರದಲ್ಲಿ ಸಮರ್ಪಕ ನೀರು ಸರಬರಾಜಿಗೂ ಸಹ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬದ್ಧವಾಗಿದ್ದು, ನಗರದ ಜನರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ನಮ್ಮನೆ ಬೋರ್‌ವೆಲ್‌ನಲ್ಲೂ ನೀರಿಲ್ಲ, ಬೇರೆಡೆಯಿಂದ ತರಿಸ್ತಿದ್ದೀವಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ನಗರಕ್ಕೆ ಒಂದು ತಿಂಗಳಿಗೆ 1.54 ಟಿಎಂಸಿ ನೀರು ಅಗತ್ಯವಾಗಿದೆ. ಮಾರ್ಚ್ ತಿಂಗಳಿಂದ ಜುಲೈ ಅಂತ್ಯದವರೆಗೆ ಒಟ್ಟಾರೆ 8 ಟಿಎಂಸಿ ಅಗತ್ಯವಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರುವ ನಗರಗಳಿಗೆ (ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಇತರೆ...) ಜುಲೈ ಅಂತ್ಯದವರೆಗೆ ಒಟ್ಟು 17 ಟಿಎಂಸಿ ನೀರು ಬೇಕಾಗಿದೆ. ಆದರೆ, ಕಾವೇರಿ ಜಲಾಶಯಗಳಲ್ಲಿ ಒಟ್ಟು 34 ಟಿಎಂಸಿ ನೀರು ಸಂಗ್ರಹವಿದೆ. ಹೀಗಾಗಿ, ನಮ್ಮ ಬೇಡಿಕೆಗಿಂತ ಎರಡುಪಟ್ಟು ನೀರಿನ ಸಂಗ್ರಹ ಜಲಾಶಯಗಳಲ್ಲಿದೆ. ಆದ್ದರಿಂದ ಜನರು ಯಾವುದೇ ರೀತಿಯ ಆತಂಕಪಡುವುದು ಬೇಡ. ನೀರನ್ನು ನಗರಕ್ಕೆ ಸಮರ್ಪಕವಾಗಿ ಸರಬರಾಜು ಮಾಡಲು ಬದ್ಧವಾಗಿದ್ದೇವೆ ಎಂದು ಭರವಸೆ ನೀಡಿದರು.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಪ್ರತಿನಿತ್ಯ 2,100 ಎಂಎಲ್‍ಡಿ ನೀರು ಅಗತ್ಯವಿದೆ. (ಓರ್ವ ಮನುಷ್ಯನಿಗೆ ನಿತ್ಯದ ಸರಾಸರಿ 150 ಲೀಟರ್ ನೀರು ಅಗತ್ಯವಾಗಿದೆ). ಅಂದರೆ, ಬೆಂಗಳೂರಿಗೆ ಪ್ರಸ್ತುತ ಕಾವೇರಿ ನಾಲ್ಕು ಹಂತಗಳಿಂದ 1,450 ಎಂಎಲ್‍ಡಿ ನೀರು ಸರಬರಾಜು ಆಗುತ್ತಿದೆ. ಅದನ್ನು ನಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.

ಬೆಂಗಳೂರು: ನೀರಿನ ಸಮಸ್ಯೆ ಇದೆಯೇ?: ಈ ಅಧಿಕಾರಿಗಳಿಗೆ ಕರೆ ಮಾಡಿ

ಬೆಂಗಳೂರು ಹೊರವಲಯದ 110 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಉಳಿದ 650 ಎಂಎಲ್‍ಡಿ ನೀರಿನ ಸಮಸ್ಯೆ ಉಂಟಾಗಿದೆ. ಇನ್ನು ಬೆಂಗಳೂರು ನಗರದಲ್ಲಿನ ಅಂತರ್ಜಲ ಮಟ್ಟ ಕುಸಿತಕ್ಕೆ ನಾವೆಲ್ಲರು ಕಾರಣರಾಗಿದ್ದೇವೆ. ನಗರದ ಹೊರವಲಯದಲ್ಲಿ ಮಿತಿಮೀರಿ ಅಪಾರ್ಟ್‍ಮೆಂಟ್‍ಗಳು ಬೆಳೆದಿದ್ದು, ಇವರು ಯಾರೂ ಕೂಡ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರಲಿಲ್ಲ. ಅಂದರೆ, ಎಲ್ಲರೂ ಬೋರವೆಲ್‍ಗಳನ್ನು ನೆಚ್ಚಿಕೊಂಡಿದ್ದರು. ಈಗ ಬೇಸಿಗೆ ಕಾಲ ಆರಂಭವಾದ್ದರಿಂದ ಅಂತರ್ಜಲಮಟ್ಟ ಕುಸಿತಗೊಂಡು ನೀರು ಬತ್ತಿಹೋಗಿದೆ. ಹೀಗಾಗಿ, ನಗರದ ಹೊರ ವಲಯಗಳಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇನ್ನು ಬೋರವೆಲ್‍ಗಳ ಮೇಲೆ ಅವಲಂಬಿಸಿರುವವರ ಸಮಸ್ಯೆ ಬಗೆಹರಿಸಲು ಜಲಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios