ಬೇಲೂರಿನಲ್ಲಿ ಗಣಪತಿ ಮೂರ್ತಿಗೆ ಚಪ್ಪಲಿ ಇಟ್ಟ ಪ್ರಕರಣವನ್ನು ಸಿ.ಟಿ. ರವಿ ವ್ಯವಸ್ಥಿತ ಷಡ್ಯಂತ್ರ ಎಂದು ಕರೆದಿದ್ದಾರೆ. ಇದು ಮಾನಸಿಕ ಅಸ್ವಸ್ಥರ ಕೃತ್ಯವಲ್ಲ, ಬದಲಾಗಿ ಹಿಂದೂ ಸಮಾಜವನ್ನು ಕೆರಳಿಸುವ ಹುನ್ನಾರ ಎಂದಿರುವ ಅವರು, ಇದರ ಹಿಂದೆ ದೇಶಿ ಹಾಗೂ ವಿದೇಶಿ ರಾಷ್ಟ್ರವಿರೋಧಿ ಶಕ್ತಿಗಳ ಕೈವಾಡವಿದೆ ಎಂದರು.

ಹಾಸನ (ಸೆ.21): ಬೇಲೂರಿನಲ್ಲಿ ಗಣಪತಿ ಮೂರ್ತಿಯ ಮೇಲೆ ಚಪ್ಪಲಿ ಇಟ್ಟಿದ್ದ ಪ್ರಕರಣದ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಮಾನಸಿಕ ಅಸ್ವಸ್ಥರ ಕೃತ್ಯವಲ್ಲ, ಬದಲಾಗಿ ಹಿಂದೂ ಸಮಾಜವನ್ನು ಕೆರಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೇಲೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟನೆಯ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. 'ಯಾಕೆ ಹಿಂದೂ ಸಮಾಜವನ್ನೇ ಪದೇ ಪದೇ ಕೆಣಕುತ್ತಾರೆ? ಹಿಂದೆಯೂ ಹಸುವಿನ ಕೆಚ್ಚಲು ಕತ್ತರಿಸಿದಾಗ, ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದಾಗಲೂ ಇದೇ ರೀತಿ 'ಮಾನಸಿಕ ಅಸ್ವಸ್ಥರು' ಅಥವಾ 'ಕಿಡಿಗೇಡಿಗಳು' ಎಂಬ ಕಥೆಗಳನ್ನು ಹೇಳಲಾಗುತ್ತದೆ. ಇದು ಮಾನಸಿಕ ಅಸ್ವಸ್ಥತೆಯೋ ಅಥವಾ ಅಸ್ವಸ್ಥರ ನಾಟಕವೋ? ಎಂದು ಪ್ರಶ್ನಿಸಿದರು.

ಮಾನಸಿಕ ಅಸ್ವಸ್ಥೆಗೆ ಮುಖ ಮುಚ್ಚಿಕೊಳ್ಳುವ ಬುದ್ಧಿ ಇದೆಯೇ?

ಘಟನೆ ನಡೆಸಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ಹೇಳಿರುವುದಕ್ಕೆ ಸಿ.ಟಿ. ರವಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಒಂದು ವೇಳೆ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೆ, ಮುಖ ಮುಚ್ಚಿಕೊಂಡು ದೇವಾಲಯಕ್ಕೆ ಪ್ರವೇಶಿಸುವಷ್ಟು ಬುದ್ಧಿ ಆಕೆಗೆ ಹೇಗೆ ಬಂತು? ಗಣೇಶನ ಮೂರ್ತಿ ಮೇಲೆ ಚಪ್ಪಲಿ ಇಡುವಷ್ಟು ಪ್ರಜ್ಞೆ ಅವಳಿಗಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. ಇದು ಶಾಂತಿ ಕದಡಲು ಮತ್ತು ಹಿಂದೂ-ಮುಸ್ಲಿಂ ನಡುವೆ ಜಗಳ ತಂದಿಡಲು ನಡೆಯುತ್ತಿರುವ ಷಡ್ಯಂತ್ರದ ಒಂದು ಭಾಗ. ಇದಕ್ಕೆ ದೇಶಿ ಹಾಗೂ ವಿದೇಶಿ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಕಥೆಗಳನ್ನು ಕಟ್ಟಬೇಡಿ, ಸೂಕ್ತ ತನಿಖೆ ನಡೆಸಿ:

ಪೊಲೀಸರು ಕೇವಲ ಊಹೆಗಳ ಮೇಲೆ ಹೇಳಿಕೆಗಳನ್ನು ನೀಡದೆ, ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು. 'ಮುಖದಲ್ಲಿ ಕ್ಲಾರಿಟಿ ಸಿಗುತ್ತಿಲ್ಲ, ಅನುಮಾನದ ಮೇಲೆ ತಂಡಗಳನ್ನು ರಚಿಸಿದ್ದೇವೆ ಎಂಬ ಉತ್ತರ ನಮಗೆ ಬೇಕಾಗಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಟಕಟೆಗೆ ನಿಲ್ಲಿಸಬೇಕು. ಪೂರ್ತಿ ತಲೆ ಕೆಟ್ಟವರು ಇಂತಹ ಕೆಲಸ ಮಾಡುವುದಿಲ್ಲ. ಇಂತಹ ಕೆಲಸಗಳ ಹಿಂದೆ ಬೇರೆಯವರ ಕೈವಾಡ ಇರಬಹುದು, ಅವರನ್ನು ಬಳಸಿಕೊಂಡು ಬೇರೆಯವರು ಈ ಕೃತ್ಯ ಎಸಗಿರಬಹುದು' ಎಂದರು.

ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ ಎಂದು ಎಚ್ಚರಿಸಿದ ಅವರು, 'ಭಾವನೆಗಳ ಜೊತೆ ಆಟವಾಡಿದರೆ ಏನಾಗುತ್ತದೆ ಎಂದು ಬ್ರಿಟಿಷರು ಹಿಂದೆಯೇ ಅನುಭವಿಸಿದ್ದಾರೆ. ಈ ಹೋರಾಟದಲ್ಲಿ ತಾವು ಬೇಲೂರು ಜನರೊಂದಿಗೆ ಇರುವುದಾಗಿ ಸಿ.ಟಿ. ರವಿ ಸ್ಪಷ್ಟಪಡಿಸಿದರು.

ಮಹಿಳೆ ಪತ್ತೆಯಾಗಿಲ್ಲವೆಂದರೆ ನಾಳೆ ಬೇಲೂರು ಬಂದ್:

ಬೇಲೂರಲ್ಲಿ ಗಣಪತಿಗೆ ಚಪ್ಪಲಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಅವರು, ಸಂಜೆ ವೇಳೆಗೆ ಆರೋಪಿ ಬಗ್ಗೆ ಪತ್ತೆ ಮಾಡಿಲ್ಲವೆಂದರೆ ನಾಳೆ ಬೆಳಗ್ಗೆಯಿಂದ ಬೇಲೂರು ಬಂದ್‌ಗೆ ಕರೆ ನೀಡುತ್ತೇವೆ. ಈ ಪ್ರತಿಭಟನೆ ಯಲ್ಲಿ ಎಲ್ಲರೂ ಭಾಗಿ ಆಗಬೇಕು. ನಾಳೆ ಸಂತೆ ಇದೆ ಆದರೂ ಎಲ್ಲಾ ರೈತಪಿ ಜನರು ಬಂದ್ ನಲ್ಲಿ ಕರೆ ಕೊಡ್ತಿದು ರಾಜ್ಯ ವ್ಯಾಪಿ ಹೋರಾಟ ಆಗುತ್ತದೆ. ಮಹಿಳೆ ಬಗ್ಗೆ ಪೊಲೀಸ್ ಮರೆಮಾಚ್ತಾ ಇದ್ದಾರೆ ಅನ್ನೊ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.