ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ- ಯಲ್ಲೋ ಅಲರ್ಟ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮವಾಗಿ ರಾಜ್ಯದ ಹಲವೆಡೆ ಮುಂದಿನ 5 ದಿನಗಳು ಸಾಧಾರಣ ಮಳೆಯಾಗಲಿದೆ.
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮವಾಗಿ ರಾಜ್ಯದ ಹಲವೆಡೆ ಮುಂದಿನ 5 ದಿನಗಳು ಸಾಧಾರಣ ಮಳೆಯಾಗಲಿದೆ. ಅದರಲ್ಲಿಯೂ ದಕ್ಷಿಣ ಒಳನಾಡಿನಲ್ಲಿ ನಾಳೆಯಿಂದ ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಪ್ರಸಾದ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಭರ್ಜರಿ ಮಳೆ (Rain) ಯಾಗಿದ್ದು, ಎಲ್ಲ ಹಳ್ಳ-ಕೊಳ್ಳ, ಕೆರೆ-ಕಟ್ಟೆ, ಜೀವನಾಡಿ ನದಿಗಳು ಭರ್ತಿಯಾಗಿವೆ. ಜತೆಗೆ, ಹಿಂಗಾರು ಮಳೆ (monsoon rain) ಕೂಡ ಉತ್ತಮ ಆರಂಭವನ್ನು ಕಂಡಿದ್ದು, ಕಳೆದ ಒಂದು ತಿಂಗಳಿಂದ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಈಗ ಪುನಃ ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಉಂಟಾಗಿದ್ದು, ನೈರುತ್ಯ ಮಾನ್ಸೂನ್ ಮಾರುತಗಳು ಹೆಚ್ಚು ಮಳೆಯನ್ನು ಸುರಿಸಲಿವೆ. ಇದರ ಪರಿಣಾಮ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ (Southern hinterland) ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಕಂಡುಬಂದಿದೆ. ಆದರೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 5 ದಿನ ಸಾಧಾರಣ ಮಳೆ ಮುನ್ಸೂಚನೆ ಲಭ್ಯವಾಗಿದೆ.
ಎಲ್ಲೆಲ್ಲಿ ಯಾವ ಅಲರ್ಟ್:
ಕರಾವಳಿ ಪ್ರದೇಶದ ವಿವಿಧೆಡೆ ಇಂದು ಮತ್ತು ನಾಳೆ ಸಾಧಾರಣ ಮಳೆ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ನ.13ರಿಂದ 15ರವರೆಗೆ ಕೆಲವೆಡೆ ಸಾಧಾರಣ ಮಳೆ(Rain)ಯಾಗಲಿದೆ. ಆದರೆ, ನ.12ರಿಂದ ದಕ್ಷಿಣ ಒಳನಾಡಿಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಕೊಡಗು (kodagu), ಚಾಮರಾಜನಗರ (chamarajanagar), ಮೈಸೂರು(mysore, ಕೋಲಾರ (Kolar), ಮಂಡ್ಯ (Mandya), ರಾಮನಗರ (Ramanagar) ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳು ಗುಡುಗು- ಮಿಂಚು ಸಹಿತ ಮಳೆಯಾಗಲಿದ್ದು, ಕೃಷಿ ಬೆಳೆಗಳ ಕಟಾವು ಕಾರ್ಯಕ್ಕೆ ಬಿಡುವು ನೀಡುವುದು ಸೂಕ್ತವಾಗಿದೆ. ಜತೆಗೆ, ಈಗಾಗಲೇ ಕಟಾವು ಮಾಡಿದ ಬೆಳೆಗಳ ಒಕ್ಕಣೆ ಕಾರ್ಯವನ್ನು ಮುಂದೂಡವುದು ಅನಿವಾರ್ಯ ಆಗಲಿದೆ.
ಬೆಂಗಳೂರಿನಲ್ಲೂ ಮಳೆ:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮುಂದಿನ 3 ದಿನ ಸಾಧಾರಣ ಮಳೆ ಸಾಧ್ಯತೆಯಿದೆ. ಬೆಳಗ್ಗೆಯಿಂದಲೆ ದಟ್ಟ ಮಂಜು ಸಹಿತ ಜಿಟಿ ಜಿಟಿ ಮಳೆ ಆಗುವ ಸಾಧ್ಯತೆಯಿದೆ. ಈಗಾಗಲೇ ಏಪ್ರಿಲ್ ತಿಂಗಳಿಂದ ಸೆಪ್ಟಂಬರ್ ತಿಂಗಳ ಅಂತರದಲ್ಲಿ ಸುರಿಧ ಭಾರಿ ಮಳೆಯಿಂದಾಗಿ ಮಹದೇವಪುರ (Mahadevapura, ಸರ್ಜಾಪುರ (Sarjapura), ಬೊಮ್ಮನಹಳ್ಳಿ ಸೇರಿ ವಿವಿಧೆಡೆ ಐದಾರು ಬಾರಿ ಪ್ರವಾಹ (Flood) ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಸಾಧಾರಣ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಡುವಂತಾಗಿದೆ. ಭಾರಿ ಮಳೆಯಾದಲ್ಲಿ ತಗ್ಗು ಪ್ರದೇಶದ (Down Areas) ಜನರು ನಿದ್ದೆಗೆಡುವ ಪರಿಸ್ಥಿತಿ ಮುಂದುವರೆಯಲಿದೆ. ಜತೆಗೆ, ಬಿಬಿಎಂಪಿ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿ ಮಾಡಲು ಅಡ್ಡಿ ಉಂಟಾಗಲಿದೆ.
ರಾಜಕಾಲುವೆ ಒತ್ತುವರಿಗೆ ಸಿಗದ ಮುಕ್ತಿ:
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 620ಕ್ಕೂ ಅಧಿಕ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ (Encroachment) ಮಾಡಿರುವ ಪ್ರಕರಣಗಳಿವೆ. ಆದರೆ, ಕಳೆದೆರಡು ತಿಂಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಬಿಬಿಎಂಪಿ ಈವರೆಗೆ 120ಕ್ಕೂ ಅಧಿಕ ಒತ್ತುವರಿ ತೆರವು ಮಾಡಿದೆ. ಇದರಲ್ಲಿಯೂ ಬಹುತೇಕ ಪ್ರಕರಣ ಕಾಂಪೌಂಡ್, ರಸ್ತೆ, ಗೋಡೆ ಮತ್ತು ಕಿಟಕಿಗಳನ್ನು ಮಾತ್ರ ಒಡೆದು ಹಾಕಲಾಗಿದೆ. ಈವರೆಗೆ ಒಂದೇ ಒಂದು ಮನೆ ಅಥವಾ ದೊಡ್ಡ ಕಟ್ಟಡಗಳನ್ನು ತೆರವು (Remove) ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ಸಫಲವಾಗಿಲ್ಲ. ಜತೆಗೆ, ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ಹಂಚಿಕೆಯಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಪಾಲಿಕೆಯಿಂದ ಮಳೆಯ ಮುನ್ಸೂಚನೆ ಒಡ್ಡಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳುವ ಕಾರ್ಯವನ್ನು ಮುಂದೂಡಲಾಗುತ್ತಿದೆ.