Asianet Suvarna News Asianet Suvarna News

ನಿಜಗುಣಾನಂದ ಶ್ರೀಗೆ ಜೀವ ಬೆದರಿಕೆ ಪತ್ರ; 'ಇದು ಲವ್ ಲೆಟರ್' - ಸ್ವಾಮೀಜಿ

ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ. ಆಗಸ್ಟ್ 8ರಂದೇ ಜೀವ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Bailur Nijagunananda Swamiji received a letter threatening his life at belgum rav
Author
First Published Sep 10, 2023, 6:10 AM IST

ಬೆಳಗಾವಿ (ಸೆ.10) :  ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ.

ಆಗಸ್ಟ್ 8ರಂದೇ ಜೀವ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬೆದರಿಕೆ ಪತ್ರದಲ್ಲಿ 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ. ಇನ್ನು ದಿನಗಳನ್ನು ಎಣಿಸು ಎಂದು ಪೋಸ್ಟ್ ಮೂಲಕ ಜೀವ ಬದರಿಕೆ ಪತ್ರ ಮಠಕ್ಕೆ ಬಂದಿದೆ. ತಮಗೆ ಬೆದರಿಕೆ ಪತ್ರ ಬಂದಿರುವ ಕುರಿತು ಶ್ರೀಗಳು ತಮ್ಮ ಭಕ್ತರಿಗೆ ವಿಷಯ ತಿಳಿಸಿದ್ದಾರೆ.

2020ರಲ್ಲಿ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಇದೀಗ ಮತ್ತೆ ಜೀವ ಬೆದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಸ್ವಾಮೀಜಿ ಪ್ರಮುಖ ಲಿಂಗಾಯತ ಸ್ವಾಮೀಜಿಗಳಲ್ಲಿ ಒಬ್ಬರು. ದಶಕಗಳಿಂದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿದ್ದಾರೆ. ತಮ್ಮ ವಿಚಾರಗಳನ್ನು ಬಿತ್ತುತ್ತಾ ಬಂದಿದ್ದಾರೆ. ಮೂರ್ತಿ ಪೂಜೆ, ಮೌಢ್ಯ ವಿರೋಧಿ ವಿಚಾರಗಳನ್ನು ಅವರ ಪ್ರವಚನದಲ್ಲಿ ಕಾಣಬಹುದಾಗಿದೆ.

ಸಾಹಿತಿಗಳನ್ನು ಬೆದರಿಸಿದವರ ಮೇಲೆ ಕಠಿಣ ಕ್ರಮ ಖಚಿತ: ಸಿದ್ದರಾಮಯ್ಯ

ಜೀವ ಬೆದರಿಕೆ ಪತ್ರದಲ್ಲಿಏನಿದೆ?:

ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ನಿಜಗುಣನಂದಾ ನಿನ್ನ ಸಾವು 2020 ರಲ್ಲಿತಪ್ಪಿರಬಹುದು. 2023 ರಲ್ಲಿ ತಪ್ಪುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಅತಿ ಬೇಗ ನಿನ್ನ ತಿಥಿಗೆ ನಿನ್ನ ಭಕ್ತಾದಿಗಳಿಗೆ ಹೇಳು. ನಮ್ಮ ಧರ್ಮ ದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿದೆ. ಇನ್ನು ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಸಹಿಷ್ಣು ಹಿಂದೂ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಆರೋಪಿಗಳ ಬಂಧನಕ್ಕೆ ಜಗದೀಶ ಶೆಟ್ಟರ್‌ ಆಗ್ರಹ:

ಬೈಲೂರು ನಿಜಗುಣಾನಂದ ಶ್ರೀ(life threat letter to nijagunananda swamiji)ಗೆ ಜೀವ ಬೆದರಿಕೆ ಕುರಿತು ಬೈಲೂರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish shettar)ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಕಲ್ಯಾಣ ಕ್ರಾಂತಿ ಸಮಯದಲ್ಲಿ ಬಸವಣ್ಣನಿಗೆ ಹೀಗೆ ಕಿರುಕುಳ ನೀಡಲಾಗಿತ್ತು. ಮೂಡನಂಬಿಕೆ, ವೈಚಾರಿಕತೆ ಬಗ್ಗೆ ಮಾತನಾಡುವ ನಿಜಗುಣಾನಂದ ಸ್ವಾಮೀಜಿಗೂ ಬೆದರಿಕೆ ಬರುತ್ತಿವೆ. ನಾನು ಕೂಡ ಮುಖ್ಯಮಂತ್ರಿ, ಗೃಹಸಚಿವರ ಜೊತೆಗೆ ಮಾತನಾಡುತ್ತೇನೆ. ಆರೋಪಿಗಳ ಬಂಧನ ಜೊತೆಗೆ ಸ್ವಾಮೀಜಿ ‌ಭದ್ರತೆ ಒದಗಿಸುವಂತೆ ಕೋರುತ್ತೇನೆ ಎಂದರು.

ಬಸವಣ್ಣನವರ ರೀತಿಯಲ್ಲಿ ನಿಜಗುಣಾನಂದ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಬಸವ ತತ್ವ ಪ್ರಚಾರ ಮಾಡುತ್ತಾರೆ. ವಸ್ತು ಸ್ಥಿತಿ ಹೇಳುತ್ತಾರೆ. ಹೀಗಾಗಿ ಬೆದರಿಕೆ ಬರುವಂತಹದ್ದು. ಆದರೆ, ಹೆದರುವ ಅವಶ್ಯಕತೆ ಇಲ್ಲಾ, ಏನೂ ಆಗುವುದಿಲ್ಲ. ಈ‌ ರೀತಿ ಬೆದರಿಕೆ ಹಾಕುವವರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ವಾಮೀಜಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ಈ ಕುರಿತು ನಾನು ಸಿಎಂ ಮತ್ತು ಗೃಹಮಂತ್ರಿ ಅವರ ಗಮನಕ್ಕೆ ತರುತ್ತೇನೆ. ನನ್ನ ಗಮನಕ್ಕೆ ಬಂದಿರಲಿಲ್ಲ ಸರ್ಕಾರ ರಕ್ಷಣೆ ಕೊಡುವ ಕೆಲಸ ಆಗದಿದ್ದರೆ ನಾನು ಮಾತನಾಡುತ್ತೇನೆ ಎಂದರು.

ಬರೋಬ್ಬರಿ 16 ಕೊಲೆ ಬೆದರಿಕೆ ಪತ್ರ, ಸಾಹಿತಿ ಕುಂ.ವೀ.ಗೆ ಗನ್‌ಮ್ಯಾನ್‌ ಭದ್ರತೆ

ಕಳೆದ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ. ಒಂದೇ ತರಹ ಬರಹದ ಪತ್ರಗಳು ಬೇರೆ ಬೇರೆ ಭಾಗಗಳಿಂದ ಬರುತ್ತಿವೆ. ಈಗಾಗಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ಪತ್ರ ಬರೆಯುವವರ ಹಾಗೂ ನನ್ನ ಮಧ್ಯೆ ಯಾವುದೇ ದ್ವೇಷ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇಂತಹ ಕೊಲೆ ಬೆದರಿಕೆ ಪತ್ರಗಳನ್ನು ನಾನು ಪ್ರೇಮಪತ್ರಗಳೆಂದು ಭಾವಿಸಿದ್ದೇನೆ. ನನಗೆ ಸಾವಿನ ಬಗ್ಗೆ ಭಯವಿಲ್ಲ, ಸೇವೆ ಮಾಡುವುದು ನಿಲ್ಲುತ್ತದೆ ಎನ್ನುವ ಕೊರಗಷ್ಟೇ. ನಾನು ಸಮಾಜದ ಮಗ. ಈ ರೀತಿಯ ಪತ್ರಗಳಿಂದ ಭಕ್ತರಲ್ಲಿ ಆತಂಕ ಸಹಜ. ಪೊಲೀಸರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

- ಶ್ರೀ ನಿಜಗುಣಾನಂದ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪ

Follow Us:
Download App:
  • android
  • ios