ವೇತನ ಹೆಚ್ಚಿಸಲು ಆಶಾ ಸಿಬ್ಬಂದಿ ಮುಷ್ಕರ, 42000 ಸಿಬ್ಬಂದಿಯಿಂದ ಕೆಲಸ ಬಹಿಷ್ಕಾರ!
ಇಂದಿನಿಂದ ಆಶಾ ಸಿಬ್ಬಂದಿ ಮುಷ್ಕರ| 12 ಸಾವಿರಕ್ಕೆ ವೇತನ ಹೆಚ್ಚಿಸಲು ಆಗ್ರಹ| 42000 ಸಿಬ್ಬಂದಿಯಿಂದ ಕೆಲಸ ಬಹಿಷ್ಕಾರ
ಬೆಂಗಳೂರು(ಜು.10): ಗೌರವ ಧನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 42 ಸಾವಿರ ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಕೊರೋನಾ ನಿಯಂತ್ರಣದಲ್ಲಿ ಸಕ್ರಿಯರಾಗಿರುವ ಇವರ ಮುಷ್ಕರದಿಂದ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಗುತ್ತಿಗೆ ವೈದ್ಯರ ಮುಷ್ಕರ ತಣ್ಣಗಾಗುತ್ತಿದ್ದಂತೆಯೇ ಇದು ಸರ್ಕಾರಕ್ಕೆ ಇನ್ನೊಂದು ತಲೆನೋವಾಗಿ ಕಾಡಲಿದೆ.
"
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾಸಿಕ 6 ಸಾವಿರ ರು. ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ಒಟ್ಟಾಗಿ 12 ಸಾವಿರ ರು.ಗೆ ಏರಿಕೆ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆ ಸೇವೆ ಬಹಿಷ್ಕರಿಸಿ ಮುಷ್ಕರದ ಹಾದಿ ಹಿಡಿದಿದ್ದಾರೆ. ಜು.10ರಂದು ಆಯಾ ಜಿಲ್ಲೆಗಳು, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟಅಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ.
ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ
ಸರ್ಕಾರದ ಬಗ್ಗೆ ಕಿಡಿ:
‘ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಲೆಕ್ಕಿಸದೆ ಕೊರೋನಾ ಸೋಂಕು ತಡೆಯಲು ಹೋರಾಡುತ್ತಿದ್ದಾರೆ. ಸೋಂಕಿನಿಂದ ಮೂವರು ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದು, ಈವರೆಗೂ ಅವರ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ. ಜು.9ರ ಗುರುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆಯೂ ಫಲಪ್ರದವಾಗಿಲ್ಲ’ ಎಂದು ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೇ ಅಸಮಾಧಾನ ವ್ಯಕ್ತಪಡಿಸಿದರು.
ನರ್ಸ್, ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು
ಕೋವಿಡ್-19 ತಡೆಗಾಗಿ ತಮ್ಮ ಜೀವವನ್ನು ಒತ್ತೆಯಿಟ್ಟು ದಿನಕ್ಕೆ 80ರಿಂದ 90 ಮನೆಗಳಿಗೆ ಅಲೆದಾಡಿ ಸರ್ವೇ ಮಾಡುತ್ತಿದ್ದೇವೆ. ಕಳೆದ ನೂರು ದಿನಗಳಿಂದ ನಿರಂತರವಾಗಿ ಪಾಸಿಟಿವ್ ಪ್ರಕರಣಗಳಿರುವ ಪ್ರದೇಶಗಳಲ್ಲಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದರೂ ನಮಗೆ ಸುರಕ್ಷತಾ ಸೌಲಭ್ಯಗಳಿಲ್ಲ. ಸರ್ಕಾರ ಘೋಷಿಸಿರುವ 3000 ಪ್ಯಾಕೇಜ್ ಸಹ ಕೇವಲ ಶೇ.40ರಷ್ಟುಮಂದಿಗೆ ಮಾತ್ರ ತಲುಪಿದೆ ಎಂದು ನಾಗಲಕ್ಷ್ಮಿ ದೂರಿದರು.
ಬೇಡಿಕೆಗಳೇನು?
- 42 ಸಾವಿರ ಸಿಬ್ಬಂದಿಗೆ ಮಾಸಿಕ ಕನಿಷ್ಠ 12 ಸಾವಿರ ಗೌರವ ಧನ
- ಕೊರೋನಾ ತಗಲುವ ಸಿಬ್ಬಂದಿಗೆ ಉಚಿತ ಚಿಕಿತ್ಸೆ, ವಿಮೆ ಸೌಲಭ್ಯ
- ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಮತ್ತಿತರೆ ಸುರಕ್ಷತಾ ವ್ಯವಸ್ಥೆ
- ಕೊರೋನಾದಿಂದ ಸಾವನ್ನಪ್ಪಿದರೆ ಪರಿಹಾರ, ಕುಟುಂಬಕ್ಕೆ ರಕ್ಷಣೆ