ಪ್ರಾದೇಶಿಕ 20 ಚಲನಚಿತ್ರಗಳಿಗೆ ಹಿಂದೆ ಇದ್ದಂತೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿ ತುಳು ಚಿತ್ರಗಳಿಗೆ ಸಿಗುವ ಹಣದಲ್ಲಿ ತಾರತಮ್ಯ ಇತ್ಯಾದಿ ತುಳು ಚಿತ್ರರಂಗದ ಅಭಿವೃದ್ಧಿಗೆ ಹಲವು ಸಮಸ್ಯೆಗಳಿವೆ. 

ಮಂಗಳೂರು (ನ.15): ಪ್ರಾದೇಶಿಕ 20 ಚಲನಚಿತ್ರಗಳಿಗೆ ಹಿಂದೆ ಇದ್ದಂತೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿ ತುಳು ಚಿತ್ರಗಳಿಗೆ ಸಿಗುವ ಹಣದಲ್ಲಿ ತಾರತಮ್ಯ ಇತ್ಯಾದಿ ತುಳು ಚಿತ್ರರಂಗದ ಅಭಿವೃದ್ಧಿಗೆ ಹಲವು ಸಮಸ್ಯೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.24ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಂದರ್ಭ ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡುವುದಾಗಿ ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಾ.ಆರ್. ಧನರಾಜ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಮಾರಾಟದಿಂದ ಬರುವ ಆದಾಯದ ಹಂಚಿಕೆಯಲ್ಲಿ ತುಳು ಚಿತ್ರಗಳಿಗೆ ಕಡಿಮೆ ಆದಾಯ ಸಿಗುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ, ಎರಡನೇ ಮತ್ತು ಮೂರನೇ ವಾರದಲ್ಲಿ ಕನ್ನಡ ಮತ್ತು ಹಿಂದಿ ಚಲನಚಿತ್ರ ನಿರ್ಮಾಪಕರು ಟಿಕೆಟ್ ಮಾರಾಟದಿಂದ ತಲಾ ಶೇ.50, 47.5 ಮತ್ತು 45ರಷ್ಟು ಆದಾಯ ಪಡೆದರೆ, ತುಳು ಚಿತ್ರಗಳಿಗೆ ಕೇವಲ ಶೇ.50, 40 ಮತ್ತು 30ರಷ್ಟು ಮಾತ್ರವೇ ಸಿಗುತ್ತವೆ. ತುಳು ಚಿತ್ರಗಳಿಗೂ ಸಮಾನವಾದ ಆದಾಯ ದೊರೆಯಬೇಕಿದೆ. ಇಂತಹ ಅಸಮಾನತೆ ಹೋಗಲಾಡಿಸದಿದ್ದರೆ ತುಳು ಸಿನಿಮಾ ನಿರ್ಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದರು.

Guarantee ವಿರೋಧಿಸುವವರು ಬಡವರ ವಿರೋಧಿಗಳು: ಎಚ್‌ಡಿಕೆಗೆ ಸಿಎಂ ಸಿದ್ದು ಕಿಡಿ

ತುಳು ಚಲನಚಿತ್ರಗಳಿಗೆ ಪ್ರಮುಖ ಆದಾಯ ಮೂಲವಾಗಿದ್ದ ಮಂಗಳೂರಿನ ಜ್ಯೋತಿ ಥಿಯೇಟರ್‌ ನೆಲಸಮಗೊಂಡಿದ್ದರಿಂದ ದೊಡ್ಡ ಹೊಡೆತ ಬಿದ್ದಿದೆ. ಹೆಚ್ಚಿನ ಚಿತ್ರಮಂದಿರಗಳು ತುಳು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಪ್ರೋತ್ಸಾಹಿಸುತ್ತಿಲ್ಲ. ಥಿಯೇಟರ್‌ಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು ತುಳು ಸಿನಿಮಾಗಳಿಗೆ ಸಮನಾದ ಅವಕಾಶ ಒದಗಿಸಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಪ್ರತಿ ವರ್ಷ ಸಬ್ಸಿಡಿ ನೀಡುವ ಪ್ರಾದೇಶಿಕ ಚಲನಚಿತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಸ್ತುತ ವರ್ಷದಲ್ಲಿ ಒಂದು ಅಥವಾ ಎರಡು ತುಳು ಚಿತ್ರಗಳಿಗೆ ಮಾತ್ರ ಸಬ್ಸಿಡಿ ದೊರೆಯುತ್ತಿದ್ದು, ಅದೂ 2018ರಿಂದ ದೊರೆಯುತ್ತಿಲ್ಲ. ವರ್ಷದಲ್ಲಿ ಕನಿಷ್ಠ 10 ಚಿತ್ರಗಳಿಗೆ ಅನುದಾನ ದೊರೆತರೆ ತುಳು ಭಾಷೆಯಲ್ಲಿ ಹೆಚ್ಚು ಹೆಚ್ಚು ಸಿನಿಮಾ ನಿರ್ಮಾಣಕ್ಕೆ ಉತ್ತೇಜನ ಸಿಗಲಿದೆ ಎಂದರು.

ಸಾಲದ ಬಗ್ಗೆ ಮಾತಾಡಲು ಸಿದ್ದುಗೆ ಯಾವ ನೈತಿಕತೆ ಇದೆ?: ಎಚ್.ಡಿ.ಕುಮಾರಸ್ವಾಮಿ

ತುಳು ಚಲನಚಿತ್ರ ನಿರ್ಮಾಪಕರ ಸಂಘ ತಾತ್ಕಾಲಿಕ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದ ಧನರಾಜ್‌, ರಾಜ್ಯ ಸರ್ಕಾರ ಶಾಶ್ವತ ಕಚೇರಿ ನಿರ್ಮಿಸಲು ನಿವೇಶನ ನೀಡಬೇಕು. ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ತುಳು ಚಲನಚಿತ್ರಗಳನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಪರಿಗಣಿಸಬೇಕು, ಪ್ರಾದೇಶಿಕ ಚಿತ್ರಗಳಿಗೆ ಸಬ್ಸಿಡಿ ನೀಡುವ ಕಮಿಟಿಯಲ್ಲಿ ತುಳು ಭಾಷೆ ಬಲ್ಲ ನಿರ್ಮಾಪಕ, ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಕಿಶೋರ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ಸಚಿನ್ ಎ.ಎಸ್., ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ಪಮ್ಮಿ ಕೊಡಿಯಾಲಬೈಲ್‌ ಮತ್ತಿತರರು ಇದ್ದರು.