ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಕಟೀಲು ದೇವಸ್ಥಾನದ ನುಡಿಹಬ್ಬದಲ್ಲಿ ಪಾಲ್ಗೊಂಡು, ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ದೇವಳ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಇದೇ ವೇಳೆ ಬಾಲ್ಯದಲ್ಲ ನೆನಪುಗಳನ್ನು ಹಂಚಿಕೊಂಡರು.

ಮೂಲ್ಕಿ (ಜ.9): ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅನುಪಮವಾದುದು. ಹತ್ತು ವರುಷಗಳ ವರೆಗೆ ಯಕ್ಷಗಾನ ಸೇವೆ ನೋಂದಣಿ ಆಗಿರುವುದು, ವಾರ್ಷಿಕ ಹತ್ತು ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿರುವುದು ಅಭಿನಂದನೀಯ ಎಂದು ಸುಪ್ರಿಂಕೋರ್ಟ್‌ ನಿವೃತ್ತ ನ್ಯಾಯಾಧೀಶ, ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಹೇಳಿದರು.

Add Asianetnews Kannada as a Preferred SourcegooglePreferred

ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೂಹ ವಿದ್ಯಾಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ನುಡಿಹಬ್ಬದಲ್ಲಿ ಮಾತನಾಡಿದರು.

ಕಟೀಲು ದೇವಸ್ಥಾನಕ್ಕೆ ಬಂದರೆ ನಮ್ಮ ಮನೆಗೆ ಬಂದ ಅನುಭವ:

ಕಟೀಲು ದೇವಸ್ಥಾನಕ್ಕೆ ಬಂದರೆ ನಮ್ಮ ಮನೆಗೆ ಬಂದ ಅನುಭವವಾಗುತ್ತದೆ. ಬಾಲ್ಯದಲ್ಲಿ ಕಟೀಲಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿನ ಯಕ್ಷಗಾನ ಮೇಳಗಳ ಆಟ ನೋಡಿದ್ದೇನೆ. ದೇವಿ ಮಹಾತ್ಮೆ ಪ್ರಸಂಗ ಪ್ರಸಿದ್ಧವಾದುದು. ಇದನ್ನೂ ನೋಡಿದ್ದೇನೆ ಎಂದರು.

ಕಟೀಲಿನ ಪ್ರಕೃತಿ ಹರಿಯುವ ನಂದಿನಿಯಂತೆ ಪರಿಶುದ್ಧ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಕಟೀಲಿನ ಪ್ರಕೃತಿ ಹರಿಯುವ ನಂದಿನಿಯಂತೆ ಪರಿಶುದ್ಧವಾಗಿದೆ. ವಿವಿಧ ಕಲಾಪ್ರಕಾರಗಳು ಕರ್ನಾಟಕದ ಸಾಂಸ್ಕೃತಿಕತೆಯನ್ನು ಹೆಚ್ಚಿಸಿವೆ ಎಂದು ಅವರು ಹೇಳಿದರು.ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಅಬ್ದಲ್ ಕಲಾಂ ಅವರಂತೆ, ಸರಳ ವ್ಯಕ್ತಿತ್ವದ ಮಹಾ ಸಾಧಕರಾಗಿದ್ದು, ಅಪ್ರತಿಮ ರಾಷ್ಟ್ರಭಕ್ತರಾಗಿದ್ದಾರೆ ಎಂದರು.ನುಡಿಹಬ್ಬ ಸಮ್ಮೇಳನಾಧ್ಯಕ್ಷ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ದೇವಳದ ಆಡಳಿತ ಮಂಡಳಿಯ ಕಿಶೋರ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ವೇದಿಕೆಯಲ್ಲಿದ್ದರು.ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಸ್ವಾಗತಿಸಿದರು. ಉಪನ್ಯಾಸಕಿ ಶೈಲಜಾ ನಿರೂಪಿಸಿದರು.