ಹುತಾತ್ಮ ಯೋಧನ ಕುಟುಂಬಕ್ಕೆ ಸಿಎಂ ನಿವೇಶನ|  24 ವರ್ಷದಿಂದ ಅಲೆಯುತ್ತಿದ್ದ ಯೋಧನ ಪತ್ನಿಗೆ ಸಹಾಯಹಸ್ತ| ಕೆಂಪೇಗೌಡ ಲೇಔಟ್‌ನಲ್ಲಿ 30*40 ಸೈಟ್‌| 

ಬೆಂಗಳೂರು(ಏ.09): ಮಹಾಮಾರಿ ಕೊರೋನಾ ತುರ್ತು ಪರಿಸ್ಥಿತಿಯಲ್ಲೂ ಹುತಾತ್ಮ ಯೋಧನ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನೆರವು ನೀಡಿದ್ದು, ಕಳೆದ 24 ವರ್ಷಗಳಿಂದ ಸರ್ಕಾರದ ನಿವೇಶನಕ್ಕಾಗಿ ಅಲೆದಾಡುತ್ತಿದ್ದ ಹುತಾತ್ಮ ಯೋಧನ ಪತ್ನಿಗೆ ನಿವೇಶನ ಮಂಜೂರು ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಯೋಧ ಎ.ಮುನಿಯಪ್ಪನ್‌ 1996ರಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ನಿವೇಶನಕ್ಕಾಗಿ ಕುಟುಂಬ ಹೋರಾಟ ನಡೆಸುತ್ತಿದ್ದರೂ ನಿವೇಶನ ಸಿಕ್ಕಿರಲಿಲ್ಲ. ಈ ಮಧ್ಯ ಹುತಾತ್ಮ ಯೋಧನ ಪತ್ನಿ ಎಂ.ದೇವಿ ಅವರು ಸಹ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಜೀವನ್ಮರಣದ ಹೋರಾಟ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಗಂಡು ಮತ್ತು ಒಬ್ಬರು ಹೆಣ್ಣು ಮಗಳಿದ್ದಾರೆ. ಇವರು ಕೂಡ ತಮ್ಮ ಕೆಲಸ ಬಿಟ್ಟು ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಆರೈಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ನಿವೇಶನ ನೀಡುವಂತೆ ಸಾಕಷ್ಟುಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೈಗೂಡಿರಲಿಲ್ಲ.

ಕೊರೋನಾಗೆ ಇಂದಿಗೆ 1 ತಿಂಗಳು: ದೇಶದಲ್ಲೇ ನಂ.3 ಆಗಿದ್ದ ರಾಜ್ಯ ಈಗ ನಂ.11!

ಸಂಕಟದ ಪತ್ರ:

ಯೋಧನ ಪತ್ನಿ ಏ.6ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನಿವೇಶನ ಕಲ್ಪಿಸುವಂತೆ ಕೋರಿ ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ವತಿಯಿಂದ ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಕಾಯುತ್ತಿದ್ದೇನೆ. ಆದರೂ ನಿವೇಶನ ದೊರೆತಿಲ್ಲ. ಕಳೆದ 24 ವರ್ಷಗಳಿಂದ ಹೂ, ಹಣ್ಣು ಮಾರಿ ಮಕ್ಕಳನ್ನು ಸಾಕಿದ್ದೇನೆ. ಇದೀಗ ಕಳೆದ ಒಂದು ವರ್ಷದಿಂದ ನಾನು ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಶ್ವಾಸಕೋಶಗಳಿಗೂ ಕ್ಯಾನ್ಸರ್‌ ಹರಡಿರುವುದಾಗಿ ವೈದ್ಯರು ತಿಳಿಸಿರುವುದರಿಂದ ಹೆಚ್ಚಿನ ದಿನ ನಾನು ಜೀವಂತವಾಗಿ ಉಳಿಯುವುದಿಲ್ಲ. ಪ್ರತಿ ದಿನ ದಾನಿಗಳಿಂದ ರಕ್ತ ಪಡೆದು ಜೀವ ಉಳಿಸಿಕೊಂಡಿದ್ದೇನೆ ಎಂದು ಪತ್ರದಲ್ಲಿ ತನ್ನ ಸಂಕಟ ಹೇಳಿಕೊಂಡಿದ್ದರು.

Scroll to load tweet…

ಕಳೆದ ವರ್ಷ ಡಿ.6ರಂದು ನನ್ನ ಮಗಳು ನಿಮ್ಮನ್ನು (ಸಿಎಂ) ರಾಜಭವನದದಲ್ಲಿ ಭೇಟಿಯಾಗಿದ್ದ ವೇಳೆ ತಾವು ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ್ದೀರಿ. ಅದರಂತೆ ಜ.10ರಂದು 2020ರ ಹುತಾತ್ಮ ಯೋಧರಿಗೆ ಹಂಚಿಕೆಯಾಗಿರುವ ನಿವೇಶನ ಪಟ್ಟಿಯಲ್ಲಿ 30ಗಿ40 ಅಳತೆಯ ನಿವೇಶನ ಹಂಚಿಕೆಯಾಗಿರುವುದಾಗಿ ಹೆಸರು ಬಂದಿದೆ. ಆದರೆ, ಇಲ್ಲಿಯವರೆಗೂ ನಿವೇಶನ ಮಾತ್ರ ಹಂಚಿಕೆಯಾಗಿಲ್ಲ. ಕ್ಯಾನ್ಸರ್‌ ಕೊನೆಯ ಹಂತದಲ್ಲಿರುವುದರಿಂದ ಒಂದು ವೇಳೆ ನಾನು ನಿಧನ ಹೊಂದಿದ್ದಲ್ಲಿ ತಮ್ಮ ಮಕ್ಕಳಿಗೆ ನಿವೇಶನ ವಿತರಿಸುವಂತೆ ಪತ್ರ ಬರೆದು ಮನವಿ ಮಾಡಿದ್ದರು.

"

ಯೋಧನ ಪತ್ನಿಯ ಮನವಿಗೆ ಸ್ಪಂದಿಸಿದ ಬಿ.ಎಸ್‌. ಯಡಿಯೂರಪ್ಪ ತಕ್ಷಣ ನಿವೇಶನ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರ ಅನ್ವಯ ಬಿಡಿಎ ನಿವೇಶನ ಕಲ್ಪಿಸಿದೆ.

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ: ದೇವಿ​ಶೆಟ್ಟಿ ನೇತೃ​ತ್ವದ ಸಮಿತಿ ಶಿಫಾ​ರಸು!

ಸಂಸದ ರಾಜೀವ್‌ ಚಂದ್ರಶೇಖರ್‌ ಸಾಥ್‌

ದೇವಿ ಅವರ ಜೊತೆಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹಾಗೂ ಹುತಾತ್ಮ ಯೋಧ ‘ಮೇಜರ್‌ ಅಕ್ಷಯ್‌ ಗಿರೀಶ್‌ಕುಮಾರ್‌ ಸ್ಮಾರಕ ಟ್ರಸ್ಟ್‌’ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಬಿಡಿಎ ನಿವೇಶನ ಹಂಚಿಕೆ ಮಾಡಿದೆ. ಈ ಕುರಿತು ದೇವಿ ಅವರಿಗೆ ಪತ್ರ ಬರೆದಿರುವ ಬಿಡಿಎ ಆಯುಕ್ತರು, ಸೈನಿಕ ಕಲ್ಯಾಣ ಮತ್ತು ಪುನರ್‌ ವಸತಿ ಇಲಾಖೆ ನಿರ್ದೇಶಕರ ಶಿಫಾರಸಿನ ಮೇರೆಗೆ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಕೆಂಪೇಗೌಡ ಬಡಾವಣೆಯಲ್ಲಿ 30X40 ಅಳತೆ ನಿವೇಶನವನ್ನು ಉಚಿತವಾಗಿ ಹಂಚಿಕೆ ಮಾಡಿ ನೋಂದಣಿ ಮಾಡಿಕೊಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

"