ಮತ್ತೆ ನಾಲ್ವರು ಕಾಂಗ್ರೆಸಿಗರು ಬಿಜೆಪಿ ಸಂಪರ್ಕಕ್ಕೆ : ನಿಗೂಢ ನಡೆ
ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿಗೊಂಡವರು ಬಿಜೆಪಿ ಸಂಪರ್ಕದಲ್ಲಿರುವ ಬಗ್ಗೆ ಶಂಕೆ ಮೂಡಿದ್ದು, ಈ ನಿಗೂಢ ನಡೆಯ ಸಂಬಂಧ ಇದೀಗ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು : ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಬಗ್ಗೆ ಸ್ಪಷ್ಟನೆ ನೀಡಿ ಅನಂತರ ಮತ್ತೆ ಅಡಗುತಾಣ ಸೇರಿಕೊಂಡ ತನ್ನ ನಾಲ್ಕು ಮಂದಿ ಅತೃಪ್ತ ಶಾಸಕರಿಗೆ ಕಾಂಗ್ರೆಸ್ ಮತ್ತೆ ನೋಟಿಸ್ ನೀಡಿದೆ. ಈ ಬಾರಿ ಖುದ್ದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.
ತನ್ಮೂಲಕ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಾರದ ಈ ಶಾಸಕರು ಈಗ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖ ಹಾಜರಾಗುವುದನ್ನು ಅನಿವಾರ್ಯ ಮಾಡಿದ್ದು, ಒಂದು ವೇಳೆ ಹಾಜರಾಗದ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಅವಕಾಶವನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ.
ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಬಗ್ಗೆ ಪಕ್ಷ ನೀಡಿದ್ದ ನೋಟಿಸ್ಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಉತ್ತರ ನೀಡಿದ್ದು, ವೈಯಕ್ತಿಕ ಕಾರಣಗಳ ನೆಪ ಮುಂದೊಡ್ಡಿದ್ದರು. ಜತೆಗೆ, ತಾವು ಬಿಜೆಪಿ ಜತೆ ಸಂಪರ್ಕ ಹೊಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಇದೆಲ್ಲ ಸತ್ಯಕ್ಕೆ ದೂರವಾದ ಸಂಗತಿಗಳಾಗಿದ್ದು, ತಾವು ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಈ ಘಟನೆ ಬಗ್ಗೆ ಖುದ್ದಾಗಿ ಕಾಂಗ್ರೆಸ್ ನಾಯಕರಾಗಲಿ ಅಥವಾ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವರಣೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿಯವರು ಸೋಮವಾರ ಈ ನಾಲ್ಕು ಮಂದಿ ಶಾಸಕರಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಮತ್ತೆ ಅಡಗುತಾಣಕ್ಕೆ ಅತೃಪ್ತರು?:
ರಮೇಶ್ ಜಾರಕಿಹೊಳಿ ನೇತೃತ್ವದ ಈ ನಾಲ್ಕು ಮಂದಿ ಶಾಸಕರು ಇನ್ನೂ ಬಿಜೆಪಿ ಸಂಪರ್ಕದಲ್ಲಿಯೇ ಇದ್ದಾರೆ ಎಂಬ ಗುಮಾನಿ ಕಾಂಗ್ರೆಸ್ ನಾಯಕತ್ವಕ್ಕೆ ಇದೆ. ಇದಕ್ಕೆ ಪೂರಕವಾಗಿ ಈ ನಾಲ್ಕು ಮಂದಿ ಶಾಸಕರು ಶೋಕಾಸ್ ನೋಟಿಸ್ಗೆ ಸ್ಪಷ್ಟನೆ ನೀಡಿದ ನಂತರ ಕಾಂಗ್ರೆಸ್ ವಲಯದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಈ ಶಾಸಕರು ಮತ್ತೆ ತಮ್ಮ ಅಡಗುತಾಣ ಸೇರಿಕೊಂಡಿದ್ದಾರೆ ಎಂಬ ಆಶಂಕೆಯಲ್ಲಿರುವ ಕಾಂಗ್ರೆಸ್ ನಾಯಕತ್ವವು, ಅಲ್ಲಿಂದ ಹೊರಗೆ ಬಂದು ತಮ್ಮ ಸಂಪರ್ಕಕ್ಕೆ ಬರಲಿ ಎಂಬ ಕಾರಣಕ್ಕೆ ನೋಟಿಸ್ ನೀಡಿದೆ ಎನ್ನಲಾಗಿದೆ.
ಒಂದು ಬಾರಿ ನಾಯಕರ ಸಂಪರ್ಕಕ್ಕೆ ಬಂದರೆ ಅವರ ಮನವೊಲಿಸುವ ಪ್ರಯತ್ನ ಮಾಡಬಹುದು. ಒಂದು ವೇಳೆ ಮನವೊಲಿಕೆಗೆ ಜಗ್ಗದ ಪಕ್ಷದಲ್ಲಿ ಈ ನಾಲ್ವರ ಪೈಕಿ ಒಂದಿಬ್ಬರಿಗಾದರೂ ಪಕ್ಷಾಂತರ ವಿರೋಧಿ ಕಾಯ್ದೆ ಅಡಿ ಶಿಸ್ತು ಕ್ರಮ ಕೈಗೊಳ್ಳುವ ಮನಸ್ಥಿತಿಯಲ್ಲೂ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ನಾಲ್ಕು ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೋಟಿಸ್ಗೆ ಪತ್ರದ ಮೂಲಕ ವಿವರಣೆ ನೀಡಿದ್ದಾರೆ. ಅವರಿಗೆ ಸಿದ್ದರಾಮಯ್ಯ ಎದುರು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್ ನೀಡಿದ್ದೇವೆ.
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ