13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ
ಪ್ರಸ್ತುತ ರಾಜ್ಯದಲ್ಲಿ 57 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆಯಿದ್ದು, ನ್ಯಾಯಾಲಯದ ಸೂಚನೆ ಮತ್ತು ಅಗತ್ಯಕ್ಕೆ ಪೂರಕವಾಗಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
![Action for recruitment of 13 thousand teachers Says Minister Madhu Bangarappa gvd Action for recruitment of 13 thousand teachers Says Minister Madhu Bangarappa gvd](https://static-ai.asianetnews.com/images/01h1rrt5wv0b31e1vzh78raarg/adea_363x203xt.jpg)
ತೀರ್ಥಹಳ್ಳಿ (ಜೂ.29): ಪ್ರಸ್ತುತ ರಾಜ್ಯದಲ್ಲಿ 57 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆಯಿದ್ದು, ನ್ಯಾಯಾಲಯದ ಸೂಚನೆ ಮತ್ತು ಅಗತ್ಯಕ್ಕೆ ಪೂರಕವಾಗಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕು ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿ, ಶಿಕ್ಷಣ ಇಲಾಖೆ ಅತ್ಯಂತ ದೊಡ್ಡ ಇಲಾಖೆಯಾಗಿದೆ. ಕೆಲವೊಂದು ಸಮಸ್ಯೆಯನ್ನು ನಾವೇ ತಂದುಕೊಂಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 87 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಮತ್ತು ಪೋಷಕರ ಸಹಕಾರವೂ ಅಗತ್ಯವಿದೆ ಎಂದರು. ತಾಲೂಕಿನಲ್ಲಿ ಹಿಂದುಳಿದ ವರ್ಗದ ಗಂಡುಮಕ್ಕಳಿಗೆ ಹಾಸ್ಟೆಲ್ ಕೊರತೆ ಇರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ಬಾಲಕರ ಹಾಸ್ಟೆಲ್ಗೆ ಸೂಕ್ತವಾದ ಕಟ್ಟಡ ಸಿದ್ಧವಿದೆ. ಸರ್ಕಾರದ ಕಡೆಯಿಂದ ಹಾಸ್ಟೆಲ್ ಮಂಜೂರಾತಿ ಮತ್ತು ಸಿಬ್ಬಂದಿ ನೇಮಕಾತಿಯನ್ನು ಮಾಡಬೇಕಿದೆ ಎಂದರು.
ವಿಧಾನಸಭೆಯಲ್ಲಿ ನಾನು ಕಿಮ್ಮನೆ ರತ್ನಾಕರ್ ಜೊತೆಯಲ್ಲಿ ಕೂರಬೇಕಾಗಿತ್ತು: ಸಚಿವ ಮಧು ಬಂಗಾರಪ್ಪ
ಅರಣ್ಯ ಇಲಾಖೆ ಅಧಿಕಾರಿಗಳು ಕೋರ್ಟ್ ಆದೇಶದ ನೆಪದಲ್ಲಿ ರೈತರು ಹತ್ತಾರು ವರ್ಷ ಶ್ರಮಪಟ್ಟು ಮಕ್ಕಳಂತೆ ಸಹಿಸದ ಅಡಕೆ ಮರಗಳನ್ನು ನಿರ್ದಯಿಗಳಂತೆ ಕಡಿದು ಹಾಕಬಾರದು. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಹಕ್ಕು ಪಡೆಯುವ ಸಾಧ್ಯತೆ ಇದೆ ಎಂಬುದನ್ನು ಗಮನದಲ್ಲಿಕೊಂಡು ಜನಪರವಾಗಿ ಕಾರ್ಯನಿರ್ವಹಿಸಿ ಎಂದೂ ಆಗ್ರಹಿಸಿದರು. ಶಾಸಕ ಆರಗ ಜ್ಞಾನೇಂದ್ರ ತಾಲೂಕಿನ ಶಿಕ್ಷಣ, ಕೃಷಿ ಮುಂತಾದ ವಿಚಾರಗಳ ಕುರಿತಂತೆ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕ ಕುರಿತಂತೆ ಮಾತನಾಡಿ, ಅತಿಥಿ ಶಿಕ್ಷಕ ನೇಮಕಾತಿ ಅಧಿಕಾರ ಡಿಡಿಪಿಐಗಳಿಗೆ ಕೊಡುವುದು ಸೂಕ್ತ. ತಾಲೂಕಿನಲ್ಲಿ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ ಇದೆ. ಆದರೆ ಶಿವಮೊಗ್ಗ ಭದ್ರಾವತಿ ಭಾಗದಲ್ಲಿ ಎಲ್ಲ ಇಲಾಖೆಗಳೂ ಭರ್ತಿಯಾಗಿವೆ. ಅಂಥವರನ್ನು ತಾಲೂಕು ಕೇಂದ್ರಕ್ಕೆ ವರ್ಗಾಯಿಸಿ ಸಿಬ್ಬಂದಿ ಕೊರತೆ ಹೋಗಲಾಡಿಸುವ ಪ್ರಯತ್ನ ಮಾಡಬೇಕಿದೆ. ಬಹುತೇಕ ಎಲ್ಲ ತಾಲೂಕುಗಳಲ್ಲೂ ಇದೇ ಸಮಸ್ಯೆ ಇದೆ ಎಂದು ಸಚಿವರು ಹೇಳಿದರು.
ಕುಡಿವ ನೀರು ಅಭಾವ ಆಗದಿರಲಿ: ಮುಂಗಾರು ಆರಂಭವಾಗಿ ತಿಂಗಳು ಕಳೆದಿದ್ದರೂ ಮಳೆಯಾಗದ ಕಾರಣ ಜಿಲ್ಲಾದ್ಯಂತ ನೀರಿನ ಆಭಾವ ಉಂಟಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚಿಸಿದರು. ಸಚಿವರಾಗಿ ಮಂಗಳವಾರ ಪ್ರಥಮ ಬಾರಿಗೆ ತೀರ್ಥಹಳ್ಳಿ ತಾಲೂಕಿಗೆ ಆಗಮಿಸಿದ ಮಧು ಬಂಗಾರಪ್ಪ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಿ ಎಂದರು.
ಆರೋಗ್ಯ ಇಲಾಖೆ ಚೆನ್ನಾಗಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು: ಸಚಿವ ದಿನೇಶ್ ಗುಂಡೂರಾವ್
ಮಳೆ ಆರಂಭಗೊಳ್ಳುವುದು ಇನ್ನೂ ವಿಳಂಬವಾದರೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಹಾನಿಗಳ ಸಂದರ್ಭದಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಬಡವರ ಮನೆ ಆಸ್ತಿ ಹಾನಿ ಬಗ್ಗೆ ಸ್ವಲ್ಪಮಟ್ಟಿನ ಉದಾರತೆ ತೋರುವುದು ಅಗತ್ಯ ಎಂದರು.